2023: 16 ಅಂಪೈರ್‌, 4 ರೆಫರಿಗಳ ನೇಮಕ ದುಬೈ: ಭಾರತದ ನಿತಿನ್ ಮೆನನ್ ಮತ್ತು ಜಾವಗಲ್ ಶ್ರೀನಾಥ್ ಅವರು ಮುಂದಿನ ತಿಂಗಳು ಆರಂಭವಾಗಲಿರುವ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಕ್ರಮವಾಗಿ ಅಂಪೈರ್ ಹಾಗೂ ರೆಫರಿಯಾಗಿ ನೇಮಕವಾಗಿದ್ದಾರೆ. ಅಕ್ಟೋಬರ್ 5ರಂದು ನಡೆಯುವ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ನಡುವಣ ಉದ್ಘಾಟನೆ ಪಂದ್ಯದಲ್ಲಿ ನಿತಿನ್ ಮತ್ತು ಶ್ರೀನಾಥ್ ಅವರು ಕಾರ್ಯನಿರ್ವಹಿಸುವರು. ಪಾಲ್ ವಿಲ್ಸನ್ ಮತ್ತು ಸೈಕತ್ ಅವರು ಕ್ರಮವಾಗಿ ಟಿ.ವಿ ಹಾಗೂ ನಾಲ್ಕನೇ ಅಂಪೈರ್ ಆಗಿರುವರು. ಈ ಟೂರ್ನಿಯಲ್ಲಿ ಕಾರ್ಯನಿರ್ವಹಿಸಲು 16 ಅಂಪೈರ್‌ಗಳನ್ನು ಆಯ್ಕೆ ಮಾಡಲಾಗಿದೆ. ಅದರಲ್ಲಿ 12 ಮಂದಿ ಐಸಿಸಿಯ ಎಮಿರೆಟ್ಸ್‌ ಎಲೀಟ್ ಪ್ಯಾನಲ್‌ ಅಂಪೈರ್‌ಗಳಾಗಿದ್ದಾರೆ. ಐಸಿಸಿ ಉದಯೋನ್ಮುಖ ಅಂಪೈರ್‌ ಪ್ಯಾನಲ್‌ನಿಂದ ನಾಲ್ವರು ಆಯ್ಕೆಯಾಗಿದ್ದಾರೆ. 2019ರ ವಿಶ್ವಕಪ್ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಕಾರ್ಯನಿರ್ವಹಿಸಿದ್ದ ಕುಮಾರ ಧರ್ಮಸೇನ, ಮರೈಸ್ ಎರಸ್ಮಸ್ ಹಾಗೂ ರಾಡ್ ಟಕರ್ ಅವರೂ ಈ ತಂಡದಲ್ಲಿದ್ದಾರೆ. ಆದರೆ ಪಾಕಿಸ್ತಾನದ ಅಲೀಂ ದಾರ್ ಒಬ್ಬರು ಇಲ್ಲ. ಅವರು ಈಚೆಗೆ ನಿವೃತ್ತರಾಗಿದ್ದರು. ಕನ್ನಡಿಗ ಜಾವಗಲ್ ಶ್ರೀನಾಥ್, ಜೆಫ್ ಕ್ರೋವ್, ಆ್ಯಂಡಿ ಪೈಕ್ರಾಫ್ಟ್ ಹಾಗೂ ರಿಚಿ ರಿಚರ್ಡ್ಸನ್ ಅವರು ರೆಫರಿಗಳ ಪ್ಯಾನಲ್‌ನಲ್ಲಿ ದ್ದಾರೆ. ಲೀಗ್ ಹಂತದ ಪಂದ್ಯಗಳಿಗೆ ಮಾತ್ರ ಈ ನೇಮಕವನ್ನು ಮಾಡಲಾಗಿದೆ. ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳಿಗೆ ನಂತರ ನೇಮಕ ಮಾಡಲಾಗುವುದು ಎಂದು ಐಸಿಸಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಅಂಪೈರ್‌ಗಳು: ನಿತಿನ್ ಮೆನನ್, ಕ್ರಿಸ್ ಬ್ರೌನ್, ಕುಮಾರ ಧರ್ಮಸೇನ, ಮರೈಸ್ ಯರಸ್ಮಸ್, ಕ್ರಿಸ್ ಗಫಾನಿ, ಮಿಚೆಲ್ ಗಾಫ್, ಆಡ್ರಿಯನ್ ಹೋಲ್ಡ್‌ಸ್ಟಾಕ್, ರಿಚರ್ಡ್ ಇಲಿಂಗ್‌ವರ್ಥ್‌, ರಿಚರ್ಡ್‌ ಕೆಟಲ್‌ಬರೊ, ಎಹಸಾನ್ ರಝಾ, ಪಾಲ್ ರೀಫೆಲ್, ಶರ್ಫುದ್ದೌಲಾ ಇಬ್ನಿ ಶೈದ್ ಸೈಕತ್, ರಾಡ್ ಟಕರ್, ಅಲೆಕ್ಸ್ ವಾರ್ಫ್‌, ಜೊಯೆಲ್ ವಿಲ್ಸನ್, ಪಾಲ್ ವಿಲ್ಸನ್. ನಿತಿನ್ ಮೆನನ್ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.