ಟಿ20 ಮಾದರಿಯಲ್ಲಿ ಟೀಮ್ ಇಂಡಿಯಾಗೆ ಹೊಸ ನಾಯಕ: ರವಿ ಶಾಸ್ತ್ರಿ ಒಲವು ನವದೆಹಲಿ: ಟೀಮ್ ಇಂಡಿಯಾದಲ್ಲಿ ಎಲ್ಲ ಮಾದರಿಯ ಕ್ರಿಕೆಟ್‌ಗೆ ವಿಭಿನ್ನ ನಾಯಕ ನೀತಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಯಾವತ್ತೂ ಅನುಸರಿಸಿಲ್ಲ. ಆದರೆ ಟ್ವೆಂಟಿ-20 ಮಾದರಿಗೆ ಹೊಸ ನಾಯಕನನ್ನು ಆರಿಸಿದರೆ ಅದರಲ್ಲಿ ಯಾವುದೇ ಹಾನಿಯಿಲ್ಲ ಎಂದು ಮಾಜಿ ಕೋಚ್ ರವಿ ಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ. ಇತ್ತೀಚೆಗೆ ಅಂತ್ಯಗೊಂಡ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಸೋಲು ಅನುಭವಿಸಿದ್ದ ಟೀಮ್ ಇಂಡಿಯಾದ ಟ್ರೋಫಿ ಕನಸು ಭಗ್ನಗೊಂಡಿತ್ತು. ಇದರೊಂದಿಗೆ ಟಿ20 ಪ್ರಕಾರಕ್ಕೆ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕರಾಗಿಸಬೇಕು ಎಂಬ ಬೇಡಿಕೆ ಕೇಳಿಬಂದಿವೆ. ಇದು ರೋಹಿತ್ ಶರ್ಮಾ ಮೇಲಿನ ಹೊರೆ ಕಡಿಮೆ ಮಾಡಲು ನೆರವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಈ ಕುರಿತು ಮಾಜಿ ಕ್ರಿಕೆಟಿಗ ರವಿ ಶಾಸ್ತ್ರಿ ಹೇಳಿಕೆಯನ್ನು ಸುದ್ದಿಸಂಸ್ಥೆ 'ಎನ್‌ಡಿಟಿವಿ' ವರದಿ ಮಾಡಿದೆ. ಇದನ್ನೂ ಓದಿ:ವಿಶ್ಲೇಷಣೆ | ಭಾರತದ ಕ್ರಿಕೆಟಿಗರಿಗೆ ಬೇಕೇ ವಿದೇಶಿ ಲೀಗ್? ಟಿ20 ಮಾದರಿಗೆ ಹೊಸ ನಾಯಕನನ್ನು ಆರಿಸುವುದರಿಂದ ಯಾವುದೇ ಹಾನಿಯಿಲ್ಲ. ಏಕೆಂದರೆ ಕ್ರಿಕೆಟ್ ಪ್ರಮಾಣ ಜಾಸ್ತಿಯಾಗಿದ್ದು, ಓರ್ವ ಆಟಗಾರನಿಗೆ ಎಲ್ಲ ಮೂರು ಪ್ರಕಾರದ ಕ್ರಿಕೆಟ್ ಆಡುವುದು ಅಷ್ಟು ಸುಲಭವಲ್ಲ. ರೋಹಿತ್ ಈಗಾಗಲೇ ಟೆಸ್ಟ್ ಹಾಗೂ ಏಕದಿನದಲ್ಲಿ ಮುಂದುವರಿದರೆ, ಹೊಸ ಟಿ20 ನಾಯಕನನ್ನು ಗುರುತಿಸುವುದಲ್ಲಿ ಯಾವುದೇ ತಪ್ಪಿಲ್ಲ ಎಂದು ರವಿ ಶಾಸ್ತ್ರಿ ಹೇಳಿದ್ದಾರೆ. ಅಲ್ಲದೆ ಹಾರ್ದಿಕ್ ಪಾಂಡ್ಯ ಟಿ20 ನಾಯಕರಾಗುವ ಬೇಡಿಕೆಗೂ ರವಿ ಶಾಸ್ತ್ರಿ ಒಲವು ತೋರಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.