T20I: ಶುಭಾರಂಭದ ಮೇಲೆ ಹಾರ್ದಿಕ್ ಬಳಗದ ಚಿತ್ತ ಮೌಂಟ್ ಮಾಂಗನೆ: ಹಾರ್ದಿಕ್ ಪಾಂಡ್ಯ ನಾಯಕತ್ವದ ಭಾರತ ತಂಡವು ಭಾನುವಾರ ಇಲ್ಲಿ ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಎರಡು ದಿನಗಳ ಹಿಂದೆ ವೆಲ್ಲಿಂಗ್ಟನ್‌ನಲ್ಲಿ ನಡೆಯಬೇಕಿದ್ದ ಮೊದಲ ಪಂದ್ಯವು ಮಳೆಯಿಂದಾಗಿ ರದ್ದಾಗಿತ್ತು. ಆದ್ದರಿಂದ ಇನ್ನುಳಿದ ಎರಡು ಪಂದ್ಯಗಳಲ್ಲಿ ಸರಣಿ ಜಯ ಸಾಧಿಸುವ ಸವಾಲು ಉಭಯ ತಂಡಗಳಿಗೆ ಇದೆ. ಭಾನುವಾರದ ಪಂದ್ಯದಲ್ಲಿ ಗೆದ್ದವರಿಗೆ ಸರಣಿ ಕಿರೀಟ ಒಲಿಸಿಕೊಳ್ಳುವ ಅವಕಾಶ ಹೆಚ್ಚು. ಆದ್ದರಿಂದ ಈ ಪಂದ್ಯ ಮಹತ್ವದ್ದಾಗಲಿದೆ. ಭಾರತ ತಂಡವು ತನ್ನ ಬೌಲಿಂಗ್ ವಿಭಾಗದಲ್ಲಿ ಕೆಲವು ಪ್ರಯೋಗಗಳಿಗೆ ಮುಂದಾಗುವ ಸಾಧ್ಯತೆ ಇದೆ. ಅನುಭವಿ ಬೌಲರ್ ಭುವನೇಶ್ವರ್ ಕುಮಾರ್ ಅವರು ಕಳೆದ ಕೆಲವು ದಿನಗಳಿಂದ ಸತತ ವೈಫಲ್ಯ ಅನುಭವಿಸುತ್ತಿದ್ದಾರೆ. ಇಲ್ಲಿ ಅವರಿಗೆ ತಮ್ಮ ಲಯ ಕಂಡುಕೊಳ್ಳಲು ಮತ್ತೊಂದು ಅವಕಾಶ ಸಿಗುವುದೇ ಕಾದು ನೋಡಬೇಕು. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿದಂತೆ ಕೆಲವು ಅನುಭವಿ ಆಟಗಾರರು ವಿಶ್ರಾಂತಿ ಪಡೆದಿರುವುದರಿಂದ ಯುವ ಆಟಗಾರರಿಗೆ ಮಿಂಚಲು ಇದು ಸದವಕಾಶವಾಗಿದೆ. ಆರಂಭಿಕ ಬ್ಯಾಟಿಂಗ್ ಜೋಡಿಯನ್ನು ಸಿದ್ಧಗೊಳಿಸುವ ಪ್ರಯೋಗಕ್ಕೂ ಈ ಸರಣಿ ವೇದಿಕೆಯಾಗಲಿದೆ. ತಂಡದಲ್ಲಿ ಮೂವರು ವಿಕೆಟ್‌ಕೀಪರ್ ಬ್ಯಾಟರ್‌ಗಳಾದ ರಿಷಭ್ ಪಂತ್, ಇಶಾನ್ ಕಿಶನ್ ಹಾಗೂ ಸಂಜು ಸ್ಯಾಮ್ಸನ್ ಇದ್ದಾರೆ. ಈಚೆಗೆ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಸೆಮಿಫೈನಲ್‌ ಹಂತದಲ್ಲಿ ಸೋತಿದ್ದವು. ಚುಟುಕು ಕ್ರಿಕೆಟ್‌ ವಿಭಾಗದಲ್ಲಿ ಹೊಸದಾಗಿ ತಂಡವನ್ನು ಕಟ್ಟುವತ್ತ ಎರಡೂ ದೇಶಗಳು ಈ ಸರಣಿಯನ್ನು ವೇದಿಕೆಯಾಗಿ ಮಾಡಿಕೊಂಡಿವೆ. ತಂಡಗಳು ಭಾರತ: ಹಾರ್ದಿಕ್ ಪಾಂಡ್ಯ (ನಾಯಕ), ರಿಷಭ್ ಪಂತ್, ಇಶಾನ್ ಕಿಶನ್, ಶುಭಮನ್ ಗಿಲ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಭುವನೇಶ್ವರ್ ಕುಮಾರ್, ಆರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್. ನ್ಯೂಜಿಲೆಂಡ್: ಕೇನ್ ವಿಲಿಯಮ್ಸನ್ (ನಾಯಕ), ಫಿನ್ ಅಲೆನ್, ಮೈಕೆಲ್ ಬ್ರೆಸ್‌ವೆಲ್, ಡೆವೊನ್ ಕಾನ್ವೆ (ವಿಕೆಟ್‌ಕೀಪರ್), ಲಾಕಿ ಫರ್ಗ್ಯುಸನ್, ಡೆರಿಲ್ ಮಿಚೆಲ್, ಆ್ಯಡಂ ಮಿಲ್ನೆ, ಜಿಮ್ಮಿ ನಿಶಾಮ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟನರ್, ಟಿಮ್ ಸೌಥಿ, ಈಶ್ ಸೌಧಿ, ಬ್ಲೇರ್ ಟಿಕ್ನರ್. ಪಂದ್ಯ ಆರಂಭ: ಮಧ್ಯಾಹ್ನ 12ರಿಂದ ನೇರಪ್ರಸಾರ: ಅಮೆಜಾನ್‌ ಪ್ರೈಮ್ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.