ಭಾರತ ಕ್ರಿಕೆಟ್‌ ತಂಡದ ವಿಕೆಟ್‌ಕೀಪರ್‌ ಪಂತ್‌ ಮೊಣಕಾಲಿಗೆ ಶಸ್ತ್ರಚಿಕಿತ್ಸೆ ನವದೆಹಲಿ (ಪಿಟಿಐ): ಕಾರು ಅಪಘಾತದಲ್ಲಿ ಗಾಯಗೊಂಡಿರುವ ಭಾರತ ಕ್ರಿಕೆಟ್‌ ತಂಡದ ವಿಕೆಟ್‌ಕೀಪರ್‌ ಬ್ಯಾಟರ್‌ ರಿಷಭ್‌ ಪಂತ್‌ ಅವರು ಮುಂಬೈನ ಆಸ್ಪತ್ರೆಯಲ್ಲಿ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾದರು. ‘ರಿಷಭ್ ಮಂಡಿಯ ಲಿಗಮೆಂಟ್‌ ಶಸ್ತ್ರಚಿಕಿತ್ಸೆ ಶುಕ್ರವಾರ ಯಶಸ್ವಿಯಾಗಿ ನಡೆದಿದ್ದು, ಕೆಲವು ದಿನ ಅವರ ಮೇಲೆ ವೈದ್ಯರು ನಿಗಾ ಇಡಲಿದ್ದಾರೆ. ಮರುಚೈತನ್ಯ ಹಾಗೂ ಮುಂದೆ ವಹಿಸಬೇಕಿರುವ ಆರೋಗ್ಯ ಕಾಳಜಿಯ ಬಗ್ಗೆ ಡಾ.ದಿನ್‌ಶಾ ಪಾರದೀವಾಲಾ ಮತ್ತು ಬಿಸಿಸಿಐ ವೈದ್ಯಕೀಯ ತಂಡದ ಸಲಹೆ ನೀಡಲಿದೆ’ ಎಂದು ಮಂಡಳಿಯ ಪ್ರಕಟಣೆ ತಿಳಿಸಿದೆ. ಕೋಕಿಲಾಬೆನ್‌ ಧೀರೂಭಾಯಿ ಅಂಬಾನಿ ಆಸ್ಪತ್ರೆಯಲ್ಲಿ ಡಾ.ದಿನ್‌ಶಾ ನೇತೃತ್ವದ ವೈದ್ಯರ ತಂಡ ಶಸ್ತ್ರಚಿಕಿತ್ಸೆ ನಡೆಸಿದೆ. 25 ವರ್ಷದ ಪಂತ್‌ ಅವರು ದೆಹಲಿ–ಡೆಹ್ರಾಡೂನ್‌ ಹೆದ್ದಾರಿಯಲ್ಲಿ ಡಿ.30 ರಂದು ಬೆಳಿಗ್ಗೆ ಸಂಭವಿಸಿದ್ದ ಅಪಘಾತದಲ್ಲಿ ಗಾಯಗೊಂಡಿದ್ದರು. ರಸ್ತೆ ವಿಭಜಕಕ್ಕೆ ಅಪ್ಪಳಿಸಿದ್ದ ಕಾರು ಸುಟ್ಟು ಹೋಗಿದ್ದರೂ, ಅವರು ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದರು. ಕೆಲವು ದಿನ ಡೆಹ್ರಾಡೂನ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಅವರನ್ನು ಆ ಬಳಿಕ ಏರ್‌ ಆಂಬುಲೆನ್ಸ್‌ನಲ್ಲಿ ಮುಂಬೈಗೆ ಕರೆತರಲಾಗಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.