ಭಾರತ–ನ್ಯೂಜಿಲೆಂಡ್ ಹಣಾಹಣಿ ಇಂದು: ರೋಹಿತ್ ಬಳಗಕ್ಕೆ ಕಿವೀಸ್ ಸವಾಲು ಹೈದರಾಬಾದ್: ಶ್ರೀಲಂಕಾ ಎದುರಿನ ಸರಣಿ ಜಯದ ಸಂಭ್ರಮದಲ್ಲಿರುವ ಭಾರತ ತಂಡ ಬುಧವಾರ ನ್ಯೂಜಿಲೆಂಡ್ ಸವಾಲು ಎದುರಿಸಲು ಸಿದ್ಧವಾಗಿದೆ. ಆದರೆ, ಬೆನ್ನುನೋವಿನಿಂದಾಗಿ ಮಧ್ಯಮಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ಇಲ್ಲದೇ ತಂಡವು ಕಣಕ್ಕಿಳಿಯಲಿದೆ. ಏಕದಿನ ಕ್ರಿಕೆಟ್ ಸರಣಿಯ ಮೂರು ಪಂದ್ಯಗಳಿಗೂ ಶ್ರೇಯಸ್ ಅಲಭ್ಯರಾಗಿದ್ದಾರೆ. ಅವರ ಬದಲಿಗೆ ರಜತ್ ಪಾಟೀದಾರ್ ಬಳಗದಲ್ಲಿ ಸ್ಥಾನ ಪಡೆದಿದ್ದಾರೆ. ಕಳೆದ ಸರಣಿಯಲ್ಲಿ ಮಧ್ಯಮಕ್ರಮಾಂಕದಲ್ಲಿ ಆಡಿದ್ದ ಕೆ.ಎಲ್. ರಾಹುಲ್ ಕೂಡ ವಿಶ್ರಾಂತಿ ಪಡೆದಿದ್ದು, ವಿಕೆಟ್‌ಕೀಪರ್ ಇಶಾನ್ ಕಿಶನ್ ಆಡುವ ಸಾಧ್ಯತೆ ಇದೆ. ನಾಯಕ ರೋಹಿತ್ ಮತ್ತು ಸ್ಥಿರತೆ ಕಾಪಾಡಿಕೊಂಡಿರುವ ಶುಭಮನ್ ಗಿಲ್ ಜೋಡಿಯೇ ಇನಿಂಗ್ಸ್ ಆರಂಭಿಸುವುದು ಖಚಿತ. ಶ್ರೀಲಂಕಾ ಎದುರು ಒಂದು ಅರ್ಧಶತಕ ಹಾಗೂ ಶತಕ ಗಳಿಸಿರುವ ಗಿಲ್ ಆಯ್ಕೆಗಾರರ ವಿಶ್ವಾಸ ಉಳಿಸಿಕೊಂಡಿದ್ದಾರೆ. ‘ರನ್‌ ಯಂತ್ರ’ ವಿರಾಟ್ ಕೊಹ್ಲಿ ಮತ್ತೆ ತಮ್ಮ ಲಯಕ್ಕೆ ಮರಳಿದ್ದು ಶತಕ ಗಳಿಸಿದ್ದಾರೆ. ಅವರಲ್ಲದೇ ಸೂರ್ಯಕುಮಾರ್ ಯಾದವ್, ಅಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಇರುವುದರಿಂದ ಬ್ಯಾಟಿಂಗ್ ವಿಭಾಗ ಬಲಿಷ್ಠವಾಗಿದೆ. ಬೌಲಿಂಗ್‌ ವಿಭಾಗದಲ್ಲಿ ಸಿರಾಜ್, ಶಮಿ, ಸ್ಪಿನ್ನರ್ ಕುಲದೀಪ್ ಮತ್ತು ಚಾಹಲ್ ಉತ್ತಮ ಲಯದಲ್ಲಿರುವುದು ತಂಡದಲ್ಲಿ ಹುಮ್ಮಸ್ಸು ಹೆಚ್ಚಿಸಿದೆ. ಕಿವೀಸ್ ಬಳಗದಲ್ಲಿ ಅನುಭವಿಗಳಾದ ಕೇನ್ ವಿಲಿಯಮ್ಸನ್ ಮತ್ತು ಟಿಮ್ ಸೌಥಿ ಅವರು ಈ ಸರಣಿಯಲ್ಲಿ ಆಡುತ್ತಿಲ್ಲ. ಅದರಿಂದಾಗಿ ಟಾಮ್ ಲಥಾಮ್ ನಾಯಕತ್ವ ವಹಿಸುತ್ತಿದ್ದಾರೆ. ನ್ಯೂಜಿಲೆಂಡ್ ತಂಡವು ಪಾಕಿಸ್ತಾನದಲ್ಲಿ ನಡೆದ ಸರಣಿಯಲ್ಲಿ ಆಡಿದ ನಂತರ ಭಾರತಕ್ಕೆ ಬಂದಿಳಿದಿದೆ. ಪಾಕ್ ಸರಣಿಯಲ್ಲಿ ಗ್ಲೆನ್ ಫಿಲಿಪ್ಸ್ ಅಮೋಘವಾಗಿ ಆಡಿದ್ದರು. ಅವರನ್ನು ಕಟ್ಟಿಹಾಕುವುದು ಆತಿಥೇಯ ಬೌಲರ್‌ಗಳ ಮುಂದಿರುವ ಪ್ರಮುಖ ಸವಾಲು. ತಂಡಗಳು ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಇಶಾನ್ ಕಿಶನ್ (ವಿಕೆಟ್‌ಕೀಪರ್), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಕೆ.ಎಸ್. ಭರತ್ (ವಿಕೆಟ್‌ಕೀಪರ್), ರಜತ್ ಪಾಟೀದಾರ್, ವಾಷಿಂಗ್ಟನ್ ಸುಂದರ್, ಶಹಬಾಜ್ ಅಹಮದ್, ಶಾರ್ದೂಲ್ ಠಾಕೂರ್, ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್ ನ್ಯೂಜಿಲೆಂಡ್: ಟಾಮ್ ಲಥಾಮ್ (ನಾಯಕ), ಫಿನ್ ಅಲೆನ್, ಡಫ್ ಬ್ರೆಸ್‌ವೆಲ್, ಮಿಚೆಲ್ ಬ್ರೆಸ್‌ವೆಲ್, ಮಾರ್ಕ್ ಚಾಪ್‌ಮನ್, ಡೆವೊನ್ ಕಾನ್ವೆ, ಜೇಕಬ್ ಡಫಿ, ಲಾಕಿ ಫರ್ಗ್ಯುಸನ್, ಡೆರಿಲ್ ಮಿಚೆಲ್, ಹೆನ್ರಿ ನಿಕೊಲ್ಸ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟನರ್, ಹೆನ್ರಿ ಶಿಪ್ಲಿ, ಈಶ್ ಸೋಧಿ, ಬ್ಲೇರ್ ಟಿಕ್ನರ್ ಪಂದ್ಯ ಆರಂಭ: ಮಧ್ಯಾಹ್ನ 1.30 ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.