ಸೀಮಾಂಧ್ರದ ರಾಜಧಾನಿಯಾಗಿ ವಿಜಯವಾಡ ಆ. 1: ಈಸ್ಟ್‌ ಬೆಂಗಾಲ್‌ ಕ್ಲಬ್‌ ನೀಡುವ 2014ನೇ ಸಾಲಿನ ‘ಭಾರತ್‌ ಗೌರವ್‌’ ಪ್ರಶಸ್ತಿಯನ್ನು ಬಚೇಂದ್ರಿ ಪಾಲ್‌ ಅವರಿಗೆ ನೀಡಲಾಯಿತು. ಬಚೇಂದ್ರಿ ಪಾಲ್‌ ಮೌಂಟ್‌ ಎವರೆಸ್ಟ್‌ ಶಿಖರ ಹತ್ತಿದ ಭಾರತದ ಮೊದಲ ಮಹಿಳೆ. ಆ. 2: 2014ನೇ ಸಾಲಿನ ರಾಜೀವ್ ಗಾಂಧಿ ಸದ್ಭಾವನ ಪ್ರಶಸ್ತಿಗೆ ಹಿರಿಯ ಸಾಮಾಜಿಕ ಸೇವಾಕರ್ತ ಮುಜಾಫರ್‌ ಆಲಿ ಆಯ್ಕೆಯಾದರು. ಆಲಿ ಅವರು ಕೋಮುವಾದದ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಆ. 3: ಗ್ಲಾಸ್ಗೊದಲ್ಲಿ ನಡೆದ ಕಾಮನ್‌ವೆಲ್ತ್‌ ಕ್ರೀಡಾಕೂಟಕ್ಕೆ ತೆರೆ ಬಿದ್ದಿತು. ಈ ಟೂರ್ನಿಯಲ್ಲಿ ಭಾರತ ಒಟ್ಟು 64 ಪದಕಗಳನ್ನು ಗೆಲ್ಲುವ ಮೂಲಕ ಐದನೇ ಸ್ಥಾನ ಪಡೆಯಿತು. ಆ. 3: ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಪಿ.ಕಶ್ಯಪ್‌ ಪುರುಷರ ಸಿಂಗಲ್ಸ್‌ ಬ್ಯಾಡ್ಮಿಂಟನ್‌ ಪಂದ್ಯದಲ್ಲಿ ಚಿನ್ನದ ಪದಕ ಗೆದ್ದರು. ಕಾಮನ್‌ವೆಲ್ತ್‌ ಕ್ರೀಡಾಕೂಟಗಳಲ್ಲಿ ಬ್ಯಾಡ್ಮಿಂಟನ್‌ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಮೂರನೇ ಆಟಗಾರ ಎಂಬ ಹೆಗ್ಗಳಿಕೆ ಕಶ್ಯಪ್‌ ಅವರದ್ದು. ಆ. 4: ಮಾಜಿ ವಿದೇಶಾಂಗ ಅಧಿಕಾರಿ ಅರವಿಂದ್‌ ಗುಪ್ತ ಅವರನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ಭದ್ರತಾ ಉಪ ಸಲಹೆಗಾರರನ್ನಾಗಿ ನೇಮಕ ಮಾಡಿತು. ಗುಪ್ತ ಈ ಹಿಂದೆ ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ ಮತ್ತು ಮಧ್ಯಪ್ರಾಚ್ಯ ದೇಶಗಳಲ್ಲಿ ರಾಯಭಾರಿಯಾಗಿ ಕಾರ್ಯನಿರ್ವಹಿಸಿದ್ದರು. ಆ. 5: ಖ್ಯಾತ ಕಾರ್ಟೂನಿಸ್ಟ್‌ ‘ಪ್ರಾಣ್‌’ ನಿಧನರಾದರು. ಅವರು ರಚಿಸಿದ ಧಾರಾವಾಹಿ (ಕಾರ್ಟೂನ್‌) ‘ಚಾಚಾ ಚೌಧರಿ’ ಭಾರಿ ಜನಪ್ರಿಯತೆ ಪಡೆದಿತ್ತು. ಆ. 6: ಹೂಡಿಕೆ ಮತ್ತು ವಾಣಿಜ್ಯ ವಿಷಯಗಳಿಗೆ ಸಂಬಂಧಿಸಿದಂತೆ ಸೆಕ್ಯೂರಿಟಿಸ್‌ ಲಾ ವಿಧೇಯಕವನ್ನು ಲೋಕಸಭೆಯಲ್ಲಿ ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು. ಆ. 7; ಮಾಜಿ ಕ್ರಿಕೆಟಿಗ ಕಪಿಲ್‌ದೇವ್‌ ಅವರನ್ನು ಅರ್ಜುನ ಪ್ರಶಸ್ತಿಯ ಆಯ್ಕೆ ಸಮಿತಿಯ ಮುಖ್ಯಸ್ಥರನ್ನಾಗಿ ಮತ್ತು ಮಾಜಿ ಹಾಕಿ ಆಟಗಾರ ಅಜಿತ್‌ಪಾಲ್‌ ಸಿಂಗ್‌ ಅವರನ್ನು ‘ದ್ರೋಣಾಚಾರ್ಯ ಪ್ರಶಸ್ತಿಯ ಆಯ್ಕೆ ಸಮಿತಿಯ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಯಿತು. ಆ. 8: ಕಾರ್ಖಾನೆಗಳು ಸಿಲಿಕಾನ್‌ ಬಳಸಿದ ನಂತರ ಅದರ ತ್ಯಾಜ್ಯವನ್ನು ಏನು ಮಾಡುತ್ತವೇ ಎಂಬುದನ್ನು ತಿಳಿಯಲು ಉತ್ತರಖಂಡ ಸರ್ಕಾರ ಹಿರಿಯ ವಿಜ್ಞಾನಿ ಎಸ್‌. ರಾಜಾ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿತು. ಆ. 10: ಪೊಲ್ಯಾಂಡ್‌ನಲ್ಲಿ ನಡೆದ ವಿಶ್ವಕಪ್‌ ಅರ್ಚರಿಯಲ್ಲಿ ಭಾರತದ ಮಹಿಳಾ ತಂಡ ಚಿನ್ನದ ಪದಕವನ್ನು ಗೆದ್ದಿತು. ದೀಪಿಕಾ ಕುಮಾರಿ ಈ ತಂಡದ ನಾಯಕಿಯಾಗಿದ್ದರು. ಆ. 11: ಭಾರತದ ಮೊದಲ ಲೋಕಸಭೆಗೆ ಆಯ್ಕೆಯಾಗಿದ್ದ ಹಿರಿಯ ರಾಜಕಾರಣಿ ರೇಷ್ಮಾಲಾಲ್‌ ಜಂಗಡೆ ನಿಧನರಾದರು. ಮೂಲತಃ ಮಧ್ಯಪ್ರದೇಶ ರಾಜ್ಯದವರಾದ ಇವರು ಕಾಂಗ್ರೆಸ್‌ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ಆ. 12: ರಾಜ್ಯದ ಜನಪ್ರಿಯ ಜಾನಪದ ಕಲಾವಿದೆ ಬುರ್ರಾ ಕಥಾ ಈರಮ್ಮ ನಿಧನರಾದರು. ಇವರು ಬಳ್ಳಾರಿ ಜಿಲ್ಲೆಯವರು. ಆ.12: ಅತ್ಯುತ್ತಮ ಸಂಸದೀಯ ಪಟು ಪ್ರಶಸ್ತಿಗೆ ಬಿಜೆಪಿಯ ಹಿರಿಯ ನಾಯಕ ಅರುಣ್‌ ಜೇಟ್ಲಿ, ಕಾಂಗ್ರೆಸ್‌ನ ಕರಣ್‌ ಸಿಂಗ್‌ ಮತ್ತು ಸಂಯುಕ್ತ ಜನತಾದಳ ಪಕ್ಷದ ಶರದ್‌ ಯಾದವ್‌ ಅವರನ್ನು ಆಯ್ಕೆ ಮಾಡಲಾಯಿತು. ಈ ಪ್ರಶಸ್ತಿಯನ್ನು ರಾಷ್ಟ್ರಪತಿ ನೀಡುತ್ತಾರೆ. ಆ. 13: ಭಾರತೀಯ ರಿಸರ್ವ್‌ ಬ್ಯಾಂಕ್‌ನ ಮಾಜಿ ಗೌರ್ನರ್‌ ಭೀಮಲ್‌ ಜಲನ್‌ ಅವರನ್ನು ‘ವೆಚ್ಚ ವ್ಯವಸ್ಥಾಪನ ಮಂಡಳಿ’ಯ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಯಿತು. ಆ.13: ಲೋಕಸಭೆಯ ಡೆಪ್ಯೂಟಿ ಸ್ಪೀಕರ್‌ ಆಗಿ ಎಂ. ತಂಬಿದೊರೈ ಆಯ್ಕೆಯಾಗಿದ್ದಾರೆ. ಇವರು ಎಐಎಡಿಎಂಕೆ ಪಕ್ಷದ ಸಂಸದರು. ಆ.13: ಸೀಮಾಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ವಿಜಯವಾಡ ಆಂಧ್ರದ ರಾಜಧಾನಿಯಾಗಲಿದೆ ಎಂದು ಪ್ರಕಟಿಸಿದರು. ಆ.14: ಭಾರತವು ಮೊದಲ ಭಾರಿಗೆ 2015ರ ಪ್ಯಾರಾ–ಗ್ಲೈಡಿಂಗ್‌ ವಿಶ್ವಕಪ್‌ನ ಆತಿಥ್ಯ ವಹಿಸಲಿದೆ. ಇದು ಹಿಮಾಚಲ ಪ್ರದೇಶದಲ್ಲಿ ನಡೆಯಲಿದೆ. ಆ. 14: ಇರಾಕ್‌ ಪ್ರಧಾನಿ ನೂರಿ ಅಲ್‌–ಮಲಿಕಿ ಅವರು ರಾಜೀನಾಮೆ ನೀಡಿದರು. ಆ. 15: ಕೇಂದ್ರ ಸರ್ಕಾರ 60 ವರ್ಷಕ್ಕೂ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಪಿಂಚಣಿ ನೀಡುವ ಭೀಮಾ ಯೋಜನೆಯನ್ನು ಅನುಷ್ಠಾನಗೊಳಿಸುವುದಾಗಿ ಪ್ರಕಟಿಸಿತು. ಆ.16: ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷರಾಗಿ ರಜನಿ ರಾಜ್ದಾನ್‌ ಅವರನ್ನು ನೇಮಕ ಮಾಡಲಾಯಿತು. ಆ.17: ಚಿಂಚಿನಾಟಿ ಟೆನಿಸ್‌ ಓಪನ್‌ ಟೂರ್ನಿಯ ಪುರುಷರ ಸಿಂಗಲ್ಸ್‌ ಪಂದ್ಯದಲ್ಲಿ ರೋಜರ್‌ ಫೇಡರರ್‌ ಚಿಂಚಿನಾಟಿ ಟ್ರೋಫಿ ಗೆದ್ದರು. ಆ ಮೂಲಕ ಅವರು ಒಟ್ಟು 80 ಅಂತರರಾಷ್ಟ್ರೀಯ ಟ್ರೋಫಿಗಳನ್ನು ಗೆದ್ದಂತಾಗಿದೆ. ಆ. 18: ಬ್ರೆಜಿಲ್‌ನ ಅಧ್ಯಕ್ಷೀಯ ಅಭ್ಯರ್ಥಿ ಎಡ್ವರ್ಡೊ ಕಾಂಪೊಸ್‌ ನಿಗೂಢವಾಗಿ ಸಾವನ್ನಪ್ಪಿರುವ ವಿಷಯವನ್ನು ಬ್ರೆಜಿಲ್‌ ಸರ್ಕಾರ ಖಚಿತಪಡಿಸಿತು. ಕಾಂಪೊಸ್‌ ಆಗಸ್ಟ್‌ 13ರಂದು ಮೃತಪಟ್ಟಿದ್ದರು. ಆ. 19: ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ಅವರನ್ನು ಭಾರತೀಯ ಕ್ರಿಕೆಟ್‌ ತಂಡದ ನಿರ್ದೇಶಕರನ್ನಾಗಿ ನೇಮಕ ಮಾಡಲಾಯಿತು. ಆ. 22; ಕರ್ನಾಟಕದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಯು.ಆರ್‌. ಅನಂತಮೂರ್ತಿ ನಿಧನರಾದರು. ಅವರಿಗೆ 82 ವರ್ಷ ವಯಸ್ಸಾಗಿತ್ತು. ಅವರ ಸಂಸ್ಕಾರ ಕಾದಂಬರಿ 15ಕ್ಕೂ ಹೆಚ್ಚು ಭಾರತೀಯ ಮತ್ತು ವಿದೇಶಿ ಭಾಷೆಗಳಿಗೆ ಅನುವಾದಗೊಂಡಿದೆ. ಆ.24: ಗಾಂಧಿ ಚಿತ್ರವನ್ನು ನಿರ್ಮಾಣ ಮಾಡಿದ್ದ ರಿಚರ್ಡ್‌ ಅಟೆನ್‌ಬರ್ಗ್‌ ಅವರು ಲಂಡನ್‌ನಲ್ಲಿ ನಿಧನರಾದರು. ಈ ಚಿತ್ರ ಆಸ್ಕರ್‌ ಪ್ರಶಸ್ತಿಯನ್ನು ಪಡೆದಿತ್ತು. ಆ. 25: ವಿಶ್ವದಲ್ಲಿಯೇ ಮೊದಲ ಬಳಕೆಯ ತಾಮ್ರ ಲೋಹವು ಇಸ್ರೇಲ್‌ ದೇಶದಲ್ಲಿ ಪತ್ತೆಯಾಗಿದೆ. ಇಲ್ಲಿಯೇ ಮಾನವನ ಮೊದಲ ನಾಗರಿಕತೆ ಆರಂಭವಾಗಿರಬಹುದು ಎಂದು ಇತಿಹಾಸ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆ. 26: ಕರ್ನಾಟಕದ ರಾಜ್ಯಪಾಲರನ್ನಾಗಿ ವಜುಬಾಯಿ ವಾಲ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿತು. ಆ 28: ಕೇಂದ್ರ ಸರ್ಕಾರ ಡಾಟ್‌ ಕಾಮ್‌, ಡಾಟ್‌ ಇನ್‌ ಡೊಮೈನ್‌ಗಳ ಮಾದರಿಯಂತೆ ‘ಡಾಟ್‌ ಭಾರತ್‌’ ಡೊಮೈನ್‌ ಅನ್ನು ಲೋಕಾರ್ಪಣೆ ಮಾಡಿತು. ಇದು ದೇವನಾಗರಿ ಭಾಷೆಯಲ್ಲಿ ಸಹ ಲಭ್ಯವಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.