ಹಿಂತಿರುಗಿ ನೋಡಿದಾಗ ಖುಷಿ ಎನಿಸುತ್ತದೆ... ಹೆಣ್ಣು ಮಕ್ಕಳು ಕ್ರಿಕೆಟ್‌ ಆಡಬಾರದು. ಮನೆಯಲ್ಲೇ ಇರಬೇಕು, ಓದಬೇಕು ಇತ್ಯಾದಿ ಸಾಂಪ್ರದಾಯಿಕ ಅಭಿಪ್ರಾಯ ಹೊಂದಿರುವ ಅಪ್ಪಂದಿರ ಸಂಖ್ಯೆಯೇ ಹೆಚ್ಚು. ಆದರೆ ತಮ್ಮ ತಂದೆ ಆ ತೆರನಾಗಿ ಯೋಚಿಸಿದವರಲ್ಲ ಎನ್ನುತ್ತಾರೆ ರಾಜೇಶ್ವರಿ. ಅವರ ಕ್ರೀಡಾ ಆಸಕ್ತಿಗೆ ಅವರ ತಂದೆ ಉತ್ತೇಜನ ನೀಡಿದರು. ರಾಷ್ಟ್ರ ತಂಡದಲ್ಲಿ ಸ್ಥಾನ ಪಡೆಯಬೇಕಾದರೆ ತಾವು ಬಹಳ ಏಳುಬೀಳುಗಳನ್ನು ಕಾಣಬೇಕಾಯಿತು ಎನ್ನುವ ರಾಜೇಶ್ವರಿ ಗಾಯಕವಾಡ್‌ ಅವರೊಂದಿಗೆ ಬಿ.ಆರ್‌. ಮಾನಸ ನಡೆಸಿದ ಸಂದರ್ಶನ ಇಲ್ಲಿದೆ... ನ್ಯೂಜಿಲೆಂಡ್‌ ಎದುರಿನ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ 8 ವಿಕೆಟ್‌ ಪಡೆದ ಕರ್ನಾಟಕದ ರಾಜೇಶ್ವರಿ ಗಾಯಕವಾಡ್‌ ಬಡತನದ ಹಿನ್ನೆಲೆಯಿಂದ ಬಂದವರು. ತಮ್ಮ ತಂದೆ ಪ್ರಾಥಮಿಕ ಶಾಲಾ ಅಧ್ಯಾಪಕರಾದರೂ ಐದು ಮಕ್ಕಳಿರುವ ಕುಟುಂಬದಲ್ಲಿ ಯಾರಿಗೂ ಏನೂ ಕಡಿಮೆಯಾಗದಂತೆ ಬೆಳೆಸಿದರು. ಹೀಗಾಗಿ ತಾವೂ ಎತ್ತರಕ್ಕೆ ಏರಲು ಸಾಧ್ಯವಾಯಿತು ಎನ್ನುವುದು ರಾಜೇಶ್ವರಿ ಅವರ ಮನದ ಮಾತು.. *ನಿಮಗೆ ಕ್ರಿಕೆಟ್‌ ಆಸಕ್ತಿ ಬಂದಿದ್ದು ಹೇಗೆ. ಮತ್ತು ನಿಮ್ಮ ಮೊದಲ ಗುರು ಯಾರು? ಅಪ್ಪನ ಪ್ರೋತ್ಸಾಹದಿಂದ ಹಾಗೂ ವಿಜಯಪುರದ ಕೋಚ್‌ ಅಶೋಕ್‌ ಜಾಧವ್‌ ಮತ್ತು ಬಸವರಾಜ್‌ ಇಜೇರಿ ಅವರ ಉತ್ತೇಜನದಿಂದ ನನಗೆ ಈ ಕ್ರೀಡೆಯಲ್ಲಿ ಆಸಕ್ತಿ ಕುದುರಿತು. *ಭಾರತ ತಂಡಕ್ಕೆ ಆಯ್ಕೆಯಾದ ಬಗ್ಗೆ ಹೇಳಿ? 2014ರ ಚಾಲೆಂಜರ್ಸ್‌ ಟೂರ್ನಿಯಲ್ಲಿ ಇಂಡಿಯಾ ಬ್ಲೂ ತಂಡದಲ್ಲಿ ಆಡಿದೆ. ಅಲ್ಲಿ ನಾನು ಉತ್ತಮವಾಗಿ ಆಡಿದ್ದರಿಂದ ಭಾರತ ತಂಡಕ್ಕೆ ಆಯ್ಕೆಯಾದೆ. *ಮೊದಲು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಆಡಬೇಕಾದರೆ ನಿಮಗಿರುವ ತರಬೇತಿ ಕಡಿಮೆ ಅನಿಸಲಿಲ್ಲವೇ? ನಾನು ಇಲ್ಲಿಯವರೆಗೂ ಶ್ರೀಲಂಕಾ, ಇಂಗ್ಲೆಂಡ್‌, ದಕ್ಷಿಣ ಆಫ್ರಿಕಾ ಹಾಗೂ ನ್ಯೂಜಿಲೆಂಡ್‌ ಸೇರದಂತೆ ಐದು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ್ದೇನೆ. ನ್ಯೂಜಿಲೆಂಡ್‌ ತಂಡ ಬ್ಯಾಟಿಂಗ್‌ನಲ್ಲಿ ಚೆನ್ನಾಗಿದೆ. ನಾವು ಹೆಚ್ಚು ಸ್ಥಳೀಯ ಟೂರ್ನಿಗಳಲ್ಲಿ ಆಡುತ್ತೇವೆ. ಆಗ ನಮ್ಮ ಬೌಲಿಂಗ್‌ಗೆ ಇಲ್ಲಿಯ ಆಟಗಾರರು ರನ್‌ ಹೊಡೆಯುವುದಿಲ್ಲ. ಇದರಿಂದ ನಮ್ಮ ಬೌಲಿಂಗ್‌ ಚೆನ್ನಾಗಿದೆ ಅನ್ನುವ ಭ್ರಮೆಯಲ್ಲಿ ಇರುತ್ತೇವೆ. ಆದರೆ ಬೇರೆ ರಾಷ್ಟ್ರದ ತಂಡಗಳ ಜೊತೆ ಆಡಿದಾಗ ಮಾತ್ರ ನಮ್ಮ ನೈಜ ಸಾಮರ್ಥ್ಯದ ಅರಿವು ಬರುವುದು. ಬೇರೆ ದೇಶದ ಆಟಗಾರರಿಗೆ ಅದೇ ರೀತಿ ಬೌಲ್‌ ಮಾಡಿದರೆ ಸಿಕ್ಸರ್‌ ಖಚಿತ. ಅದಕ್ಕೇ ಹೆಚ್ಚು ಶ್ರಮ ಪಡಬೇಕು. ಪರಿಣಾಮಕಾರಿಯಾಗಿ ಬೌಲಿಂಗ್ ಮಾಡಬೇಕು. ರಾಜ್ಯ ತಂಡದ ಕೋಚ್‌ ಕಲ್ಪನಾ ವೆಂಕಟಾಚಾರ್ಯ ಹಾಗೂ ಗಾಯತ್ರಿ ಅವರು ನನಗೆ ತುಂಬಾ ಸಹಾಯ ಮಾಡಿದರು. ಅವರ ಬೆಂಬಲ ಇಲ್ಲದಿದ್ದರೆ ನಾನು ಭಾರತ ತಂಡದಲ್ಲಿ ಆಡಲು ಸಾಧ್ಯವಾಗುತ್ತಿರಲಿಲ್ಲ. *ನಿಮ್ಮ ತಂಡ ಅತ್ಯಂತ ಸಮರ್ಥವಾಗಿದೆ ಅಂತ ಅನ್ನಿಸುತ್ತಾ? ಖಂಡಿತಾ ಸಮರ್ಥವಾಗಿದೆ. ನ್ಯೂಜಿಲೆಂಡ್‌ ಅತೀವ ಕೌಶಲ್ಯದಿಂದ ಆಡುವ ಆಟಗಾರ್ತಿಯರನ್ನು ಹೊಂದಿದ ತಂಡವೇನೂ ಅಲ್ಲ. ಆದರೆ ನಮ್ಮ ತಂಡದ ಆಟಗಾರ್ತಿಯರು ತಾಂತ್ರಿಕವಾಗಿ ಹೆಚ್ಚು ಪರಿಣತರು. ನ್ಯೂಜಿಲೆಂಡ್‌ ವನಿತೆಯರಿಗಿಂತ ನಮ್ಮ ಕೌಶಲವೇ ಉತ್ತಮವಾಗಿದೆ. *ವಿಶ್ವಕಪ್‌ಗೆ ಅರ್ಹತೆ ಗಳಿಸುವ ನಂಬಿಕೆ ಇದೆಯಾ? ಖಂಡಿತಾ ನಂಬಿಕೆ ಇದೆ. ನ್ಯೂಜಿಲೆಂಡ್‌ ಎದುರಿನ ಏಕದಿನ ಸರಣಿ ಗೆದ್ದ ಮೇಲೆ ವಿಶ್ವಾಸ ಇನ್ನೂ ಹೆಚ್ಚಿದೆ. ಖಂಡಿತಾ ವಿಶ್ವಕಪ್‌ನಲ್ಲಿ ಆಡುತ್ತೇವೆ. *ನಿಮ್ಮ ಕುಟುಂಬದಲ್ಲಿ ಯಾರಾದರೂ ಕ್ರಿಕೆಟ್ ಆಡುತ್ತಾರಾ? ನಿಮಗೆ ಯಾಕೆ ಕ್ರಿಕೆಟ್‌ ಆಯ್ಕೆ ಮಾಡಿಕೊಳ್ಳಬೇಕು ಅನ್ನಿಸಿತು. ನಮ್ಮ ಕುಟುಂಬದಲ್ಲಿ ನಾನೇ ಮೊದಲು ಕ್ರಿಕೆಟ್ ಆಡಿದ್ದು. ನಮ್ಮದು ಮಧ್ಯಮ ವರ್ಗದ ಕುಟುಂಬ. ನಮ್ಮ ತಂದೆ ಇಂತಹದ್ದನ್ನೇ ಆಡಿ, ಹೀಗೆಯೇ ಇರಿ ಅಂತ ಯಾವತ್ತೂ ಹೇಳಿದವರಲ್ಲ. ಹುಡುಗಿಯರು ಆಟ ಆಡಬಾರದು ಅಂತ ಯೋಚಿಸದವರೂ ಅಲ್ಲ. ಅಕ್ಕ ಹಾಕಿ ಆಡುತ್ತಿದ್ದರು. ಇಬ್ಬರು ಸಹೋದರರು ವಾಲಿಬಾಲ್‌, ಟೆನಿಸ್‌ ಆಡುತ್ತಿದ್ದರು. ಇನ್ನೊಬ್ಬ ತಬಲ ನುಡಿಸುವುದರಲ್ಲಿ ನಿಷ್ಣಾತ. ಅವನಿಗೆ ಮೂರು ರಾಜ್ಯ ಪ್ರಶಸ್ತಿಗಳೂ ಸಿಕ್ಕಿವೆ. ನಮ್ಮ ಆಯ್ಕೆಯನ್ನು ಅಪ್ಪಾಜಿ ಗೌರವಿಸುತ್ತಿದ್ದರು. ಅವರ ಬೆಂಬಲದಿಂದ ನಾನು ಇವತ್ತು ಈ ಮಟ್ಟಿಗೆ ಬೆಳೆದಿದ್ದೇನೆ. ಅವರು ಕಳೆದ ವರ್ಷ ತೀರಿ ಹೋದರು. ಈಗ ನನ್ನ ತಂಗಿ ರಾಮೇಶ್ವರಿ ಗಾಯಕ್‌ವಾಡ್‌ ಇಂಡಿಯಾ ಗ್ರೀನ್‌ ತಂಡಕ್ಕೆ ಆಡಿದ್ದಾಳೆ. ನಾನು ಕಷ್ಟ ಪಟ್ಟು ಈ ಹಂತಕ್ಕೆ ತಲುಪಿದ್ದೇನೆ. ಈವರೆಗೆ ಸಾಗಿದ ದಾರಿಯನ್ನು ಈಗ ನೆನಸಿಕೊಂಡರೆ ಖುಷಿಯಾಗುತ್ತದೆ. *ಮಹಿಳಾ ಕ್ರಿಕೆಟ್‌ಗೆ ಉತ್ತೇಜನ ಸಿಗುತ್ತಿಲ್ಲ ಎನ್ನುವವರಿದ್ದಾರಲ್ಲ? ನನಗೆ ಹಾಗೆ ಅನ್ನಿಸಲ್ಲ. ಈಗ ನ್ಯೂಜಿಲೆಂಡ್ ಮೇಲೆ ಗೆದ್ದಿದ್ದೇವೆ. ಇದರಿಂದ ಹೆಚ್ಚು ಹೆಚ್ಚು ಅವಕಾಶ ಸಿಗುತ್ತೆ. ಸೋತರೆ ಹಾಗೂ ಚೆನ್ನಾಗಿ ಆಡದಿದ್ದರೆ ಅವಕಾಶಗಳು ಕಡಿಮೆ. ಮೊದಲು ಮಹಿಳೆಯರ ಕ್ರಿಕೆಟ್ ತಂಡ ಇದೆ ಅನ್ನೋದು ಎಷ್ಟೋ ಜನಕ್ಕೆ ಗೊತ್ತಿರಲಿಲ್ಲ. ಈಗ ವಾಹಿನಿಗಳಲ್ಲಿ ನೇರ ಪ್ರಸಾರ ಮಾಡುತ್ತಾರೆ. ಜನ ನೋಡಿ ಪ್ರೋತ್ಸಾಹಿಸುತ್ತಾರೆ. *ತವರಿನಲ್ಲಿ ನ್ಯೂಜಿಲೆಂಡ್‌ ಎದುರು ಜಯಗಳಿಸಿದಾಗಿನ ಅನುಭವ? ಅದೊಂದು ರೋಮಾಂಚನ ಕ್ಷಣ. ನಮ್ಮ ಸ್ನೇಹಿತರು. ಕುಟುಂಬದವರು ಆಟ ನೋಡೋಕೆ ಬಂದಿರುತ್ತಾರೆ. ಅವರ ಎದುರು ಆಡಿ ಗೆಲ್ಲುವುದಕ್ಕೂ ಅದೃಷ್ಟ ಬೇಕು. ಅಲ್ಲದೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ನಾವು ದಿನನಿತ್ಯ ತರಬೇತಿ ಪಡೆಯುವುದು. ಇದು ನಮಗೆ ಮನೆ ಅಂಗಳ ಆಗಿದೆ. ಆದ್ದರಿಂದ ಪಿಚ್‌ ಬಗ್ಗೆಯೂ ಮಾಹಿತಿ ಇದೆ. ಮೊದಲು ಆಡಿದ ಅನುಭವವೂ ಇದೆ. ಇಲ್ಲಿ ಗೆದ್ದರೆ ಸಂತೋಷ ಆಗುವುದು ಸಹಜ. *ಬಿಸಿಸಿಐ ಮಹಿಳೆಯರ ಕ್ರಿಕೆಟ್‌ಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿಲ್ಲ ಅಂತಾರಲ್ಲ? ನನಗೆ ಹಾಗೆ ಅನ್ನಿಸಲ್ಲ. *ಮುಂಬರುವ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಗೆ ನಿಮ್ಮ ತಯಾರಿ ಹೇಗಿದೆ.. ಚೆನ್ನಾಗಿದೆ. ಹೆಚ್ಚು ವಿಕೆಟ್ ಪಡೆಯುವ ಬಗ್ಗೆ ಗಮನ ಹರಿಸುತ್ತಿದ್ದೇನೆ. ಎದುರಾಳಿ ತಂಡ ಹೆಚ್ಚು ರನ್‌ ಗಳಿಸದಂತೆ ತಡೆದರೆ ಒತ್ತಡ ಹೆಚ್ಚುತ್ತದೆ. ಇದರಿಂದ ವಿಕೆಟ್‌ ಕೂಡ ಬೀಳಬಹುದು. ಈ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.