ಬೆಂಗಳೂರಿಗೆ ಬಂದ ದಸರಾ ಕುಸ್ತಿ ದಸರಾ ಉತ್ಸವದ ಪ್ರಯುಕ್ತ ಮೈಸೂರಿನಲ್ಲಿ ನಡೆಯುತ್ತಿದ್ದ ಕುಸ್ತಿ ಚಟುವಟಿಕೆ ಬಹಳ ಹಿಂದೆಯೇ ಬೆಂಗಳೂರಿಗೂ ವಿಸ್ತರಣೆಗೊಂಡಿದೆ. ಅದು 1912ರ ವರ್ಷ. ದಸರಾ ಕುಸ್ತಿಯ ಸ್ವರ್ಧಾಕೂಟಗಳನ್ನು ಬೆಂಗಳೂರಿನಲ್ಲಿಯೂ ನಡೆಸಬೇಕೆಂದು ಮಹಾರಾಜ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್‌ ಘೋಷಿಸಿದರು. ಅದರ ಮರುವರ್ಷವೇ ಬೆಂಗಳೂರಿನಲ್ಲಿ ದಸರಾ ಕುಸ್ತಿ ರಂಗು ಪಡೆದುಕೊಂಡಿತು. 1913ರಲ್ಲಿ ನವರಾತ್ರಿ ಮುಗಿದ ಒಡನೇ ಲಾಲ್‌ಬಾಗ್‌ನಲ್ಲಿ ಆಗಿನ ಆಲ್ಬರ್ಟ್‌ ವಿಕ್ಟರ್‌ ಸಭಾಂಗಣದಲ್ಲಿ ದಿನ ಬಿಟ್ಟು ದಿನ ಹೊನಲು ಬೆಳಕಿನಲ್ಲಿ ಒಂದು ತಿಂಗಳ ಕಾಲ ಕುಸ್ತಿ ಸ್ವರ್ಧೆಗಳು ನಡೆದವು. ಆಗಿನ್ನೂ ಲಾಲ್‌ಬಾಗ್‌ ಪ್ರದೇಶಕ್ಕೆ ವಿದ್ಯುಚ್ಛಕ್ತಿ ಸಂಪರ್ಕ ಇರಲಿಲ್ಲ. ಈ ಕುಸ್ತಿಗಾಗಿಯೇ ವಿದ್ಯುಚ್ಛಕ್ತಿಯ ವಿಶೇಷ ಸಂಪರ್ಕ ಕಲ್ಪಿಸಲಾಗಿತ್ತು. ಆ ಕುಸ್ತಿ ಕೂಟದಲ್ಲಿ ಮೈಸೂರು ಸಂಸ್ಥಾನದ ಎಲ್ಲಾ ಪ್ರದೇಶಗಳಿಂದಲೂ ಪೈಲ್ವಾನರು ಪಾಲ್ಗೊಂಡಿದ್ದರು. ಮೈಸೂರಿನ ಆಗಿನ ಜನಪ್ರಿಯ ಪೈಲ್ವಾನ್‌ ತಿಮ್ಮಯ್ಯನವರು ಮತ್ತು ಬೆಂಗಳೂರಿನ ಪುಲಾರಿ ಸಾಬ್ಜಾನ್‌ ಎಂಬುವವರ ನಡುವೆ ಸುಮಾರು 20 ನಿಮಿಷಗಳ ಕಾಲ ಜಿದ್ದಾಜಿದ್ದಿನ ಕುಸ್ತಿ ನಡೆಯಿತು. ಈ ಹಣಾಹಣಿಯನ್ನು ಯುವರಾಜ ನರಸಿಂಹರಾಜ ಒಡೆಯರ್‌ ಅವರು ಆಗಿನ ಬ್ರಿಟಿಷ್‌ ರೆಸಿಡೆಂಟರ ಜತೆ ಕುಳಿತು ವೀಕ್ಷಿಸಿದ್ದರು. ಮೈಸೂರಿನ ತಿಮ್ಮಯ್ಯ ಗೆದ್ದಿದ್ದರು. ತಿಮ್ಮಯ್ಯನವರಿಗೆ ಅಂದು ಆಕರ್ಷಕವಾದ ಬೆಳ್ಳಿಯ ಟ್ರೋಫಿ ಮತ್ತು ₹ 250 ನಗದು ಬಹುಮಾನವನ್ನು ಯುವರಾಜರು ನೀಡಿದರು. ನಾಲ್ವಡಿ ಕೃಷ್ಣ ರಾಜೇಂದ್ರ ಒಡೆಯರ್‌ ಅವರು ಘೋಷಿಸಿದ್ದ ₹ 1000ವನ್ನು ಅವರ ಪರವಾಗಿ ರೆಸಿಡೆಂಟರು ತಿಮ್ಮಯ್ಯನವರಿಗೆ ನೀಡಿ ಗೌರವಿಸಿದರು. ಪುಲಾರಿ ಸಾಬ್ಜಾನ್‌ರಿಗೂ ₹ 150ನ್ನು ನೀಡಲಾಯಿತು. ಗೆದ್ದ ತಿಮ್ಮಯ್ಯನವರು 1914ರ ಜನವರಿ 6ರಂದು ಸಂಜೆ ರೈಲಿನಲ್ಲಿ ಮೈಸೂರು ತಲುಪಿದಾಗ ರೈಲ್ವೆ ನಿಲ್ದಾಣದಲ್ಲಿ ಅವರ ನೂರಾರು ಮಂದಿ ಅಭಿಮಾನಿಗಳು ಕಿಕ್ಕಿರಿದು ಸೇರಿದ್ದರು. ದೀಪಾಲಂಕಾರ ಮಾಡಿದ್ದ ಕುದುರೆ ಗಾಡಿಯಲ್ಲಿ ಅವರನ್ನು ಕುಳ್ಳಿರಿಸಿ ವಾದ್ಯಗೋಷ್ಠಿಯೊಂದಿಗೆ ಆ ನಗರದ ಮುಖ್ಯಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಮೈಸೂರಿನ ಸಾಹುಕಾರ್‌ ಮೊಗಣ್ಣನವರು ಸೇರಿದಂತೆ ಅನೇಕ ಗಣ್ಯರು ಅಂದು ತಿಮ್ಮಯ್ಯನವರಿಗೆ ಶಾಲು, ನಗದು ಬಹುಮಾನಗಳನ್ನು ನೀಡಿ ಗೌರವಿಸಿದ್ದರು. ಆ ದಿನಗಳಲ್ಲಿ ಸರ್ದಾರ್‌ ಗೋಪಾಲರಾಜೇ ಅರಸು ಅವರು ಸ್ವತಃ ಪೈಲ್ವಾನರಾಗಿದ್ದುದರಿಂದ, ಆ ದಿನಗಳಲ್ಲಿ ದಸರಾ ಕುಸ್ತಿ ಸ್ವರ್ಧೆಗಳಿಗೆ ಅವರೇ ತೀರ್ಪುಗಾರರಾಗಿರುತ್ತಿದ್ದರು. ಅವರನ್ನು ಆ ದಿನಗಳಲ್ಲಿ ಎಲ್ಲರೂ ‘ಗೋಪಾಲ ಬುದ್ದಿ’ ಎಂದೇ ಕರೆಯುತ್ತಿದ್ದರು. -ವೇಮಗಲ್‌ ಸೋಮಶೇಖರ್‌ ಆಧಾರ: ‘ಮೈಸೂರು ಸ್ಟಾರ್‌’ ವಾರ ಪತ್ರಿಕೆಯ 1914ರ ಜನವರಿ 12ರ ಸಂಚಿಕೆಯ ಪುಟ 5ರಲ್ಲಿ ಪ್ರಕಟಗೊಂಡ ವರದಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.