ಯಶಸ್ವಿ ವೃತ್ತಿಜೀವನಕ್ಕೆ ಮಾರ್ಗದರ್ಶನ ಜಾಗತೀಕರಣದ ನಂತರ, ಭಾರತದ ಅರ್ಥವ್ಯವಸ್ಥೆ ಜ್ಞಾನದ, ತಿಳಿವಳಿಕೆಯ ತಳಹದಿಯ ಮೇಲೆ ನಿಂತಿದ್ದು, ಉದ್ಯೋಗಾವಕಾಶಗಳು ವೈವಿಧ್ಯಮಯವಾಗಿವೆ; ಹಾಗೆಯೇ ವೃತ್ತಿಜೀವನ ಸ್ಪರ್ಧಾತ್ಮಕವಾಗಿದೆ. ನಿಮ್ಮ ಭವಿಷ್ಯದ ಬಗ್ಗೆ ಚಿಂತಿಸುವಾಗ, ನಿಮಗೆ ಅನೇಕ ಪ್ರಶ್ನೆಗಳು ಎದುರಾಗುವುದು ಸಹಜ. ನಿಮ್ಮ ಆಸಕ್ತಿ, ಅಭಿರುಚಿಗೆ ತಕ್ಕಂತೆ ವೃತ್ತಿ ಜೀವನವನ್ನು ರೂಪಿಸಿಕೊಳ್ಳುವುದು ಹೇಗೆ? ಆ ವೃತ್ತಿಗೆ ಪೂರಕವಾದಂತ ಯಾವ ಕೋರ್ಸನ್ನು ಮಾಡಬೇಕು? ಕೋರ್ಸನ್ನು ಯಾವ ಕಾಲೇಜಿನಲ್ಲಿ ಮಾಡಿದರೆ ಉತ್ತಮ? ಉನ್ನತ ಶಿಕ್ಷಣವನ್ನು ವಿದೇಶದಲ್ಲಿ ಮಾಡಿದರೆ ಹೇಗೆ? ದುಬಾರಿ ಕೋರ್ಸ್‌ಗಳಿಗೆ ಹಣ ಹೊಂದಿಸುವುದು ಹೇಗೆ? ಇಂತಹ ನೂರಾರು ಪ್ರಶ್ನೆಗಳು ನಿಮ್ಮ ಮನಸ್ಸಿನಲ್ಲಿ ಮೂಡಿದರೆ ಭಯಭೀತರಾಗಬೇಕಿಲ್ಲ; ಮುಂದೇನೆಂಬ ಕಲ್ಪನೆಯಲ್ಲಿ ಆತಂಕಪಡಬೇಕಿಲ್ಲ. ವಾಸ್ತವವಾಗಿ, ಈ ಪ್ರಶ್ನೆಗಳು ಮೂಡುವುದು ನಿಮಗೆ ನಿಮ್ಮ ಭವಿಷ್ಯದ ಬಗೆಗಿರುವ ಕಾಳಜಿ ಮತ್ತು ಆಸಕ್ತಿಯಿಂದ. ಆದ್ದರಿಂದಲೇ, ಇಂತಹ ಪ್ರಶ್ನೆಗಳು ಸಹಜ ಮತ್ತು ಆರೋಗ್ಯಕರ ಕೂಡ. ಇಂತಹ ಹಲವಾರು ಪ್ರಶ್ನೆಗಳು, ಗೊಂದಲಗಳು, ಸಮಸ್ಯೆಗಳು, ಉದ್ಭವಿಸಿದಾಗ ಸಕಾಲಿಕ ಮತ್ತು ಸೂಕ್ತ ನಿರ್ಣಯಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ನಿಮ್ಮ ಆಸಕ್ತಿ, ಅಭಿರುಚಿಗೂ, ಉದ್ಯೋಗ ಜಗತ್ತಿನ ಅವಕಾಶಗಳಿಗೂ, ಸವಾಲುಗಳಿಗೂ ತುಲನೆ ಮಾಡಿ, ಶಿಕ್ಷಣ ಮತ್ತು ವೃತ್ತಿಯನ್ನು ನಿಮ್ಮ ಹಿತದೃಷ್ಟಿಯಿಂದಲೇ ಯೋಚಿಸುತ್ತಾ, ಸದಾ ನಿಮ್ಮಡನೆ ಪ್ರೇರಕ ಶಕ್ತಿಯಂತಿದ್ದು, ತಮ್ಮ ಅನುಭವ ಮತ್ತು ಜ್ಞಾನ ಭಂಡಾರದಿಂದ, ನಿಮ್ಮ ಯಶಸ್ವಿ ಜೀವನವನ್ನು ರೂಪಿಸುವ ಶಿಲ್ಪಿಯೇ ಮಾರ್ಗದರ್ಶಕರು ಅಥವಾ ಮೆಂಟರ್. ಮಾರ್ಗದರ್ಶಕರು ಯಾರಾಗಬಹುದು? ನುರಿತ ಮಾರ್ಗದರ್ಶಕರು ಸಿಗುವುದು ಸುಲಭವಲ್ಲ; ಆದರೆ, ಅವರು ವಯಸ್ಸಿನಲ್ಲಿ ಹಿರಿಯರೇ ಆಗಬೇಕಿಂದಿಲ್ಲ. ಸಂಬಂಧಪಟ್ಟ ವಿಷಯದಲ್ಲಿ ಅನುಭವವಿದ್ದು, ಎಲ್ಲಾ ಸಂದರ್ಭಗಳಲ್ಲೂ ನಿರ್ದಾಕ್ಷಿಣ್ಯವಾಗಿ, ಪ್ರಾಮಾಣಿಕವಾಗಿ ತಮ್ಮ ಅಭಿಪ್ರಾಯವನ್ನು ತಿಳಿಸುವಂತವರಾಗಿರಬೇಕು. ಅವರು ನಿಮ್ಮ ಕಾಲೇಜಿನ ಪ್ರಾಧ್ಯಾಪಕರಿರಬಹುದು; ಉದ್ಯೋಗ ಜಗತ್ತಿನ ಅನುಭವದ ಹೆತ್ತವರಿರಬಹುದು, ಸಂಬಂಧಿಗಳಿರಬಹುದು; ಅಥವಾ ಪರಿಣತ ತಜ್ಞರಿರಬಹುದು. ಆದರೆ, ನೀವು ಬಯಸುವ ವೃತ್ತಿಯ ಬಗ್ಗೆ, ಅಲ್ಲಿ ಅಗತ್ಯವಾಗುವ ಕೌಶಲಗಳ ಬಗ್ಗೆ ಅವರಿಗೆ ಆಳವಾದ ಅರಿವಿರಬೇಕು. ಜೊತೆಗೆ ಜಾಗತಿಕ ಜಗತ್ತಿನ ವ್ಯಾಪಕ ಪರಿಚಯವಿದ್ದು, ನಿಮ್ಮ ವೃತ್ತಿ ಜೀವನದ 30-35 ವರ್ಷಗಳ ಅವಧಿಯಲ್ಲಿ ಮಾನವವರ್ಗದ ಅಗತ್ಯ, ಆಸಕ್ತಿ ಮತ್ತು ಅಭಿರುಚಿ, ಔದ್ಯೋಗಿಕ ಅಭಿವೃದ್ಧಿ, ಆರ್ಥವ್ಯವಸ್ಥೆಗಳಲ್ಲಿನ ಬದಲಾವಣೆ, ಇತ್ಯಾದಿಗಳ ಬಗ್ಗೆ ಸಾಕಷ್ಟು ಕಲ್ಪನೆಯಿರಬೇಕು. ಆಗಲೇ, ನಿಮ್ಮ ವೃತ್ತಿಜೀವನದ ಬಗ್ಗೆ ದೂರದೃಷ್ಟಿಯಿಂದ ಮಾರ್ಗದರ್ಶನ ನೀಡಲು ಸಾಧ್ಯ. ವೃತ್ತಿಜೀವನದ ಬಗ್ಗೆ ಯಾವುದೇ ತಪ್ಪು ನಿರ್ಧಾರಗಳು ಅಪಾಯಕರ. ಆದ್ದರಿಂದ, ನೀವು ಮಾರ್ಗದರ್ಶಕರನ್ನು ಆರಿಸುವಾಗ, ಈ ಎಲ್ಲ ವಿಷಯಗಳು ಗಮನದಲ್ಲಿರಲಿ. ಮಾರ್ಗದರ್ಶನದ ಪ್ರಕ್ರಿಯೆ * ನೀವು ಬಯಸುವ ವೃತ್ತಿಗೆ ಸೂಕ್ತವಾದಂತಹ ಪರಿಣತರನ್ನು ಸಂಪರ್ಕಿಸಿ, ಮಾರ್ಗದರ್ಶನ ನೀಡುವಂತೆ ವಿನಂತಿಸಿ. ನಿಮ್ಮ ಮತ್ತು ಅವರ ನಡುವೆ, ಗುರು-ಶಿಷ್ಯರ ಬಾಂಧವ್ಯ ಬೆಳೆಯುವ ಎಲ್ಲಾ ಸಾಧ್ಯತೆಗಳ ಬಗ್ಗೆ ಮನದಟ್ಟು ಮಾಡಿಕೊಳ್ಳಿ. * ಮಾರ್ಗದರ್ಶಕರು ಮೊಟ್ಟಮೊದಲನೆಯದಾಗಿ ನಿಮ್ಮ ಆಸಕ್ತಿ ಮತ್ತು ಅಭಿರುಚಿಯನ್ನು ಅರ್ಥಮಾಡಿಕೊಳ್ಳುತ್ತಾರೆ. ಆದರೆ, ಎಲ್ಲಾ ಆಸಕ್ತಿ, ಅಭಿರುಚಿಗಳನ್ನು ವೃತ್ತಿಯನ್ನಾಗಿ ಪರಿವರ್ತಿಸಲಾಗುವುದಿಲ್ಲ. ನಿಮಗೆ ಸೂಕ್ತವಾದ ವೃತ್ತಿಗಳ ಬಗ್ಗೆ ಅವರಿಂದಲೇ ಅರಿಯಿರಿ. ಉದಾಹರಣೆಗೆ, ಆಸಕ್ತಿ, ಅಭಿರುಚಿಯ ಆಧಾರದ ಮೇಲೆ, ನಿಮಗೆ ಎಂ.ಬಿ.ಎ. ಅಥವಾ ಸಿ.ಎ. ಮಾಡಬಹುದೆಂಬ ಸಲಹೆ ನೀಡಿದರೆ, ತೀರ್ಮಾನ ನಿಮ್ಮದು. * ಮಾರ್ಗದರ್ಶಕರ ಸಲಹೆಯ ಮೇರೆಗೆ, ನಿಮಗೊಪ್ಪುವ ವೃತ್ತಿಯ ಬಗ್ಗೆ ಸಂಶೋಧನೆಯನ್ನು ಮಾಡಿ. ಮೇಲೆ ಉಲ್ಲೇಖಿಸಿದ ಉದಾಹರಣೆಯಂತೆ ಅನೇಕ ಪ್ರಶ್ನೆಗಳು-ಎಂ.ಬಿ.ಎ. ಮತ್ತು ಸಿ.ಎ. ಕೋರ್ಸುಗಳಲ್ಲಿನ ಸ್ಪೆಷಲೈೇಷನ್ ಮಾರ್ಕೆಟಿಂಗ್, ಪ್ರೊಡಕ್ಷನ್, ಆಡಿಟ್ ಇತ್ಯಾದಿ ನಂತರದ ವೃತ್ತಿ ಜೀವನ, ಅಲ್ಲಿನ ಸ್ಪರ್ಧಾತ್ಮಕ ವಾತಾವರಣ, ಮುಂದಿನ 30-35 ವರ್ಷಗಳಲ್ಲಿ ವೃತ್ತಿರಂಗದಲ್ಲಿನ ಅಭಿವೃದ್ಧಿ-ಮೂಡುವುದು ಸಹಜ. ಇನ್ನೊಂದು ಮುಖ್ಯವಾದ ಅಂಶವೇನೆಂದರೆ, ವೃತ್ತಿಪರ ಶಿಕ್ಷಣದಲ್ಲಿ ಮೈಕ್ರೊ ಸ್ಪೆಶಲೈೇಷನ್ ಎಲ್ಲಾ ಸಂದರ್ಭಗಳಲ್ಲೂ ಸೂಕ್ತವೆನ್ನಲಾಗದು. ಉದಾಹರಣೆಗೆ, ಎಂಜಿನಿಯರಿಂಗ್‌ನಲ್ಲಿ, ಮ್ಯೋನೇಜ್‌ಮೆಂಟ್‌ನಲ್ಲಿಇಂತಹ ಅನೇಕ ಸೂಕ್ಷ್ಮವಾದ ಸ್ಪೆಶಲೈೇಷನ್‌ಗಳಿವೆ. ತೀವ್ರವಾದ ತಂತ್ರಜ್ಞಾನದ ಬದಲಾವಣೆಗಳಾದರೆ, ನೀವು ಮಾಡಿರುವ ಸ್ಪೆಶಲೈೇಷನ್‌ಗೆ ಬೇಡಿಕೆ, ನಿರೀಕ್ಷಿಸಿದಕ್ಕಿಂತ ಕಡಿಮೆಯಾಗಬಹುದು. ಈ ಪ್ರಶ್ನೆಗಳು ಮತ್ತು ನಿಮ್ಮ ಅಪೇಕ್ಷೆ-ನಿರೀಕ್ಷೆಗಳ ಬಗ್ಗೆ, ಅವರಿಂದ ಸ್ಪಷ್ಟೀಕರಣವನ್ನು ಪಡೆಯಿರಿ. ಇಂತಹ ವಿಚಾರಗಳಲ್ಲಿ, ಮಾರ್ಗದರ್ಶಕರ ದೂರದೃಷ್ಟಿ ನಿರ್ಣಾಯಕವಾಗಿರಲಿ. * ವೃತ್ತಿರಂಗದ ನಿರ್ಣಯವಾಗುತ್ತಿದ್ದಂತೆ, ಮೂಡುವ ಇನ್ನೊಂದು ಮುಖ್ಯ ಪ್ರಶ್ನೆ ಎಂದರೆ, ಯಾವ ಕೋರ್ಸ್ ಮತ್ತು ಯಾವ ಕಾಲೇಜ್? ಈ ಬಗ್ಗೆ ಸಮಗ್ರವಾಗಿ ಚರ್ಚಿಸಿ, ನಿರ್ಧರಿಸಿ. ಹೆಚ್ಚಿನ ಮಾಹಿತಿಗಾಗಿ, ಆಗಸ್ಟ್ 15, 2011 ರಲ್ಲಿ ಇದೇ ಪುಟಗಳಲ್ಲಿ ಪ್ರಕಟವಾದ `ಯಾವ ಕೋರ್ಸ್, ಯಾವ ಕಾಲೇಜ್?~ಲೇಖನವನ್ನು ಪರಾಮರ್ಶಿಸಿ. * ನೀವು ಆರಿಸಿದ ಕೋರ್ಸಿಗೂ, ಬಯಸುವ ವೃತ್ತಿಗೂ ಹೊಂದಾಣಿಕೆಯಿರಲಿ. ಅದೇ ರೀತಿ ಕೋರ್ಸಿನ ಜನಪ್ರಿಯತೆಗೂ, ವೃತ್ತಿಯಲ್ಲಿನ ಅವಕಾಶಗಳಿಗೂ ಸಮತೋಲನವಿರಬೇಕು. ಶಿಕ್ಷಣದ ವ್ಯಾಪಾರೀಕರಣದಿಂದ ಪದವೀಧರರ ಬೇಡಿಕೆ-ಪೂರೈಕೆಯ ಪ್ರಮಾಣದಲ್ಲಿ ಏರುಪೇರಾಗುವ ಸಾಧ್ಯತೆಯ ಬಗ್ಗೆ ಎಚ್ಚರವಹಿಸಿ. * ಮಾರ್ಗದರ್ಶಕರಿಗೆ ಉದ್ಯೋಗ ಜಗತ್ತಿನಲ್ಲಿ ವಿಸ್ತಾರವಾದ ಸಂಪರ್ಕ ಮತ್ತು ಸಂಪನ್ಮೂಲಗಳಿರುತ್ತದೆ. ಇವುಗಳನ್ನು ನಿಮ್ಮದಾಗಿಸಿಕೊಂಡು, ಸದುಪಯೋಗ ಪಡಿಸಿಕೊಂಡರೆ, ನಿಮ್ಮ ಪ್ರಯತ್ನಗಳು ಶೀಘ್ರವಾಗಿ ಫಲಕಾರಿಯಾಗುತ್ತವೆ. ಅವರು ನೀವು ಬಯಸುವ ವೃತ್ತಿಯಲ್ಲಿದ್ದರಂತೂ, ಹೆಚ್ಚಿನ ಅನುಕೂಲ ಖಂಡಿತ. ಅವರ ವೃತ್ತಿರಂಗದ ಅವಲೋಕನ ಮತ್ತು ಒಳನೋಟವನ್ನು ಅರಿತು, ನಿಮ್ಮ ತಿಳಿವಳಿಕೆಯನ್ನು ವೃದ್ಧಿಸಿಕೊಳ್ಳಿ. * ಇಂದಿನ ದಿನಗಳಲ್ಲಿ, ಅಚ್ಚುಕಟ್ಟಾದ ವ್ಯಕ್ತಿತ್ವವಿರದೆ, ಯಾವ ವೃತ್ತಿಯಲ್ಲೂ ಪ್ರಗತಿ ಅಸಾಧ್ಯ. ಮಾರ್ಗದರ್ಶಕರ ಸಹಾಯದಿಂದ, ನಿಮ್ಮ ವ್ಯಕ್ತಿತ್ವವನ್ನು ಅಚ್ಚುಕಟ್ಟಾಗಿ ಪರಿವರ್ತಿಸಿಕೊಳ್ಳಿ. ಉದಾಹರಣೆಗೆ ವಿಶಿಷ್ಟವಾದ ಮಾತುಗಾರಿಕೆ, ಅದಕ್ಕೊಪ್ಪುವ ದೇಹಭಾಷೆ ಮತ್ತು ವ್ಯಾವಹಾರಿಕ ಬರವಣಿಗೆಯಂತಹ ಕೌಶಲಗಳನ್ನು ವೃದ್ಧಿಸಿಕೊಳ್ಳಿ. ಅದೇ ರೀತಿ ಆಕರ್ಷಕವಾಗಿ ಬಯೋಡೇಟ ತಯಾರಿಸುವುದು, ಸಂದರ್ಶನಗಳನ್ನು ಆತ್ಮವಿಶ್ವಾಸದಿಂದ ಎದುರಿಸುವುದು, ಇತ್ಯಾದಿಗಳ ಬಗ್ಗೆ ಮಾರ್ಗದರ್ಶನ ಅತ್ಯಗತ್ಯ. ನಿಮ್ಮ ವೃತ್ತಿಗೆ ಹೆಚ್ಚುವರಿ ಕೌಶಲಗಳ ಅಗತ್ಯವಿದ್ದರೆ ಉನ್ನತ ತರಬೇತಿಯ ಬಗ್ಗೆ ಸಮಾಲೋಚಿಸಿ. * ಶಿಕ್ಷಣ ಮುಗಿದು, ಉದ್ಯೋಗ ಸೇರಿದಾಕ್ಷಣ, ನಿಮ್ಮ ಮತ್ತು ಮಾರ್ಗದರ್ಶಕರ ಬಾಂಧವ್ಯವನ್ನು ಕಡೆಗಣಿಸಬೇಡಿ. ಏಕೆಂದರೆ, ಅವರಿಗೆ ನೀವು ನಡೆದುಬಂದ ಹಾದಿಯ ಪರಿಚಯವಿದ್ದು, ನಿಮ್ಮ ಭವಿಷ್ಯದ ಕನಸುಗಳನ್ನು ನನಸಾಗಿಸುವ ಸಂಪೂರ್ಣ ಯೋಜನೆಯ ಅರಿವಿರುತ್ತದೆ. ವೃತ್ತಿಗೆ ಸೇರಿದ ನಂತರ ಆಗಿಂದಾಗ್ಗೆ, ಏಕಾಂತದಲ್ಲಿ ನಿಮ್ಮ ಗುರಿ, ಸಾಧನೆ ಮತ್ತು ಜೀವನದ ಬಗ್ಗೆ, ಗಾಢವಾಗಿ ಚಿಂತಿಸುವುದರಿಂದ, ಆತ್ಮಶೋಧನೆ ಮಾಡಿಕೊಂಡಾಗುತ್ತದೆ. ನಿಮ್ಮ ಅನಿಸಿಕೆಗಳನ್ನು ಸಂಕೋಚವಿಲ್ಲದೆ ಅವರೊಡನೆ ಚರ್ಚಿಸಿ. * ವೃತ್ತಿಪರ ಬದುಕಿನಲ್ಲಿ ಒತ್ತಡ ಸಹಜ. ಆ ಒತ್ತಡವನ್ನು ಸಮರ್ಪಕವಾಗಿ ನಿರ್ವಹಿಸಿದರೆ, ವೃತ್ತಿ ಮತ್ತು ಖಾಸಗಿ ಜೀವನದಲ್ಲಿ ಸಮತೋಲನ ಸಾಧ್ಯ. ಈ ಬಗ್ಗೆ ಮಾರ್ಗದರ್ಶಕರ ನಿಕಟ ಸಂಪರ್ಕದಿಂದ ಅವರ ಜ್ಞಾನ, ಅನುಭವ, ವಿವೇಕದ ಲಾಭ ನಿಮಗೆ ಸ್ವಾಭಾವಿಕವಾಗಿಯೇ ಲಭ್ಯ. ಗಮನವಿಟ್ಟು ಅವರ ಮಾತುಗಳನ್ನು ಆಲಿಸುವ ಅಭ್ಯಾಸವನ್ನು ರೂಢಿಸಿಕೊಂಡು, ಸಕ್ರಿಯವಾಗಿ ನಿಮ್ಮ ಪ್ರಗತಿಯ ಬಗ್ಗೆ, ನೀವು ಎದುರಿಸುತ್ತಿರುವ ಸವಾಲುಗಳ ಬಗ್ಗೆ, ಅವರೊಂದಿಗೆ ಚರ್ಚಿಸುತ್ತಿರಿ. * ಯಾವುದೇ ನಿರೀಕ್ಷೆಗಳಿಲ್ಲದೆ, ನಿಮ್ಮ ವ್ಯಕ್ತಿತ್ವ ಮತ್ತು ವೃತ್ತಿಜೀವನವನ್ನು ಸೇವಾ ಮನೋಭಾವದಿಂದ ಮಾರ್ಗದರ್ಶಕರು ರೂಪಿಸುತ್ತಾರೆ. ಆದರೆ, ಈ ನಿಟ್ಟಿನಲ್ಲಿ ಅವರ ಅಮೂಲ್ಯವಾದ ಸಮಯ ಮತ್ತು ಚೈತನ್ಯದ ಬಳಕೆಯಾಗುತ್ತದೆ. ಗುರುವು ಶಿಷ್ಯನಿಗೆ ಒಂದು ಅಕ್ಷರವನ್ನು ಕಲಿಸಿದರೂ ಅದರ ಋಣಪರಿಹಾರ ಸಾಧ್ಯವಿಲ್ಲ ಎನ್ನುತ್ತಾರೆ; ಆದರೂ, ಅವರ ನಿಸ್ವಾರ್ಥ ಸೇವೆಗೆ ಅನುಗುಣವಾಗಿ ನೀವೇನು ಮಾಡಬೇಕೆಂದು ಯೋಚಿಸಿ. ಯಶಸ್ಸನ್ನು ನಿರ್ವಹಿಸುವುದು ಹೇಗೆ? ವೃತ್ತಿಯಲ್ಲಿ ಯಶಸ್ಸು ಮುಖ್ಯ. ಆದರೆ, ವೃತ್ತಿಯ ಯಶಸ್ಸಿನಿಂದ ಪಡೆದ ಕೀರ್ತಿ ಮತ್ತು ಸಂಪತ್ತನ್ನು, ಜೀವನದಲ್ಲಿ ಸಮರ್ಪಕವಾಗಿ ನಿರ್ವಹಿಸುವುದು ಇನ್ನೂ ಹೆಚ್ಚು ಮುಖ್ಯವಾದುದು; ಅನೇಕರು ಎಡುವುದು ಇಲ್ಲೇ. ಏಕೆಂದರೆ, ಗಳಿಸಿದ ಯಶಸ್ಸಿನ ಇನ್ನೊಂದು ಮುಖವೇ ವೈಫಲ್ಯ. ಯಶಸ್ಸಿನಿಂದ ಬರುವ ಅಹಂ, ಅನುಮಾನ, ಅಸಹನೆಗಳ ಅಪಾಯಗಳನ್ನು ಅರಿತು, ಅವುಗಳನ್ನು ನೀವೇ ತಡೆಯಬೇಕು. ಇಲ್ಲದಿದ್ದರೆ, ಕಾಲಕ್ರಮೇಣ ಸಮಾಜದಲ್ಲಿ ನಿಮ್ಮ ಅಭಿಮಾನಿಗಳಿಗಿಂತಲೂ, ವೈರಿಗಳೇ ಹೆಚ್ಚಾಗುತ್ತಾರೆ. ಸುತ್ತಮುತ್ತಲಿನ ಆತ್ಮೀಯರು, ಸಹೋದ್ಯೋಗಿಗಳು, ಕಿರಿಯರ ಬಗ್ಗೆ ನೀವು ಗೌರವದಿಂದ, ವಿನಯದಿಂದ ವರ್ತಿಸಿದರೆ, ವೃತ್ತಿಯ ಯಶಸ್ಸಿಗೆ ಪೂರಕವಾದ ವ್ಯಕ್ತಿತ್ವ ನಿಮ್ಮದಾಗಿ, ಎಲ್ಲರ ಮೆಚ್ಚುಗೆಗೆ ಪಾತ್ರರಾಗುತ್ತೀರ. ಇದು ನಿಮ್ಮ ವೃತ್ತಿ, ವೈಯಕ್ತಿಕ, ಕೌಟುಂಬಿಕ ಮತ್ತು ಸಾಮಾಜಿಕ ಜೀವನದಲ್ಲಿ ಸಾಮರಸ್ಯವನ್ನು ತಂದು, ನೆಮ್ಮದಿಯ, ಸಂತೃಪ್ತಿಯ ಜೀವನ ನಿಮ್ಮದಾಗುತ್ತದೆ. ಇದೇ ನಿಜವಾದ ಯಶಸ್ಸು. ಕತ್ತಲು ಕವಿದ ಮನೆಯನ್ನು ದೀಪವು ಬೆಳಗುವ ಹಾಗೆ, ಮಾರ್ಗದರ್ಶಕರು ನಿಮ್ಮ ಅಂತರಂಗದ ಕತ್ತಲೆಯನ್ನು ತಮ್ಮ ದೂರದೃಷ್ಟಿಯ ಜ್ಞಾನದ ದೀಪದಿಂದ ಬೆಳಗಿಸಿ, ನಿಮ್ಮ ಉಜ್ವಲ ಭವಿಷ್ಯದ ಶಿಲ್ಪಿಯಾಗುತ್ತಾರೆ. ಹೆಸರಾಂತ ಲೇಖಕ, ಭಾಷಣಕಾರ ನೆಪೋಲಿಯನ್ ಹಿಲ್ ಹೇಳಿದಂತೆ, ನಿಮ್ಮ ದೂರದೃಷ್ಟಿ ಮತ್ತು ಕನಸುಗಳು ನಿಮ್ಮ ಆತ್ಮದಲ್ಲಿ ಹುಟ್ಟಿದ ಕೂಸುಗಳು. ನಿಮ್ಮ ಕನಸುಗಳನ್ನು ಮಾರ್ಗದರ್ಶಕರೊಂದಿಗೆ ಹಂಚಿಕೊಳ್ಳಿ; ಅವರ ಮಾರ್ಗದರ್ಶನದಿಂದ ಅವುಗಳನ್ನು ನಿರಂತರವಾಗಿ ಪೋಷಿಸಿ; ಉಜ್ವಲ ಭವಿಷ್ಯ ನಿಮ್ಮದಾಗುವುದರಲ್ಲಿ ಸಂದೇಹವಿಲ್ಲ. (ಲೇಖಕರು ಮ್ಯೋನೇಜ್‌ಮೆಂಟ್ ಮತ್ತು ವೃತ್ತಿ ಸಲಹಾಗಾರರು. : @.) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.