ಟೆನಿಕಾಯ್ಟ್‌ ಕರ್ನಾಟಕಕ್ಕೆ ಚಿನ್ನದ ಪದಕ ಬೆಂಗಳೂರು: ಉತ್ತಮ ಆಟವಾಡಿದ ಕರ್ನಾಟಕ ತಂಡ, ರಾಷ್ಟ್ರೀಯ ಟೆನಿಕಾಯ್ಟ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದಿದೆ. ಭಾರತ ಟೆನಿಕಾಯ್ಟ್ ಫೆಡರೇಷನ್‌ ಆಶ್ರಯದಲ್ಲಿ ಇತ್ತೀಚೆಗೆ ದೆಹಲಿಯಲ್ಲಿ ಚಾಂಪಿಯನ್‌ಷಿಪ್‌ ನಡೆಯಿತು. ಡೇವಿಸ್‌ ಕಪ್‌ ಮಾದರಿಯಲ್ಲಿ ಆಯೋಜಿಸಲಾದ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ಐ. ಕಿರಣ್‌ ಕುಮಾರ್‌, ಮುರುಗೇಶನ್‌, ಮರಿಯಪ್ಪನ್‌, ಪ್ರದ್ಯುಮ್ನ, ಶ್ರೀಕಾಂತ್‌ ಹಾಗೂ ಪ್ರಶಾಂತ್‌ ಅವರನ್ನೊಳಗೊಂಡ ತಂಡ ಚಿನ್ನ ತನ್ನದಾಗಿಸಿಕೊಂಡಿತು. ಸತತ ಮೂರನೇ ಬಾರಿ ಕರ್ನಾಟಕ ಚಿನ್ನದ ಸಾಧನೆ ಮಾಡಿದೆ. ಫೈನಲ್‌ನಲ್ಲಿ ಕರ್ನಾಟಕ, ತಮಿಳುನಾಡು ತಂಡವನ್ನು 3–2 ರಿಂದ ಮಣಿಸಿತು. ಪುರುಷರ ಸಿಂಗಲ್ಸ್ ಫೈನಲ್‌ ಪಂದ್ಯದಲ್ಲಿ ಕರ್ನಾಟಕದ ಕಿರಣ್‌ ಕುಮಾರ್‌, ಪುದುಚೇರಿಯ ಗೋವಿಂದರಾಜನ್‌ ಅವರನ್ನು 21–12, 17–21, 21–17ರಿಂದ ಮಣಿಸಿದರು. ಕಂಚಿನ ಪದಕದ ಸುತ್ತಿನ ಪಂದ್ಯದಲ್ಲಿ ಮುರುಗೇಶನ್‌ ಅವರು ತಮಿಳುನಾಡಿನ ತಿರುಗ್ನನಂ ಅವರನ್ನು 21–17, 21–18ರಿಂದ ಸೋಲಿಸಿದರು. ಪುರುಷರ ಡಬಲ್ಸ್ ಫೈನಲ್‌ ಪಂದ್ಯದಲ್ಲಿ ಕರ್ನಾಟಕದ ಮರಿಯಪ್ಪನ್‌ –ಪ್ರದ್ಯುಮ್ನ ಎಚ್‌. ಜೋಡಿಯು ಕೇರಳದ ಸಂತೋಷ್‌ ಕುಮಾರ್‌–ರಾಜಶೇಖರನ್‌ ವಿರುದ್ಧ 17–21, 21–17, 16–21ರಿಂದ ಸೋತರು. ರಾಜ್ಯದ ಮಹಿಳಾ ತಂಡವು ಕ್ವಾರ್ಟರ್‌ಫೈನಲ್‌ ಹಂತದವರೆಗೆ ತಲುಪಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.