ಪ್ರೊ ಕಬಡ್ಡಿ ಲೀಗ್‌: ಬೆಂಗಳೂರು ಬುಲ್ಸ್‌ಗೆ ಅಗ್ನಿಪರೀಕ್ಷೆ ಅಹಮದಾಬಾದ್‌: ಪ್ರೊ ಕಬಡ್ಡಿ ಲೀಗ್‌ ಏಳನೇ ಆವೃತ್ತಿಯಲ್ಲಿ ಪ್ರಯಾಸದಿಂದ ‘ಪ್ಲೇ ಆಫ್‌’ ಪ್ರವೇಶಿಸಿರುವ ಬೆಂಗಳೂರು ಬುಲ್ಸ್‌ ತಂಡಕ್ಕೆ ಈಗ ಅಗ್ನಿಪರೀಕ್ಷೆ ಎದುರಾಗಿದೆ. ಸೋಮವಾರ ನಡೆಯುವ ಮೊದಲ ಎಲಿಮಿನೇಟರ್‌ ಹೋರಾಟದಲ್ಲಿ ಪವನ್‌ ಕುಮಾರ್‌ ಶೆರಾವತ್‌ ಬಳಗವು ಬಲಿಷ್ಠ ಯು.ಪಿ.ಯೋಧಾ ಸವಾಲು ಎದುರಿಸಲಿದೆ. ಈ ಹೋರಾಟದಲ್ಲಿ ಸೋತರೆ ಹಾಲಿ ಚಾಂಪಿಯನ್‌ ಬುಲ್ಸ್‌ ತಂಡ ಲೀಗ್‌ನಿಂದ ಹೊರ ಬೀಳಲಿದೆ. ಗೆದ್ದರೆ ಸೆಮಿಫೈನಲ್‌ಗೆ ಮುಂದಡಿ ಇಡಲಿದೆ. ಈ ಬಾರಿ ಯೋಧಾ ಎದುರು ಆಡಿದ ಎರಡು ಪಂದ್ಯಗಳಲ್ಲೂ ಬುಲ್ಸ್‌ ನಿರಾಸೆ ಕಂಡಿದೆ. ಹೀಗಾಗಿ ತಂಡದ ಮೇಲೆ ಹೆಚ್ಚಿನ ಒತ್ತಡವಿದೆ. ಬೆಂಗಳೂರಿನ ತಂಡವು ರೇಡಿಂಗ್‌ನಲ್ಲಿ ಪವನ್‌ ಅವರನ್ನೇ ಹೆಚ್ಚು ಅವಲಂಬಿಸಿದೆ. ಯೋಧಾ ಎದುರಿನ ಹಿಂದಿನ ಎರಡು ಪಂದ್ಯಗಳಲ್ಲೂ ಅವರು ‘ಸೂಪರ್‌ ಟೆನ್‌’ ಸಾಧನೆ ಮಾಡಿದ್ದಾರೆ. ‘ಸ್ಟಾರ್‌’ ರೇಡರ್‌ ರೋಹಿತ್‌ ಕುಮಾರ್‌ ಗಾಯಗೊಂಡಿರುವ ಕಾರಣ ಈ ಪಂದ್ಯಕ್ಕೆ ಅಲಭ್ಯ ರಾಗಿದ್ದಾರೆ.ಅವರ ಅನುಪಸ್ಥಿತಿಯಲ್ಲಿ ಬಂಟಿ ಮತ್ತು ಸುಮಿತ್‌ ಸಿಂಗ್‌ ಮಿಂಚಬೇಕಿದೆ. ಡಿಫೆಂಡರ್‌ಗಳಾದ ಮೋಹಿತ್‌ ಶೆರಾವತ್‌, ಮಹೇಂದರ್‌ ಸಿಂಗ್‌ ಹಾಗೂ ಅಮಿತ್‌ ಶೆರಾನ್‌ ಅವರೂ ಜವಾಬ್ದಾರಿ ಅರಿತು ಆಡಬೇಕಿದೆ. ಚೊಚ್ಚಲ ಪ್ರಶಸ್ತಿಯ ಕನಸು ಕಾಣುತ್ತಿರುವ ಯೋಧಾ ತಂಡ ಬಲಿಷ್ಠ ಆಟಗಾರರನ್ನು ಹೊಂದಿದೆ. ಶ್ರೀಕಾಂತ್‌ ಜಾಧವ್‌, ರಿಷಾಂಕ್‌ ದೇವಾಡಿಗ ಮತ್ತು ಸುರೇಂದರ್‌ ಗಿಲ್‌ ಅವರು ಈ ತಂಡದ ‘ಸ್ಟಾರ್‌’ ರೇಡರ್‌ಗಳಾಗಿದ್ದಾರೆ. ರಕ್ಷಣಾ ವಿಭಾಗದಲ್ಲೂ ಈ ತಂಡ ಶಕ್ತಿಯುತವಾಗಿದೆ. ಇಂದಿನ ಪಂದ್ಯಗಳು ಎಲಿಮಿನೇಟರ್‌–1 ಬೆಂಗಳೂರು ಬುಲ್ಸ್‌–ಯು.ಪಿ.ಯೋಧಾ ಆರಂಭ: ರಾತ್ರಿ 7.30 ಎಲಿಮಿನೇಟರ್‌–2 ಯು ಮುಂಬಾ–ಹರಿಯಾಣ ಸ್ಟೀಲರ್ಸ್‌ ಆರಂಭ: ರಾತ್ರಿ 8.30. ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.