ಕಂಚಿನ ಪದಕಕ್ಕಾಗಿ ವೀರ್‌ ಹೋರಾಟ ಬುಡಾಪೆಸ್ಟ್‌ : ಭಾರತದ ವೀರ್‌ ದೇವ್‌ ಗುಲಿಯಾ ಅವರು ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ (23 ವರ್ಷದೊಳಗಿನವರು) ಕಂಚಿನ ಪದಕಕ್ಕಾಗಿ ಪೈಪೋಟಿ ನಡೆಸಲಿದ್ದಾರೆ. ಮತ್ತೊಬ್ಬ ಪಟು ನವೀನ್‌, ರಿಪೇಚ್‌ ಸುತ್ತಿಗೆ ಕಾಲಿಟ್ಟಿದ್ದಾರೆ. ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ವೀರ್‌ ಅವರು ಮಂಗೋಲಿಯಾದ ಬಾಟ್‌ಜುಲ್‌ ಡ್ಯಾಮ್ಜಿನ್‌ ಅವರನ್ನು 12–1 ಪಾಯಿಂಟ್‌ಗಳಿಂದ ಮಣಿಸಿದ್ದರು. ಆದರೆ ನಾಲ್ಕರ ಘಟ್ಟದ ಬೌಟ್‌ನಲ್ಲಿ ಅಜರ್‌ಬೈಜಾನ್‌ನ ಅಬೂಬಕರ್‌ ಅಬಾಕರೊವ್‌ ಎದುರು 1–8ರಿಂದ ಸೋತರು. ಸದ್ಯ ಗುಲಿಯಾ ಕಂಚಿನ ಪದಕಕ್ಕಾಗಿ ಸೆಣಸಲಿದ್ದು, ಎದುರಾಳಿ ಯಾರೆಂದು ಇನ್ನೂ ನಿರ್ಧಾರವಾಗಿಲ್ಲ. 70 ಕೆಜಿ ವಿಭಾಗದ ಮತ್ತೊಂದು ಅರ್ಹತಾ ಬೌಟ್‌ನಲ್ಲಿ ನವೀನ್‌ ಅವರು ರಷ್ಯಾದ ಚೆರ್ಮೆನ್‌ ವಾಲಿವ್‌ ಎದುರು 0–11ರಿಂದ ನಿರಾಸೆ ಕಂಡರು. ಆದರೆ ವಾಲಿವ್‌ ಫೈನಲ್‌ ತಲುಪಿದ ಹಿನ್ನೆಲೆಯಲ್ಲಿ ನವೀನ್‌ ಅವರಿಗೆ ರಿಪೇಜ್‌ ಸುತ್ತಿನಲ್ಲಿ ಸ್ಪರ್ಧಿಸುವ ಅವಕಾಶ ಲಭಿಸಿದೆ. ಮಂಗೋಲಿಯಾದ ತೆಮುಲೆನ್‌ ಎಂಕ್‌ತುಯಾ ಎದುರು ಅವರು ಅಖಾಡಕ್ಕಿಳಿಯಲಿದ್ದಾರೆ. ಚಾಂಪಿಯನ್‌ಷಿಪ್‌ನ ಮೊದಲ ದಿನವಾದ ಸೋಮವಾರ ಭಾರತದ ಶರವಣ್‌ (65 ಕೆಜಿ ವಿಭಾಗ), ಆಕಾಶ್‌ ಅಂಟಿಲ್‌ (97 ಕೆಜಿ) ಕೂಡ ಕ್ವಾರ್ಟರ್‌ಫೈನಲ್‌ ತಲುಪಿದ್ದರು. ಎಂಟರ ಘಟ್ಟದ ಪಂದ್ಯದಲ್ಲಿ ಶರವಣ್‌ ಅವರು ಫ್ರಾನ್ಸ್‌ನ ಇಲ್ಮಾನ್‌ ಮುಕ್ತರೊವ್‌ ಎದುರು 6–10ರಿಂದ ಸೋತರು. ಮತ್ತೊಂದು ಕ್ವಾರ್ಟರ್‌ಫೈನಲ್‌ ಬೌಟ್‌ನಲ್ಲಿ ಆಕಾಶ್‌ ಉಕ್ರೇನ್‌ನ ಡ್ಯಾನಿಲೊ ಸ್ಟ್ಯಾಸಿಯುಕ್‌ ಎದುರು 5–9ರಿಂದ ನಿರಾಸೆ ಅನುಭವಿಸಿದರು. 57 ಕೆಜಿ ವಿಭಾಗದ ಅರ್ಹತಾ ಸುತ್ತಿನಲ್ಲಿನವೀನ್‌ ಅವರಿಗೆ ಟರ್ಕಿಯ ಅಹಮತ್‌ ದುಮಾನ್‌ ಸವಾಲು ಮೀರಲಾಗಲಿಲ್ಲ.0–11ರಿಂದ ಅವರು ಸೋತರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.