ಟಿ.ಟಿ: ಕರ್ನಾಟಕಕ್ಕೆ ಚಿನ್ನ ಬೆಂಗಳೂರು: ಕರ್ನಾಟಕದ ಬಾಲಕಿಯರ ತಂಡದವರು ಚಂಡೀಗಡದಲ್ಲಿ ನಡೆದ 11 ಸ್ಪೋರ್ಟ್ಸ್‌ ರಾಷ್ಟ್ರೀಯ ಕೆಡೆಟ್‌ ಮತ್ತು ಸಬ್‌ ಜೂನಿಯರ್‌ ಟೇಬಲ್‌ ಟೆನಿಸ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಗುರುವಾರ ನಡೆದ ಸಬ್‌ ಜೂನಿಯರ್‌ ವಿಭಾಗದ ಫೈನಲ್‌ನಲ್ಲಿ ಅನರ್ಘ್ಯ ಮಂಜುನಾಥ್‌, ಯಶಸ್ವಿನಿ ಘೋರ್ಪಡೆ, ಅದಿತಿ ಜೋಷಿ ಮತ್ತು ತೃಪ್ತಿ ಪುರೋಹಿತ್‌ ಅವರಿದ್ದ ರಾಜ್ಯ ತಂಡ 3–2ರಿಂದ ತಮಿಳುನಾಡು ತಂಡವನ್ನು ಸೋಲಿಸಿತು. ಮೊದಲ ಸಿಂಗಲ್ಸ್‌ನಲ್ಲಿ ಅನರ್ಘ್ಯ 16–18, 11–9, 11–2, 11–5ರಲ್ಲಿ ಶ್ರೇಯಾ ಶಿವಕುಮಾರ್‌ ಅವರನ್ನು ಸೋಲಿಸಿದರು. ಎರಡನೇ ಸಿಂಗಲ್ಸ್‌ನಲ್ಲಿ ಯಶಸ್ವಿನಿ 9–11, 11–6, 12–10, 6–11, 10–12ರಲ್ಲಿ ಕಾವ್ಯಶ್ರೀ ಭಾಸ್ಕರ್‌ ಎದುರು ಸೋತರು. ಡಬಲ್ಸ್‌ ವಿಭಾಗದ ಪೈಪೋಟಿಯಲ್ಲಿ ಅನರ್ಘ್ಯ ಮತ್ತು ಯಶಸ್ವಿನಿ 11–3, 9–11, 11–8, 11–7ರಲ್ಲಿ ಕಾವ್ಯಶ್ರೀ ಮತ್ತು ಶ್ರೇಯಾ ಅವರನ್ನು ಸೋಲಿಸಿ ಕರ್ನಾಟಕ ತಂಡಕ್ಕೆ 2–1 ಮುನ್ನಡೆ ತಂದುಕೊಟ್ಟರು. ಮೊದಲ ರಿವರ್ಸ್‌ ಸಿಂಗಲ್ಸ್‌ನಲ್ಲಿ ಅನರ್ಘ್ಯ 7–11, 11–5, 11–6, 10–12, 13–15ರಲ್ಲಿ ಕಾವ್ಯಶ್ರೀ ಎದುರು ಸೋತರು. ಹೀಗಾಗಿ 2–2ರ ಸಮಬಲ ಕಂಡುಬಂತು. ನಿರ್ಣಾಯಕ ಎನಿಸಿದ್ದ ಎರಡನೇ ರಿವರ್ಸ್‌ ಸಿಂಗಲ್ಸ್‌ನಲ್ಲಿ ಯಶಸ್ವಿನಿ 11–13, 11–7, 11–7, 11–8ರಲ್ಲಿ ಶ್ರೇಯಾ ಅವರನ್ನು ಸೋಲಿಸಿ ರಾಜ್ಯ ತಂಡದ ಸಂಭ್ರಮಕ್ಕೆ ಕಾರಣರಾದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.