ನಿರ್ಧಾರಕ್ಕೆ ಈಗಲೂ ಬದ್ಧ: ನರೀಂದರ್‌ ಬಾತ್ರಾ ನವದೆಹಲಿ: ‘2022ರ ಕಾಮನ್‌ವೆಲ್ತ್‌ ಕ್ರೀಡಾಕೂಟದಿಂದ ಶೂಟಿಂಗ್‌ ಕೈಬಿಟ್ಟರೆ ಕೂಟವನ್ನೇ ಬಹಿಷ್ಕರಿಸುವುದಾಗಿ ಈ ಹಿಂದೆಯೇ ಎಚ್ಚರಿಕೆ ನೀಡಿದ್ದು ಅದಕ್ಕೆ ಈಗಲೂ ಬದ್ಧರಾಗಿದ್ದೇವೆ’ ಎಂದು ಭಾರತ ಒಲಿಂಪಿಕ್‌ ಸಂಸ್ಥೆಯ (ಐಒಎ) ಅಧ್ಯಕ್ಷ ನರೀಂದರ್‌ ಬಾತ್ರಾ ತಿಳಿಸಿದ್ದಾರೆ. ಕಾಮನ್‌ವೆಲ್ತ್ ಗೇಮ್ಸ್ ಫೆಡರೇಷನ್‌ ಅಧ್ಯಕ್ಷ ಲೂಯಿಸ್‌ ಮಾರ್ಟಿನ್‌, ಸಿಇಒ ಡೇವಿಡ್‌ ಗ್ರೀವಂಬರ್ಗ್‌ ಅವರೊಂದಿಗೆ ನಡೆದ ಸಭೆಯ ಬಳಿಕ ಮಾತನಾಡಿದ ಬಾತ್ರಾ ‘ಸಿಜಿಎಫ್‌ ಅಧಿಕಾರಿಗಳ ಜೊತೆಗಿನ ಮಾತುಕತೆ ಫಲಪ್ರದವಾಗಿದೆ. ಈ ಹಿಂದೆ ನಾನು ಕೂಟದಿಂದ ಹಿಂದೆ ಸರಿಯುತ್ತೇವೆ ಎಂದು ಹೇಳುವ ಬದಲು ಬಹಿಷ್ಕರಿಸುತ್ತೇವೆ ಎಂದು ತಿಳಿಸಿದ್ದೆ. ಬಹಿಷ್ಕಾರ ಪದವನ್ನು ಬಳಸಿದ್ದು ಸರಿಯಲ್ಲ’ ಎಂದರು. ‘ಕೂಟದಿಂದ ಹಿಂದೆ ಸರಿಯುವ ತೀರ್ಮಾನಕ್ಕೆ ಈಗಲೂ ಬದ್ಧರಾಗಿದ್ದೇವೆ. ಈ ಸಂಬಂಧ ಕಾರ್ಯಕಾರಿ ಮಂಡಳಿ ಮತ್ತು ಸಾಮಾನ್ಯ ಸಭೆಯಲ್ಲಿ ಮತ್ತೊಮ್ಮೆ ಚರ್ಚಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತೇವೆ’ ಎಂದು ಹೇಳಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.