ಇಂಡಿಯನ್ ಓಪನ್ ಗಾಲ್ಫ್‌ 28ರಿಂದ ನವದೆಹಲಿ: ಅನುಭವಿಗಳಾದ ಶುಭಂಕರ್ ಶರ್ಮಾ ಮತ್ತು ಅನಿರ್ಬನ್ ಲಾಹಿರಿ ಈ ತಿಂಗಳಾಂತ್ಯದಲ್ಲಿ ನಡೆಯಲಿರುವ ಇಂಡಿಯನ್ ಓಪನ್‌ ಗಾಲ್ಫ್ ಟೂರ್ನಿಯಲ್ಲಿ ಭಾರತದ ಸವಾಲನ್ನು ಮುನ್ನಡೆಸುವರು. ಗುರುಗ್ರಾಮದ ಡಿಎಲ್‌ಎಫ್‌ ಗಾಲ್ಫ್‌ ಆ್ಯಂಡ್‌ ಕಂಟ್ರಿ ಕ್ಲಬ್ ಆವರಣದಲ್ಲಿ 28ರಿಂದ 31ರ ವರೆಗೆ ಟೂರ್ನಿ ನಡೆಯಲಿದೆ. ಎಸ್‌ಎಸ್‌ಪಿ ಚೌರಾಸಿಯಾ, ಶಿವ ಕಪೂರ್‌, ರಾಹಿಲ್ ಗಂಗ್‌ಜಿ ಮತ್ತು ಯುವ ಆಟಗಾರರಾದ ಅಜಿತೇಶ್‌ ಸಂಧು, ವಿರಾಜ್‌ ಮಾದಪ್ಪ, ಖಾಲಿನ್‌ ಜೋಶಿ, ಎಸ್‌.ಚಿಕ್ಕರಂಗಪ್ಪ ಮುಂತಾದವರು ಕೂಡ ಪ್ರಶಸ್ತಿ ಮೇಲೆ ಕಣ್ಣಿಟ್ಟು ಕಣಕ್ಕೆ ಇಳಿಯಲಿದ್ದಾರೆ. ಏಷ್ಯನ್ ಟೂರ್‌ನಲ್ಲಿ ಮೊದಲನೇ ಸ್ಥಾನ ಗಳಿಸಿದ ಗಮನ ಸೆಳೆದಿದ್ದ ಶುಭಂಕರ್ ಮತ್ತು 2015ರ ಚಾಂಪಿಯನ್‌ ಲಾಹಿರಿ ಅವರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಕಳೆದ ಬಾರಿಯ ರನ್ನರ್ ಅಪ್‌ಗಳಾದ ಆ್ಯಂಡ್ರ್ಯೂ ಜಾನ್ಸನ್‌ ಮತ್ತು ಬೆರ್ನಾಡ್‌ ವೀಸ್‌ಬರ್ಗ್‌, 2018ರ ಸ್ಕಾಟ್ಲೆಂಡ್‌ ಓಪನ್‌ನ ಚಾಂಪಿಯನ್‌ ಬ್ರೆಂಡನ್ ಸ್ಟೋನ್‌ ಮುಂತಾದವರಿಂದ ಇವರಿಬ್ಬರಿಗೆ ಪ್ರಬಲ ಪೈಪೋಟಿ ಎದುರಾಗುವ ಸಾಧ್ಯತೆ ಇದೆ. ಆತಂಕದ ಕಾರ್ಮೋಡ:ಟೂರ್ನಿ ಆರಂಭವಾಗಲು ಎರಡು ವಾರವಷ್ಟೇ ಬಾಕಿ ಇದೆ. ಆದರೆ ಅಷ್ಟರಲ್ಲಿ ಆತಂಕದ ಕಾರ್ಮೋಡವೂ ಕವಿದಿದೆ. ಭಾರತೀಯ ಗಾಲ್ಫ್ ಯೂನಿಯನ್‌ನ ಮಾನ್ಯತೆಯನ್ನು ಕ್ರೀಡಾ ಸಚಿವಾಲಯ ಹಿಂತೆಗೆದುಕೊಂಡಿರುವ ಕಾರಣ ಟೂರ್ನಿ ನಡೆಯುವುದೋ ಇಲ್ಲವೋ ಎಂಬ ಸಂದೇಹ ಮೂಡಿದೆ. ರಾಷ್ಟ್ರೀಯ ಕ್ರೀಡಾ ನೀತಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂಬ ಆರೋಪ ಭಾರತೀಯ ಗಾಲ್ಫ್ ಯೂನಿಯನ್‌ ಮೇಲೆ ಹೊರಿಸಲಾಗಿದೆ. ಈ ಕುರಿತು ಮಾತನಾಡಿದ ಯೂನಿಯನ್‌ನ ಸಮಿತಿ ಸದಸ್ಯ ದೇವಾಂಗ್‌ ಶಾ ‘ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ. ಹೀಗಾಗಿ ಸಚಿವಾಲಯ ಮಾನ್ಯತೆಯನ್ನು ವಿಸ್ತರಿಸಿದೆ. ಸಚಿವಾಲಯದ ಸೂಚನೆ ಮೇರೆಗೆ ಮುಂದೆ ಕ್ರೀಡಾ ನೀತಿಗೆ ತಕ್ಕಂತೆ ನಡೆದುಕೊಳ್ಳಲಾಗುವುದು’ ಎಂದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.