ಕರ್ನಾಟಕ ತಂಡ ಚಾಂಪಿಯನ್‌ ಭುವನೇಶ್ವರ: ಕರ್ನಾಟಕ ಮಹಿಳಾ ತಂಡವು ಒಡಿಶಾದ ಕಾಳಿಕೋಟ್‌ನಲ್ಲಿ ನಡೆದ ಐದನೇ ರಾಷ್ಟ್ರೀಯ ಅಂತರ ವಲಯ ಬಾಲ್‌ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿತು. ಫೈನಲ್‌ ಪಂದ್ಯದಲ್ಲಿ ರಾಜ್ಯ ತಂಡವು ತಮಿಳುನಾಡು ವಿರುದ್ಧ 35-29 ಹಾಗೂ 35-31ಅಂಕಗಳಿಂದ ನೇರ ಸೆಟ್‌ಗಳಲ್ಲಿ ಜಯಿಸಿ ಸತತ ಎರಡನೇ ಬಾರಿ ಅಂತರ ವಲಯ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಲೀಗ್ ಹಾಗೂ ನಾಕೌಟ್ ಮಾದರಿಯಲ್ಲಿ ಜರುಗಿದ ಪಂದ್ಯಗಳಲ್ಲಿ ರಾಜ್ಯ ತಂಡ ಲೀಗ್ ಹಂತದಲ್ಲಿ ಹರಿಯಾಣ, ಮುಂಬೈ, ಒಡಿಶಾ ಹಾಗೂ ಛತ್ತೀಸ್‌ಗಡ ತಂಡದ ವಿರುದ್ಧ ಜಯಿಸಿತ್ತು. ಸೆಮಿಫೈನಲ್ಸ್‌ನಲ್ಲಿ ಮಹಾರಾಷ್ಟ್ರ ವಿರುದ್ಧ 35-12 ಹಾಗೂ 35-16 ನೇರ ಸೆಟ್ ಗಳಿಂದ ಜಯಿಸಿ ಫೈನಲ್ ಹಂತಕ್ಕೆ ತಲುಪಿತ್ತು.‌ ತಮಿಳುನಾಡು ತಂಡವು ಸೆಮಿಫೈನಲ್ಸ್ ನಲ್ಲಿ ಛತ್ತೀಸಗಡ ತಂಡದ ವಿರುದ್ಧ ಜಯಿಸಿ ಫೈನಲ್ ಪ್ರವೇಶಿಸಿತ್ತು. ಈ ಹಿಂದೆ ತಮಿಳುನಾಡಿನ ದಿಂಡಿಗಲ್‌ನಲ್ಲಿ ಜರುಗಿದ ದಕ್ಷಿಣ ವಲಯ ಚಾಂಪಿಯನ್ ಶಿಪ್ ನಲ್ಲಿ ಕರ್ನಾಟಕ ವಿಜೇತ ತಂಡವಾಗಿ ಹಾಗೂ ತಮಿಳುನಾಡು ರನ್ನರ್ ಅಪ್ ಆಗಿತ್ತು. ರಾಷ್ಟ್ರದ ಐದು ವಲಯಗಳಿಂದ ಹತ್ತು ತಂಡಗಳು ಸ್ಪರ್ಧಿಸಿದ್ದವು. ರಾಜ್ಯ ತಂಡದ ನಾಯಕಿ ಜಯಲಕ್ಷ್ಮಿ ನೇತೃತ್ವದ ತಂಡ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದಿದ್ದ 64ನೇ ರಾಷ್ಟ್ರೀಯ ಸೀನಿಯರ್ ಚಾಂಪಿಯನ್‌ಷಿಪ್‌ನಲ್ಲೂ ಪ್ರಶಸ್ತಿ ಗೆದ್ದಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.