ಬೆಂಗಳೂರಿನಲ್ಲಿ ನಾಳೆಯಿಂದ ಏಷ್ಯನ್ ಸ್ನೂಕರ್ ಬೆಂಗಳೂರು: ಕರ್ನಾಟಕ ರಾಜ್ಯ ಬಿಲಿಯರ್ಡ್ಸ್ ಸಂಸ್ಥೆಯ ಆಶ್ರಯದಲ್ಲಿ ಏಪ್ರಿಲ್ 22 ರಿಂದ 25ರವರೆಗೆ ಎಸಿಬಿಎಸ್ ಏಷ್ಯನ್ ಸ್ನೂಕರ್ ಟೂರ್ (ಟೆನ್ ರೆಡ್ ಫಾರ್ಮ್ಯಾಟ್) ಟೂರ್ನಿಯು ನಡೆಯಲಿದೆ. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಏಷ್ಯನ್ ಬಿಲಿಯರ್ಡ್ಸ್‌ ಕಾನ್ಫೆಡರೇಷನ್ ಕಾರ್ಯದರ್ಶಿ ಮಿಷೆಲ್ ಅಲ್‌ ಕೌರಿ, ‘ಮೊದಲ ಸುತ್ತಿನಲ್ಲಿ 24 ಆಟಗಾರರು ಸ್ಪರ್ಧಿಸುವರು. ಒಟ್ಟು ಎಂಟು ಗುಂಪುಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಪ್ರತಿಯೊಂದು ಗುಂಪಿನಿಂದ ಇಬ್ಬರು ಆಟಗಾರರು ಅರ್ಹತೆ ಪಡೆಯುವರು. ಒಟ್ಟು 16 ಆಟಗಾರರು ನಾಕ್‌ಔಟ್ ನಲ್ಲಿ ಆಡುವರು’ ಎಂದರು. ‘ಅಗ್ರಶ್ರೇಯಾಂಕದ ಆಟಗಾರ, ಬೆಂಗಳೂರಿನ ಪಂಕಜ್ ಅಡ್ವಾಣಿ, ಮನನ್ ಚಂದ್ರಾ, ಲಕ್ಷ್ಮಣ್ ರಾವತ್, ಕಮಲ್ ಚಾವ್ಲಾ, ಆದಿತ್ಯ ಮೆಹ್ತಾ, ಸೌರವ್ ಕೊಠಾರಿ, ಸಂದೀಪ್ ಗುಲಾಟಿ ಮತ್ತು ಯೋಗೇಶ್ ಕುಮಾರ್ ಅವರು ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ. ಚೀನಾ, ಇರಾನ್, ಮ್ಯಾನ್ಮಾರ್, ಸಿರಿಯಾ, ಥಾಯ್ಲೆಂಡ್, ಹಾಂಕಾಂಗ್, ಕತಾರ್, ಮಲೇಷ್ಯಾ, ವೇಲ್ಸ್ ಮತ್ತು ಚೀನಾದ ಸ್ಪರ್ಧಿಗಳೂ ಕಣದಲ್ಲಿದ್ದಾರೆ‘ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕೆಎಸ್‌ಬಿಎ ಅಧ್ಯಕ್ಷ ಅರವಿಂದ್ ಸವೂರ್,ಜಂಟಿ ಕಾರ್ಯದರ್ಶಿ ಪಂಕಜ್ ಅಡ್ವಾಣಿ ಹಾಜರಿದ್ದರು. ಪಾಕ್ ಆಟಗಾರ ಗೈರು ಬೆಂಗಳೂರಿನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಪಾಕಿಸ್ತಾನದ ಆಟಗಾರ ಮೊಹಮ್ಮದ್ ಬಿಲಾಲ್ ಆಡುತ್ತಿಲ್ಲ. ಈಚೆಗೆ ನಡೆದಿದ್ದ ಎರಡನೇ ಲೆಗ್‌ ಟೂರ್ನಿಯಲ್ಲಿ ಮೊಹಮ್ಮದ್ ಬಿಲಾಲ್ ಅವರು ಅಗ್ರಸ್ಥಾನ ಪಡೆದಿದ್ದರು. ಈ ಕುರಿತು ಪ್ರತಿಕ್ರಿಯಿಸಿದ ಮಿಷೆಲ್ ಅಲ್‌ ಕೌರಿ, ‘ವೈಯಕ್ತಿಕ ಕಾರಣದಿಂದ ಬಿಲಾಲ್ ಅವರು ಸ್ಪರ್ಧೆಗೆ ಬರುತ್ತಿಲ್ಲ. ವೀಸಾ ಸಮಸ್ಯೆಯೇನೂ ಇಲ್ಲ’ಎಂದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.