ಗುರಿ ತಪ್ಪಿದ ಭಾರತದ ಬಿಲ್ಗಾರರು ಶಾಂಘೈ: ವಿಶ್ವಕಪ್‌ ಎರಡನೇ ಹಂತದ ಆರ್ಚರಿ ಟೂರ್ನಿಯಲ್ಲಿ ಭಾರತದ ಸ್ಪರ್ಧಿಗಳು ತೀವ್ರ ನಿರಾಸೆ ಮೂಡಿಸಿದ್ದಾರೆ. ವೈಯಕ್ತಿಕ ಹಾಗೂ ತಂಡ ಎರಡೂ ವಿಭಾಗಗಳ ರಿಕರ್ವ್‌ ಹಾಗೂ ಕಾಂಪೌಂಡ್‌ ಸ್ಪರ್ಧೆಗಳಲ್ಲಿ ಗುರುವಾರ ಒಬ್ಬರೂ ಪದಕದ ಸುತ್ತಿಗೆ ಪ್ರವೇಶಿಸಲಿಲ್ಲ. ಜಗದೀಶ್‌ ಚೌಧರಿ, ಚಮನ್‌ಸಿಂಗ್‌ ಹಾಗೂ ಸುಖಚೈನ್‌ ಸಿಂಗ್‌ ಅವರನ್ನೊಳಗೊಂಡ ಭಾರತ ಪುರುಷರ ರಿಕರ್ವ್‌ ತಂಡ ಬಾಂಗ್ಲಾ ತಂಡಕ್ಕೆ 1–5ರಿಂದ ಸೋತಿತು. ಕಾಂಪೌಂಡ್ ಸ್ಪರ್ಧೆಯಲ್ಲಿ ಪರ್ವೀನಾ, ಮೊನಾಲಿ ಜಾಧವ್‌ ಹಾಗೂ ಪ್ರಿಯಾ ಗುರ್ಜರ್‌ ಅವರನ್ನೊ ಳಗೊಂಡ ಮಹಿಳಾ ತಂಡ ಚೀನಾ ತೈಪೇಯ ಎದುರಾಳಿಗಳ ವಿರುದ್ಧ 219–231ರಿಂದ ಮಣಿಯಿತು. ಇನ್ನು ಮಹಿಳಾ ರಿಕರ್ವ್‌ ತಂಡ ಕೂಡ ಎರಡನೇ ಸುತ್ತಿನಲ್ಲಿ ಅಮೆರಿಕಾದ ಎದುರಾಳಿಗಳಿಗೆ 2–6ರಿಂದ ಶರಣಾಯಿತು. ಟೂರ್ನಿಯಲ್ಲಿ ನಾಲ್ಕನೇ ಶ್ರೇಯಾಂಕ ಪಡೆದಿದ್ದ ಭಾರತ ಪುರುಷರ ಕಾಂಪೌಂಡ್‌ ತಂಡವು 13ನೇ ಶ್ರೇಯಾಂಕದ ನ್ಯೂಜಿಲೆಂಡ್‌ ಎದುರು ತಲೆಬಾಗಿತು. ವೈಯಕ್ತಿಕ ವಿಭಾಗದ ಸ್ಪರ್ಧೆಗಳಲ್ಲೂ ಕೂಡ ಭಾರತದ ಪ್ರದರ್ಶನ ಆಶಾದಾಯಕವಾಗಿರಲಿಲ್ಲ. ಪುರುಷರ ರಿಕರ್ವ್‌ ಸ್ಪರ್ಧೆಯಲ್ಲಿ ವಕೀಲರಾಜ್‌ ದಿಂಡೋರ್‌ ಅವರು ಚೀನಾ ತೈಪೇಯ ಆಟಗಾರ ಚುನ್‌ ಹೆಂಗ್‌ ಎದುರು ಶರಣಾದರು. ಅಂಕಿತಾ ಭಕತ್‌ ಹಾಗೂ ಪ್ರೀತಿ ಕೂಡ ಸೋತು ಹೊರಬಿದ್ದರು.ಪುರುಷರ ಕಾಂಪೌಂಡ್‌ ಸ್ಪರ್ಧೆಯಲ್ಲಿ ಗುರ್ವಿಂದರ್‌ ಸಿಂಗ್‌ಗೆ ಮೂರನೇ ಸುತ್ತಿನಲ್ಲಿ ಆಸ್ಟ್ರೇಲಿಯದ ಡ್ಯಾನಿ ಊಸ್ತುಜೆನ್‌ ಸವಾಲನ್ನು ಮೀರಲಾಗಲಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.