ಕಬಡ್ಡಿ: ಪ್ರಿಡಿಯೇಟರ್ಸ್ ಜಯಭೇರಿ ಪುಣೆ: ಮೊದಲ ಪಂದ್ಯದಲ್ಲಿ ಸೋಲನುಭವಿಸಿದ್ದ ಪಾಂಡಿಚೇರಿ ಪ್ರಿಡಿಯೇಟರ್ಸ್ ತಂಡ ಎರಡನೇ ಪಂದ್ಯದಲ್ಲಿ ಚೇತರಿಸಿಕೊಂಡಿತು. ಇಲ್ಲಿ ನಡೆಯುತ್ತಿರುವ ಇಂಡೊ ಇಂಟರ್‍ನ್ಯಾಷನಲ್ ಕಬಡ್ಡಿ ಲೀಗ್‌ನ ಬುಧವಾರದ ಪಂದ್ಯದಲ್ಲಿ ಹರಿಯಾಣ ಹೀರೋಸ್ ವಿರುದ್ಧ 52-28ರಲ್ಲಿ ಗೆದ್ದು ಸಂಭ್ರಮಿಸಿತು. ಬಾಳೆವಾಡಿಯ ಶಿವ ಛತ್ರಪತಿ ಕ್ರೀಡಾ ಸಂಕೀರ್ಣದಲ್ಲಿ ನಡೆದ ‘ಎ’ ವಲಯದ ಪಂದ್ಯದಲ್ಲಿ ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡ ಪಾಂಡಿಚೇರಿ ತಂಡದ ತಂತ್ರಗಳಿಗೆ ಪ್ರತಿತಂತ್ರ ಹೂಡಲು ಹರಿಯಾಣ ಹೀರೋಸ್ ಆಟಗಾರರು ಪರದಾಡಿದರು. ಪುಣೆ ಪ್ರೈಡ್ ಎದುರು 43-34ರಲ್ಲಿ ಸೋತಿದ್ದ ಹರಿಯಾಣ ಈ ಪಂದ್ಯದಲ್ಲೂ ಕಳಪೆ ಆಟವಾಡಿತು. ಇದಕ್ಕೆ ಬೆಲೆಯನ್ನೂ ತೆತ್ತಿತು. ಪಾಂಡಿಚೇರಿ ಪ್ರಾಬಲ್ಯ: ಮೊದಲ ಪಂದ್ಯದಲ್ಲಿ ಬೆಂಗಳೂರು ರೈನೋಸ್‌ಗೆ ಮಣಿದಿದ್ದ ಪಾಂಡಿಚೇರಿ ಪಂದ್ಯದ ಆರಂಭದ ಎರಡು ಕ್ವಾರ್ಟರ್‌ಗಳಲ್ಲಿ ಪೂರ್ಣ ಆಧಿಪತ್ಯ ಸ್ಥಾಪಿಸಿ ಮುನ್ನಡೆ ಕಾಯ್ದುಕೊಂಡಿತು. ಮೂರನೇ ಕ್ವಾರ್ಟರ್‌ನಲ್ಲಿ ಹರಿಯಾಣ ಹೀರೋಸ್ ಚೇತರಿಸಿಕೊಂಡಿತು. ಆದರೂ ಮುನ್ನಡೆ ಸಾಧಿಸಲು ಆಗಲಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.