ರಸ್ತೆ ಅಪಘಾತ: ಈಜುಪಟು ಬಾಲಕೃಷ್ಣ ಸಾವು ಬೆಂಗಳೂರು: ಅಂತರರಾಷ್ಟ್ರೀಯ ಈಜುಪಟು ಎಂ. ಬಿ. ಬಾಲಕೃಷ್ಣ (29)ಅವರು ಗುರುವಾರ ರಾತ್ರಿ ಚೆನ್ನೈನಲ್ಲಿ ನಡೆದ ಅಪಘಾತದಲ್ಲಿ ಸಾವನ್ನಪ್ಪಿದರು. ಇವಿಆರ್ ಸಾಲೈ ಬಳಿ ಬೈಕ್ ಮೇಲೆ ಅವರು ಮನೆಗೆ ತೆರಳುತ್ತಿದ್ದರು. ಆಗ ಲಾರಿ ಡಿಕ್ಕಿ ಹೊಡೆದು ಬಾಲಕೃಷ್ಣ ಸ್ಥಳದಲ್ಲಿಯೇ ಕೊನೆಯುಸಿರೆಳೆದರು ಎಂದು ಪೊಲೀಸರು ತಿಳಿಸಿದ್ದಾರೆ. 2010ರಲ್ಲಿ ಢಾಕಾದಲ್ಲಿ ನಡೆದಿದ್ದ ದಕ್ಷಿಣ–ಏಷ್ಯಾ ಗೇಮ್ಸ್‌ನ 50 ಮೀಟರ್ಸ್ ಬ್ಯಾಕ್‌ಸ್ಟ್ರೋಕ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಎಂಜಿನಿಯರ್ ವೃತ್ತಿಯಲ್ಲಿದ್ದ ಅವರು ಈಚೆಗಷ್ಟೇ ಅಮೆರಿಕದಿಂದ ಚೆನ್ನೈಗೆ ಮರಳಿದ್ದರು. ‘ಎಲ್ಲರೊಂದಿಗೆ ಸದಾ ಸಂತಸ, ಪ್ರೀತಿಯಿಂದ ಇರುತ್ತಿದ್ದ ನೀನು ಇಷ್ಟು ಬೇಗ ಹೊರಟುಬಿಟ್ಟೆ. ನಮ್ಮಿಬ್ಬರ ನಡುವಿನ ಸ್ನೇಹದ ನೆನಪುಗಳಷ್ಟೇ ಈಗ ಉಳಿದಿವೆ. ಜಗತ್ತಿನ ಬಹಳಷ್ಟು ಕಡೆ ನಾವಿಬ್ಬರೂ ಈಜು ಸ್ಪರ್ಧೆಗೆ ತೆರಳಿದ್ದು, ಹೋದಲೆಲ್ಲ ನಗು, ಸಂತಸವನ್ನು ಹಂಚುತ್ತಿದ್ದ ನಿನ್ನ ವ್ಯಕ್ತಿತ್ವ ಮರೆಯುವುದು ಸಾಧ್ವವೇ ಇಲ್ಲ. ನಿನ್ನ ಚೈತನ್ಯ ಯಾವಾಗಲೂ ನಮ್ಮೊಂದಿಗೆ ಇರುತ್ತದೆ’ ಎಂದು ಬಾಲಕೃಷ್ಣನ್ ಅವರ ಗೆಳೆಯ ಮತ್ತು ಒಲಿಂಪಿಯನ್ ಈಜುಪಟು ರೆಹಾನ್ ಪೂಂಚಾ ತಮ್ಮ ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.