ಬ್ಯಾಡ್ಮಿಂಟನ್‌: ಸೆಮಿಗೆ ವೈಭವ್‌, ಸುಜ್ಞಾನ್‌ ಬೆಂಗಳೂರು: ಅಗ್ರ ಶ್ರೇಯಾಂಕದ ಬಿ.ಎಸ್‌.ವೈಭವ್‌ ಶ್ರೀನಾಥ್‌, ಶ್ರೇಯಾಂಕ ರಹಿತ ಆಟಗಾರ ಸುಜ್ಞಾನ್‌ ಕಿಣಿ, ಯೋನೆಕ್ಸ್‌ ಸನ್‌ರೈಸ್‌ ರಾಮಯ್ಯ ರಾಜನ್‌ ಸ್ಮಾರಕ ರಾಜ್ಯ ರ್‍ಯಾಂಕಿಂಗ್‌ ಬ್ಯಾಡ್ಮಿಂಟನ್ ಟೂರ್ನಿಯ 17 ವರ್ಷದೊಳಗಿನ ಬಾಲಕರ ಸಿಂಗಲ್ಸ್‌ ಸೆಮಿಫೈನಲ್‌ ತಲುಪಿದರು. ಕೆನರಾ ಯೂನಿಯನ್‌ ಆಶ್ರಯ ದಲ್ಲಿ ಮಲ್ಲೇಶ್ವರದ ಸಂಸ್ಥೆಯಲ್ಲಿ ನಡೆಯು ತ್ತಿರುವ ಈ ಟೂರ್ನಿಯಲ್ಲಿ ಬುಧವಾರ, ವೈಭವ್ 21–14, 21–16ರಲ್ಲಿ ದೇವದತ್ ಹಾನಗಲ್‌ ವಿರುದ್ಧ ಜಯಗಳಿಸಿದರು. ಸುಜ್ಞಾನ್‌ 21–9, 18–21, 21–16ರಲ್ಲಿ ಸಾತ್ವಿಕ್‌ ಶಂಕರ್‌ ಮೇಲೆ ಗೆಲುವು ಪಡೆದರು. ಎರಡನೇ ಶ್ರೇಯಾಂಕದ ನರೇನ್‌ ಎಸ್‌.ಅಯ್ಯರ್‌ ಮತ್ತು ಮೂರನೇ ಶ್ರೇಯಾಂಕದ ಜಯಂತ್‌ ಜಿ. ನೇರ ಆಟಗಳಿಂದ ಎದುರಾಳಿಗಳನ್ನು ಹಿಮ್ಮೆಟ್ಟಿಸಿ ನಾಲ್ಕರ ಘಟ್ಟ ಪ್ರವೇಶಿಸಿದರು. ಬಾಲಕಿಯರ ವಿಭಾಗದ ಕ್ವಾರ್ಟ್‌ ಫೈನಲ್‌ ಪಂದ್ಯಗಳಲ್ಲಿ ತಾನ್ಯಾ ಹೇಮಂತ್‌21–12, 21–14ರಲ್ಲಿ ಪ್ರೇರಣಾ ಎನ್‌.ಶೇಟ್‌ ವಿರುದ್ಧ ಜಯಗಳಿಸಿದರು. ಆರನೇ ಶ್ರೇಯಾಂಕದ ನೇಯ್ಸಾ ಕಾರ್ಯಪ್ಪ 21–15, 15–21, 21–18ರಲ್ಲಿ ಅಲ್ಫಿಯಾ ರಿಯಾಜ್‌ ಬಸರಿ ವಿರುದ್ಧ, ಕೃತಿ ಭಾರದ್ವಾಜ್‌ 14–21, 21–16, 21–7ರಲ್ಲಿ ಆಸಿತಾ ಸಿಂಗ್‌ ವಿರುದ್ಧ, ಅನುಷ್ಕಾ ಗಣೇಶ್‌ 21–12, 21–12ರಲ್ಲಿ ವಿಭಾ ಎಂ.ಎನ್‌. ವಿರುದ್ಧ ಜಯಗಳಿಸಿದರು. 15 ವರ್ಷದೊಳಗಿನ ಬಾಲಕರ ವಿಭಾಗದಲ್ಲೂ ಅಗ್ರ ಶ್ರೇಯಾಂಕದ ಅರುಜ್‌ ಮಹೇಶ್ವರಿ, ಎರಡನೇ ಶ್ರೇಯಾಂಕದ ಸಾತ್ವಿಕ್‌ ಶಂಕರ್‌, ಮೂರು ಮತ್ತು ನಾಲ್ಕನೇ ಶ್ರೇಯಾಂಕದ ತುಷಾರ್‌ ಸುವೀರ್‌ ಮತ್ತು ಜಿ.ಎಸ್‌.ಸುಮುಖ ನಾಲ್ಕರ ಘಟ್ಟ ತಲುಪಿದರು. ಎಲ್ಲರೂ ನೇರ ಆಟಗಳಲ್ಲೇ ಜಯಗಳಿಸಿದರು. 15 ವರ್ಷದೊಳಗಿನ ಬಾಲಕಿಯರ ಸಿಂಗಲ್ಸ್‌ನಲ್ಲಿ ಅಗ್ರ ಶ್ರೇಯಾಂಕದ ನೇಯ್ಸಾ ಕಾರ್ಯಪ್ಪ, ಮೂರನೇ ಶ್ರೇಯಾಂಕದ ಪ್ರೇರಣಾ ಎನ್‌.ಶೇಟ್‌, ನಾಲ್ಕನೇ ಶ್ರೇಯಾಂಕದ ಇಲಿಶಾ ಪಾಲ್‌ ನೇರ ಆಟಗಳಲ್ಲಿ ಎದುರಾಳಿಗಳನ್ನು ಹಿಮ್ಮೆಟ್ಟಿಸಿ ಸೆಮಿಫೈನಲ್‌ ತಲುಪಿದರು. ಐದನೇ ಶ್ರೇಯಾಂಕದ ಜಯಂತಿಕಾ ರಾಥೋರ್ 21–19, 21–15ರಲ್ಲಿ ಎರಡನೇ ಶ್ರೇಯಾಂಕದ ಆಶಿತಾ ಸಿಂಗ್‌ ವಿರುದ್ಧ ಜಯಗಳಿಸಿದ್ದು ಗಮನ ಸೆಳೆಯಿತು. 13 ವರ್ಷದೊಳಗಿನ ಹುಡುಗಿಯರ ವಿಭಾಗದಲ್ಲಿ ಮೊದಲ ನಾಲ್ಕು ಶ್ರೇಯಾಂಕ ಆಟಗಾರ್ತಿಯರಾದ ರುಜುಲಾ ರಾಮು, ಮೌನಿತಾ ಎ.ಎಸ್‌., ಅನುಷ್ಕಾ ಬರೈ ಮತ್ತು ಜಿ.ಎಸ್‌.ಮೇಘಶ್ರೀ ನಾಲ್ಕರ ಘಟ್ಟ ತಲುಪಿಸದರು. ಎರಡನೇ ಶ್ರೇಯಾಂಕದ ಮೌನಿತಾ ಮಾತ್ರ ಮೂರು ಗೇಮ್‌ ಆಡಬೇಕಾಯಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.