ಕೋವಿಡ್‌: ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿ ಮುಂದಕ್ಕೆ ನವದೆಹಲಿ: ದೇಶದಲ್ಲಿ ಕೋವಿಡ್–19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂಡಿಯಾ ಓಪನ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯನ್ನು ಮುಂದೂಡಲಾಗಿದೆ. ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸುವ ಕೊನೆಯ ಮೂರು ಟೂರ್ನಿಗಳಲ್ಲಿ ಇದೂ ಒಂದಾಗಿದೆ. ಸುಮಾರು ₹ 3 ಕೋಟಿ ಬಹುಮಾನ ಮೊತ್ತದ ಟೂರ್ನಿಯು ನವದೆಹಲಿಯಲ್ಲಿ ಮೇ 11ರಿಂದ 16ರವರೆಗೆ ನಡೆಯಬೇಕಿತ್ತು. ‘ಕೋವಿಡ್‌ನಿಂದ ಉಂಟಾಗಿರುವ ಸದ್ಯದ ಬಿಕ್ಕಟ್ಟನ್ನು ಗಮನಿಸಿದರೆ ಟೂರ್ನಿಯನ್ನು ಮುಂದೂಡದೇ ಬೇರೆ ದಾರಿಯಿಲ್ಲ. ಆಟಗಾರರು ಹಾಗೂ ಸಿಬ್ಬಂದಿಯ ಸುರಕ್ಷತೆಯನ್ನು ಪರಿಗಣಿಸಿ ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್‌ (ಬಿಡಬ್ಲ್ಯುಎಫ್‌) ಮತ್ತು ದೆಹಲಿ ಸರ್ಕಾರದೊಂದಿಗೆ ಚರ್ಚಿಸಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ‘ ಎಂದು ಭಾರತ ಬ್ಯಾಡ್ಮಿಂಟನ್ ಸಂಸ್ಥೆ (ಬಿಎಐ) ಪ್ರಧಾನ ಕಾರ್ಯದರ್ಶಿ ಅಜಯ್ ಸಿಂಘಾನಿಯಾ ತಿಳಿಸಿದ್ದಾರೆ. ವರ್ಚುವಲ್ ಪತ್ರಿಕಾಗೋಷ್ಠಿಯ ಮೂಲಕ ಅವರು ಈ ವಿಷಯ ಪ್ರಕಟಿಸಿದರು. ಟೂರ್ನಿ ನಡೆಸುವ ಮುಂದಿನ ದಿನಾಂಕವನ್ನು ಪ್ರಕಟಿಸಿಲ್ಲ. ಕೊರೊನಾ ಸೋಂಕು ಪ್ರಕರಣಗಳು ಯದ್ವಾತದ್ವಾ ಏರುತ್ತಿರುವುದರಿಂದ, ಒಲಿಂಪಿಕ್ ಚಾಂಪಿಯನ್‌ ಕರೋಲಿನಾ ಮರಿನ್‌, ರಚನೊಕ್ ಇಂತನನ್‌, ಆ್ಯಂಡರ್ಸ್ ಆ್ಯಂಟನ್ಸನ್‌ ಹಾಗೂ ರಾಸ್ಮಸ್ ಗೆಮ್ಕೆ ಸೇರಿದಂತೆ ವಿಶ್ವದ ಪ್ರಮುಖ ಆಟಗಾರರು ಈ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಕಳೆದ ಆವೃತ್ತಿಯ ಇಂಡಿಯಾ ಓಪನ್ ಟೂರ್ನಿಯನ್ನು ರದ್ದು ಮಾಡಲಾಗಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.