ಏಷ್ಯನ್ ಚಾಂಪಿಯನ್‌ಷಿಪ್: ‘ಅನ್ಯಾಯ’ದ ಫೈನಲ್‌ ಸೋಲಿನ ಕುರಿತು ಅಸಮಾಧಾನವಿದೆ -ಅಮಿತ್ ನವದೆಹಲಿ: ಈ ಬಾರಿಯ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ತಾನು ಅತ್ಯುತ್ತಮ ಸಾಮರ್ಥ್ಯ ತೋರಿದ್ದರೂ ಫೈನಲ್ ಬೌಟ್‌ನಲ್ಲಿ ಅನುಭವಿಸಿದ ‘ಅನ್ಯಾಯ‘ದ ಸೋಲಿನ ಕುರಿತು ಅಸಮಾಧಾನವಿದೆ ಎಂದು ಭಾರತದ ಬಾಕ್ಸರ್‌ ಅಮಿತ್ ಪಂಘಾಲ್ ಹೇಳಿದ್ದಾರೆ. ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿರುವ 25 ವರ್ಷದ ಪಂಘಾಲ್, ಇತ್ತೀಚೆಗೆ ದುಬೈನಲ್ಲಿ ಕೊನೆಗೊಂಡ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದರು. 52 ಕೆಜಿ ವಿಭಾಗದ ಫೈನಲ್ ಬೌಟ್‌ನಲ್ಲಿ ಒಲಿಂಪಿಕ್ಸ್ ಹಾಗೂ ವಿಶ್ವ ಚಾಂಪಿಯನ್‌ ಶಕೊಬಿದಿನ್‌ ಜೈರೊವ್ ಎದುರು 2–3ರಿಂದ ಸೋತಿದ್ದರು. ಈ ತೀರ್ಪಿನ ಮರುಪರಿಶೀಲನೆಗೆ ಭಾರತ ತಂಡ ಮನವಿ ಸಲ್ಲಿಸಿತ್ತು. ಆದರೆ ಜ್ಯೂರಿ ಮನವಿಯನ್ನು ತಳ್ಳಿಹಾಕಿದ್ದರು. ‘52 ಕೆಜಿ ವಿಭಾಗದಲ್ಲಿ ಅದು ನನ್ನ ಅತ್ಯುತ್ತಮ ಪ್ರದರ್ಶನವಾಗಿತ್ತು. ನಾನು ಫೈನಲ್‌ ಜಯಿಸಬೇಕಿತ್ತು. ಅದು ಸಾಧ್ಯವಾಗದಿದ್ದಾಗ ಕೋಪಗೊಂಡಿದ್ದೆ‘ ಎಂದು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಪಂಘಾಲ್ ನುಡಿದರು. ‘ನನಗೆ ಸಾಧ್ಯವಾದಷ್ಟು ಉತ್ತಮ ಸಾಮರ್ಥ್ಯ ತೋರಿದ್ದೆ. ಗೆಲುವಿಗೆ ನಾನು ಅರ್ಹನಾಗಿದ್ದೆ. ಒಮ್ಮೊಮ್ಮೆ ಹೀಗಾಗುತ್ತದೆ.ಜೈರೊವ್ ಎದುರು ಕಳೆದ ಬಾರಿ 0–5ರಿಂದ ಸೋತಿದ್ದೆ. ಈಗ ಆ ಸಾಮರ್ಥ್ಯ ಸುಧಾರಿಸಿದೆ‘ ಎಂದು ಪಂಘಾಲ್ ಹೇಳಿದರು. ‘ತೀರ್ಪಿನ ವಿರುದ್ಧ ನಮ್ಮ ಪ್ರತಿಭಟನೆ ಇನ್ನಷ್ಟು ತೀವ್ರವಾಗಿರಬೇಕಿತ್ತು. ಆದರೂ ಕನಿಷ್ಠ ನಾವು ಪ್ರಯತ್ನಿಸಿದ್ದೇವೆ‘ ಎಂದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.