ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದು ಕೋವಿಡ್ ಯೋಧರಿಗೆ ಗೌರವ: ಮನ್‌ಪ್ರೀತ್ ಸಿಂಗ್‌ ಬೆಂಗಳೂರು: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಮೂಲಕ ಕೋವಿಡ್‌ ವಿರುದ್ಧ ಸೆಣಸುತ್ತಿರುವ ಯೋಧರಿಗೆ ಗೌರವ ಸಲ್ಲಿಸುವ ಬಯಕೆ ಇದೆ ಎಂದು ಭಾರತ ಹಾಕಿ ತಂಡದ ನಾಯಕ ಮನ್‌ಪ್ರೀತ್ ಸಿಂಗ್ ಹೇಳಿದ್ದಾರೆ. ನಾಲ್ಕು ದಶಕಗಳ ಪದಕಗಳ ಬರ ನೀಗಿಸಲು ಇರುವ ಯಾವುದೇ ಅವಕಾಶಗಳನ್ನು ಬಿಟ್ಟುಕೊಡುವುದಿಲ್ಲ ಎಂದು ಅವರು ನುಡಿದಿದ್ದಾರೆ. ‘ಜುಲೈ 23ರಂದು ಆರಂಭವಾಗುವ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವುದು ಸಾಧ್ಯವಾದರೆ, ಈ ಬಿಕ್ಕಟ್ಟಿನ ಸಮಯದಲ್ಲಿ ಕೋವಿಡ್‌ ವಿರುದ್ಧ ನಿರಂತರವಾಗಿ ಹೋರಾಡಿ ಜನರ ಜೀವ ರಕ್ಷಿಸುತ್ತಿರುವ ವೈದ್ಯರು, ಮುಂದಳ ಕಾರ್ಯಕರ್ತರಿಗೆ ಅದನ್ನು ಅರ್ಪಿಸುತ್ತೇವೆ. ಧನ್ಯವಾದ ಜೈ ಹಿಂದ್‌‘ ಎಂದು ಮನ್‌ಪ್ರೀತ್ ಹೇಳಿರುವ ವಿಡಿಯೊವನ್ನು ಹಾಕಿ ಇಂಡಿಯಾ ವೆಬ್‌ಸೈಟ್‌ ಹಂಚಿಕೊಂಡಿದೆ. ಭಾರತ ತಂಡ ಇದುವರೆಗೆ ಒಲಿಂಪಿಕ್ಸ್‌ನಲ್ಲಿ ಎಂಟು ಚಿನ್ನದ ಪದಕಗಳನ್ನು ಗೆದ್ದಿದೆ. 1980ರ ಮಾಸ್ಕೋ ಕ್ರೀಡಾಕೂಟದಲ್ಲಿ ಜಯಿಸಿದ್ದೇ ಕೊನೆಯದು. ಬೆಂಗಳೂರಿನಲ್ಲಿರುವ ಭಾರತ ಕ್ರೀಡಾ ಪ್ರಾಧಿಕಾರ (ಸಾಯ್‌) ಕೇಂದ್ರದಲ್ಲಿ ಭಾರತದ ಪುರುಷ ಮತ್ತು ಮಹಿಳಾ ಹಾಕಿ ತಂಡಗಳು ತರಬೇತಿ ಪಡೆಯುತ್ತಿವೆ. ಇಲ್ಲಿ ಆಟಗಾರರು ತೋರುತ್ತಿರುವ ಬದ್ಧತೆ ಸಮರ್ಪಣಾ ಮನೋಭಾವದ ಕುರಿತು ಮನ್‌ಪ್ರೀತ್ ಸಂತಸ ವ್ಯಕ್ತಪಡಿಸಿದರು. ‘ಶ್ರೇಷ್ಠ ಸಾಮರ್ಥ್ಯ ತೋರಲು ಆಟಗಾರರುಪರಸ್ಪರ ನೆರವಾಗುತ್ತಿದ್ದಾರೆ‘ ಎಂದು ಮನ್‌ಪ್ರೀತ್ ನುಡಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.