ಕ್ರೀಡಾಗ್ರಾಮದಲ್ಲೇ ತಾಲೀಮಿಗೆ ಭಾರತದ ಬಾಕ್ಸರ್‌ಗಳ ನಿರ್ಧಾರ ಟೋಕಿಯೊ: ಒಲಿಂಪಿಕ್ಸ್‌ನಲ್ಲಿ ತರಬೇತಿಗೆ ನಿಗದಿಪಡಿಸಿರುವ ಸ್ಥಳವು ‘ಸ್ವಲ್ಪ ದೂರ‘ ಇರುವ ಕಾರಣ, ಕೋವಿಡ್‌ ಆತಂಕದಿಂದ ಪಾರಾಗಲು ಕ್ರೀಡಾಗ್ರಾಮದಲ್ಲೇ ತಾಲೀಮು ನಡೆಸಲು ಭಾರತದ ಬಾಕ್ಸರ್‌ಗಳು ನಿರ್ಧರಿಸಿದ್ದಾರೆ. ಕ್ರೀಡಾಕೂಟದ ಬಾಕ್ಸಿಂಗ್‌ ಸ್ಪರ್ಧೆಗಳು ಸುಮಿದಾ ವಾರ್ಡ್‌ನ ರ‍್ಯಾಗೊಕು ಕೋಕುಗಿಕನ್‌ ಅರೆನಾದಲ್ಲಿ ನಿಗದಿಯಾಗಿವೆ. ಇದು ಮೂಲತಃ ಸುಮೊ ಕುಸ್ತಿಪಟುಗಳ ಅಂಕಣವಾಗಿದ್ದು, ಕ್ರೀಡಾಗ್ರಾಮದಿಂದ 20 ಕಿಲೊ ಮೀಟರ್ ದೂರವಿದೆ. ‘ಕ್ರೀಡಾಗ್ರಾಮದಲ್ಲೇ ತರಬೇತಿ ನಡೆಸಲು ನಾವು ನಿರ್ಧರಿಸಿದ್ದೇವೆ. ಸ್ಪರ್ಧೆಗಳು ನಡೆಯಬೇಕಿರುವ ಸ್ಥಳಕ್ಕೆ ಸೋಮವಾರ ನಾವು ಹೋಗಿದ್ದೆವು. ಅದು ತುಂಬಾ ದೂರ. ನಾವು ಮಾತ್ರವಲ್ಲದೆ ಹಲವು ತಂಡಗಳಿಗೂ ಇದೇ ಭಾವನೆ ಇದೆ. ಹೀಗಾಗಿ ಬಹುತೇಕರು ಇಲ್ಲಿಯೇ ಅಭ್ಯಾಸ ನಡೆಸುತ್ತಿದ್ದಾರೆ. ಕೋವಿಡ್‌ ಭಯವೂ ಇದಕ್ಕೆ ಕಾರಣವಾಗಿದೆ‘ ಎಂದು ಭಾರತ ಬಾಕ್ಸಿಂಗ್ ತಂಡದ ಮೂಲಗಳು ಹೇಳಿವೆ. ಭಾರತದ ಒಂಬತ್ತು ಮಂದಿ ಬಾಕ್ಸರ್‌ಗಳು ಈ ಬಾರಿ ಒಲಿಂಪಿಕ್ಸ್ ಅರ್ಹತೆ ಗಳಿಸಿದ್ದಾರೆ. ಅದರಲ್ಲಿ ಐವರು ಪುರುಷ ಮತ್ತು ನಾಲ್ವರು ಮಹಿಳಾ ಬಾಕ್ಸರ್‌ಗಳು. ತಂಡದಲ್ಲಿರುವ ಮೇರಿ ಕೋಮ್‌ ಹಾಗೂ ವಿಕಾಸ್ ಕ್ರಿಶನ್‌ ಅವರಿಗೆ ಈ ಹಿಂದೆ ಒಲಿಂಪಿಕ್ಸ್‌ನಲ್ಲಿ ಕಣಕ್ಕಿಳಿದ ಅನುಭವವಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.