ಏಷ್ಯನ್ ಟಿಟಿಗೆ ಭಾರತ ತಂಡಗಳ ಆಯ್ಕೆ: ಬೆಂಗಳೂರಿನ ಅರ್ಚನಾಗೆ ಸ್ಥಾನ ನವದೆಹಲಿ: ಕರ್ನಾಟಕದ ಅರ್ಚನಾ ಕಾಮತ್ ಏಷ್ಯನ್ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಆಡಲಿರುವ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. ಆದರೆ ಒಲಿಂಪಿಯನ್ ಮಣಿಕಾ ಬಾತ್ರಾ ಅವರನ್ನು ಆಯ್ಕೆ ಪರಿಗಣಿಸಿಲ್ಲ. ದೋಹಾದಲ್ಲಿ ಸೆ. 28ರಿಂದ ಚಾಂಪಿಯನ್‌ಷಿಪ್ ಆರಂಭಗೊಳ್ಳಲಿದೆ. ಈ ಟೂರ್ನಿಯ ಪೂರ್ವಸಿದ್ಧತೆಗಾಗಿ ಸೋನೆಪತ್‌ನಲ್ಲಿ ಈಚೆಗೆ ಆಯೋಜಿಸಲಾಗಿದ್ದ ಕಡ್ಡಾಯ ರಾಷ್ಟ್ರೀಯ ಶಿಬಿರದಲ್ಲಿ ಮಣಿಕಾ ಭಾಗವಹಿಸಿರಲಿಲ್ಲ. ಆದ್ದರಿಂದ ಅವರನ್ನು ಆಯ್ಕೆ ಮಾಡಿಲ್ಲ. 56ನೇ ಶ್ರೇಯಾಂಕದ ಮಣಿಕಾ ಗೈರುಹಾಜರಿಯಲ್ಲಿ 97ನೇ ಶ್ರೇಯಾಂಕದ ಸುತೀರ್ಥ ಮುಖರ್ಜಿ ಮಹಿಳಾ ತಂಡವನ್ನು ಮುನ್ನಡೆಸುವರು. ಪುರುಷರ ವಿಭಾಗದಲ್ಲಿ ಅನುಭವಿ ಅಚಂತ ಶರತ್ ಕಮಲ್ ತಂಡದ ನಾಯಕತ್ವ ವಹಿಸಲಿದ್ದಾರೆ. ಶಿಬಿರದಲ್ಲಿ ಪಾಲ್ಗೊಳ್ಳದವರನ್ನು ಆಯ್ಕೆಗೆ ಪರಿಗಣಿಸುವುದಿಲ್ಲವೆಂದು ಭಾರತ ಟೇಬಲ್‌ ಟೆನಿಸ್ ಫೆಡರೇಷನ್ (ಟಿಟಿಎಫ್‌ಐ) ಈ ಮೊದಲೇ ಘೋಷಿಸಿತ್ತು. ಒಲಿಂಪಿಕ್ಸ್‌ನಲ್ಲಿಯೂ ಮಣಿಕಾ ಅವರು ರಾಷ್ಟ್ರೀಯ ಕೋಚ್‌ ಮಾರ್ಗದರ್ಶನವನ್ನು ನಿರಾಕರಿಸಿದ್ದರು. ನಂತರದ ವಿಚಾರಣೆಯ ಸಂದರ್ಭದಲ್ಲಿ ರಾಷ್ಟ್ರೀಯ ಕೋಚ್ ಅರ್ಹತಾ ಪಂದ್ಯ ಫಿಕ್ಸಿಂಗ್ ಮಾಡಲು ಪ್ರಚೋದಿಸಿದ್ದರು ಎಂದು ಮಣಿಕಾ ದೂರಿದ್ದರು. ಈ ಟೂರ್ನಿಯಲ್ಲಿ ಬಲಾಢ್ಯ ಚೀನಾ ತಂಡವೂ ಕಣಕ್ಕಿಳಿಯಲಿದೆ. ಪುರುಷರ ಸಿಂಗಲ್ಸ್, ತಂಡ ಮತ್ತು ಡಬಲ್ಸ್‌ ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿವೆ. ತಂಡಗಳು ಪುರುಷರು: ತಂಡ: ಮಾನವ್ ಠಕ್ಕರ್, ಶರತ್ ಕಮಲ್, ಜಿ. ಸತ್ಯನ್, ಹರ್ಮಿತ್ ದೇಸಾಯಿ, ಸನೀಲ್ ಶೆಟ್ಟಿ. ಡಬಲ್ಸ್‌: ಶರತ್ ಕಮಲ್–ಜಿ. ಸತ್ಯನ್, ಮಾನವ್ ಠಕ್ಕರ್–ಹರ್ಮೀತ್ ದೇಸಾಯಿ ಮಹಿಳೆಯರು: ತಂಡ: ಸುತೀ್ರ್ಥ ಮುಖರ್ಜಿ, ಶ್ರೀಜಾ ಅಕುಲಾ, ಐಹಿಕಾ ಮುಖರ್ಜಿ, ಅರ್ಚನಾ ಕಾಮತ್ ಡಬಲ್ಸ್: ಅರ್ಚನಾ ಕಾಮತ್–ಶ್ರೀಜಾ ಅಕುಲ್, ಸುತೀರ್ಥ ಮುಖರ್ಜಿ–ಐಹಿಕಾ ಮುಖರ್ಜಿ. ಮಿಶ್ರ ಡಬಲ್ಸ್: ಮಾನವ್ ಠಕ್ಕರ್–ಅರ್ಚನಾ ಕಾಮತ್, ಹರ್ಮೀತ್ ದೇಸಾಯಿ–ಶ್ರೀಜಾ ಅಕುಲಾ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.