ಒಲಿಂಪಿಕ್ಸ್ ಮುಂದೂಡುವುದೇ ಉತ್ತಮ: ಗೋಪಿಚಂದ್ ನವದೆಹಲಿ: ‘ಕೊರೊನಾ ಆತಂಕದಿಂದ ಪರಿಸ್ಥಿತಿ ಬಿಗಡಾಯಿಸಿದೆ. ಇಂಥ ಸ್ಥಿತಿಯಲ್ಲಿ ಒಲಿಂಪಿಕ್ಸ್ ಕೂಟವನ್ನು ಮುಂದೂಡುವುದು ಉತ್ತಮ’ ಎಂದು ಭಾರತ ಬ್ಯಾಡ್ಮಿಂಟನ್ ತಂಡದ ಮುಖ್ಯ ಕೋಚ್ ಪುಲ್ಲೇಲ ಗೋಪಿಚಂದ್ ಅಭಿಪ್ರಾಯಪಟ್ಟಿದ್ದಾರೆ. ‘ಟೋಕಿಯೊ ಒಲಿಂಪಿಕ್ಸ್‌ಗೆ ನಿಗದಿ ಮಾಡಿರುವ ದಿನಾಂಕ ದೂರವೇನೂ ಇಲ್ಲ. ಹೀಗಾಗಿ ಈ ಬಾರಿ ಕೂಟ ನಡೆಯುವುದರ ಬಗ್ಗೆ ಸಂದೇಹವಿದೆ. ಎಲ್ಲ ಗೊಂದಲಗಳಿಗೆ ಪರಿಹಾರ ಕಾಣಬೇಕಾದರೆ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯು ಕೂಟವನ್ನು ಮುಂದೂಡಬೇಕು’ ಎಂದು ಹೇಳಿದ್ದಾರೆ. ‘ಕ್ರೀಡಾಪಟುಗಳ ಆರೋಗ್ಯದ ಬಗ್ಗೆ ಎಲ್ಲರೂ ಆತಂಕಗೊಂಡಿದ್ದಾರೆ. ಪ್ರಯಾಣ ಮತ್ತು ಪ್ರವಾಸಕ್ಕೂ ನಿರ್ಬಂಧಗಳಿವೆ. ವಿಶ್ವವಿಡೀ ಜನರ ಕ್ಷೇಮಕ್ಕಾಗಿ ಪ್ರಾರ್ಥಿಸುತ್ತಿರುವಾಗ ಒಲಿಂಪಿಕ್ಸ್ ಮುಂದಕ್ಕೆ ಹಾಕುವುದು ಉತ್ತಮ’ ಎಂದರು. ಆಟಗಾರರ ಆರೋಗ್ಯವನ್ನು ನಿರ್ಲಕ್ಷಿಸಿ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್ ಆಯೋಜಿಸಿದ್ದಕ್ಕೆ ವಿಶ್ವ ಬ್ಯಾಡ್ಮಿಂಟ್ ಫೆಡರೇಷನ್ ಬಗ್ಗೆ ಟೀಕೆಗಳು ಕೇಳಿಬಂದಿದ್ದವು. ಆಟಗಾರರ ಆರೋಗ್ಯಕ್ಕಿಂತ ಹಣ ಗಳಿಕೆಯೇ ಮುಖ್ಯವಾಗಿತ್ತು ಎಂದು ಸೈನಾ ನೆಹ್ವಾಲ್ ಒಳಗೊಂಡಂತೆ ಅನೇಕ ಅಂತರರಾಷ್ಟ್ರೀಯ ಕ್ರೀಡಾಪಟು್ಗಳು ಅಭಿಪ್ರಾಯಪಟ್ಟಿದ್ದರು. ಫೆಡರೇಷನ್ ಕ್ರಮದ ಬಗ್ಗೆ ಗೋಪಿಚಂದ್ ಕೂಡ ಬೇಸರ ವ್ಯಕ್ತಪಡಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.