ಭಾರತಕ್ಕೆ ಮರಳಿದ ವಿಶ್ವನಾಥನ್‌ ಆನಂದ್: ಬೆಂಗಳೂರಿನಲ್ಲಿ ಕ್ವಾರಂಟೈನ್‌ ಬೆಂಗಳೂರು/ ಚೆನ್ನೈ: ಪ್ರಯಾಣ ನಿರ್ಬಂಧದ ಕಾರಣ ಮೂರು ತಿಂಗಳು ಜರ್ಮನಿಯಲ್ಲೇ ಅನಿವಾರ್ಯವಾಗಿ ತಂಗಿದ್ದ ಮಾಜಿ ವಿಶ್ವ ಚೆಸ್‌ ಚಾಂಪಿಯನ್‌ ವಿಶ್ವನಾಥನ್‌ ಆನಂದ್ ಕೊನೆಗೂಶನಿವಾರ ಮಧ್ಯಾಹ್ನ ಭಾರತಕ್ಕೆ ವಾಪಸಾಗಿದ್ದಾರೆ. ಫ್ರಾಂಕ್‌ಫರ್ಟ್‌ನಿಂದ ಏರ್‌ ಇಂಡಿಯಾ ವಿಮಾನದಲ್ಲಿ ದೆಹಲಿ ಮೂಲಕ ಅವರು ಮಧ್ಯಾಹ್ನ 1.15ಕ್ಕೆ ಬೆಂಗಳೂರಿಗೆ ಬಂದಿಳಿದರು. ಶುಕ್ರವಾರ ರಾತ್ರಿ ಈ ವಿಮಾನ ಯಾನವನ್ನು ಆರಂಭಿಸಿತ್ತು. ಬಂಡೆಸ್‌ಲಿಗಾ ಚೆಸ್‌ ಲೀಗ್‌ನಲ್ಲಿ ಆಡಲು ಚೆನ್ನೈನ ಆನಂದ್‌ ಫೆಬ್ರುವರಿಯಲ್ಲಿ ಜರ್ಮನಿಗೆ ಹೋಗಿದ್ದರು. ಮಾರ್ಚ್‌ನಲ್ಲಿ ತವರಿಗೆ ಮರಳಬೇಕಿತ್ತು. ಆದರೆ ಅಷ್ಟರೊಳಗೆ ಕೊರೊನಾ ವೈರಾಣು ಎಲ್ಲೆಡೆ ಕಬಂಧಬಾಹು ಚಾಚಿದ್ದ ಕಾರಣ ಪ್ರಯಾಣ ನಿರ್ಬಂಧ ಹೇರಲಾಗಿತ್ತು. ‘ಆನಂದ್‌ ಭಾರತಕ್ಕೆ ಬಂದಿದ್ದಾರೆ. ಅವರು ಕ್ಷೇಮವಾಗಿದ್ದಾರೆ. ಕ್ವಾರಂಟೈನ್‌ಗೆ ಒಳಪಟ್ಟ ನಂತರ ಅವರು ಚೆನ್ನೈಗೆ ಮರಳಲಿದ್ದಾರೆ’ ಎಂದು ಆನಂದ್‌ ಪತ್ನಿ ಅರುಣಾ ಚೆನ್ನೈನಿಂದ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಏಳು ದಿನಗಳನ್ನು ಪೂರೈಸಬೇಕಿದೆ. ನೆಗೆಟಿವ್‌ ವರದಿ ಬಂದ ನಂತರ 14 ದಿನಗಳ ಕಾಲ ‘ಗೃಹಬಂಧನ’ದಲ್ಲಿ ಇರಬೇಕಾಗುತ್ತದೆ. ಜರ್ಮನಿಯಲ್ಲಿ ಲೀಗ್‌ ಆಡಿದ ನಂತರ ಫ್ರಾಂಕ್‌ಫರ್ಟ್‌ ಸಮೀಪ ವಾಸ್ತವ್ಯ ಮಾಡಿದ್ದ ಆನಂದ್‌, ಅಲ್ಲಿಂದಲೇ ರಷ್ಯಾದಲ್ಲಿ ನಡೆಯುತ್ತಿದ್ದ ಕ್ಯಾಂಡಿಡೇಟ್ಸ್‌ ಟೂರ್ನಿಯ ಆನ್‌ಲೈನ್‌ ಕಮೆಂಟರಿ ಮಾಡಿದ್ದರು. ಆದರೆ ಆ ಟೂರ್ನಿ ಅರ್ಧದಲ್ಲೇ ಸ್ಥಗಿತಗೊಂಡಿತ್ತು. ನಂತರ ಅವರು ನೇಷನ್‌ ಕಪ್‌ ಆನ್‌ಲೈನ್‌ ಟೂರ್ನಿಯಲ್ಲಿ ಭಾರತ ತಂಡಕ್ಕೆ ಆಡಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.