ಖೇಲ್‌ರತ್ನ ಪ್ರಶಸ್ತಿಗೆ ರೋಹಿತ್ ಶರ್ಮಾ‌, ವಿನೇಶಾ ಪೋಗಟ್‌ ಹೆಸರು ಶಿಫಾರಸು ನವದೆಹಲಿ : ಭಾರತ ಕ್ರಿಕೆಟ್‌ ತಂಡದ ಆಟಗಾರ ರೋಹಿತ್‌ ಶರ್ಮಾ ಹಾಗೂ ಕುಸ್ತಿಪಟು ವಿನೇಶಾ ಪೋಗಟ್‌ ಅವರು ಮಂಗಳವಾರ ಖೇಲ್‌ರತ್ನ ಪ್ರಶಸ್ತಿ ಶಿಫಾರಸುಗೊಂಡಿದ್ದಾರೆ.ಕ್ರೀಡಾ ಸಚಿವಾಲಯ ನೇಮಿಸಿರುವ ಪ್ರಶಸ್ತಿ ಆಯ್ಕೆ ಸಮಿತಿಯು, ಇವರಿಬ್ಬರು ಸೇರಿ ಒಟ್ಟು ನಾಲ್ವರನ್ನು ದೇಶದ ಅತ್ಯುನ್ನತ ಕ್ರೀಡಾ ಗೌರವಕ್ಕೆ ಶಿಫಾರಸು ಮಾಡಿದೆ. ಮಹಿಳಾ ಟೇಬಲ್‌ ಟೆನಿಸ್‌ ಪಟು ಮನಿಕಾ ಬಾತ್ರಾ ಹಾಗೂ ರಿಯೊ ಪ್ಯಾರಾಲಿಂಪಿಕ್‌ ಕೂಟದಲ್ಲಿ ಚಿನ್ನದ ಪದಕ ವಿಜೇತ ಹೈ ಜಂಪರ್‌ ಮರಿಯಪ್ಪನ್‌ ತಂಗವೇಲು ಅವರೂ ಖೇಲ್‌ರತ್ನ ಪುರಸ್ಕಾರಕ್ಕೆ ಶಿಫಾರಸುಗೊಂಡಿದ್ದಾರೆ. ಈ ಪ್ರಶಸ್ತಿಗೆನಾಲ್ವರು ಕ್ರೀಡಾಪಟುಗಳು ಶಿಫಾರಸುಗೊಳ್ಳುತ್ತಿರುವುದು ಇದು ಎರಡನೇ ಬಾರಿ. 2016ರಲ್ಲಿ ಬ್ಯಾಡ್ಮಿಂಟನ್ ಪಟು ಪಿ.ವಿ.ಸಿಂಧು, ಜಿಮ್ನಾಸ್ಟಿಕ್‌ ತಾರೆ‌ ದೀಪಾ ಕರ್ಮಾಕರ್‌, ಶೂಟಿಂಗ್‌ ಪಟು ಜಿತು ರಾಯ್‌ ಹಾಗೂ ಕುಸ್ತಿಪಟು ಸಾಕ್ಷಿ ಮಲಿಕ್‌ ಅವರಿಗೆ ಈ ಪ್ರಶಸ್ತಿ ನೀಡಲಾಗಿತ್ತು. 33 ವರ್ಷದ ರೋಹಿತ್‌ ಅವರು ಸಚಿನ್ ತೆಂಡೂಲ್ಕರ್‌, ಮಹೇಂದ್ರ ಸಿಂಗ್‌ ಧೋನಿ ಹಾಗೂ ವಿರಾಟ್‌ ಕೊಹ್ಲಿ ಅವರ ಬಳಿಕ ಖೇಲ್‌ರತ್ನ ಪ್ರಶಸ್ತಿ ಪಡೆಯಲಿರುವ ನಾಲ್ಕನೇ ಕ್ರಿಕೆಟಿಗ ಎಂಬ ಹಿರಿಮೆಗೆ ಪಾತ್ರವಾಗುತ್ತಿದ್ದಾರೆ. ತೆಂಡೂಲ್ಕರ್‌ ಅವರಿಗೆ 1998ರಲ್ಲಿ ಪ್ರಶಸ್ತಿ ಸಂದಿತ್ತು. 2007ರಲ್ಲಿ ಧೋನಿ ಅವರಿಗೆ, 2018ರಲ್ಲಿ ಕೊಹ್ಲಿ ಹಾಗೂ ವೇಟ್‌ಲಿಫ್ಟರ್‌ ಮೀರಾಬಾಯಿ ಚಾನು ಜಂಟಿಯಾಗಿ ಈ ಪ್ರಶಸ್ತಿ ಪಡೆದಿದ್ದರು. ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್‌ ಹಾಗೂ ಹಾಕಿ ದಿಗ್ಗಜ ಸರ್ದಾರ್‌ ಸಿಂಗ್‌ ಅವರನ್ನೊಳಗೊಂಡ ಆಯ್ಕೆ ಸಮಿತಿ ಸಭೆಯು ಇಲ್ಲಿಯ ಭಾರತ ಕ್ರೀಡಾ ಪ್ರಾಧಿಕಾರ (ಸಾಯ್‌) ಕಚೇರಿಯಲ್ಲಿ ಮಂಗಳವಾರ ನಡೆಯಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.