ಈಜುಪಟುಗಳು, ಕೋಚ್‌ಗಳಿಗೆ ಕೆಎಸ್‌ಎ ನೆರವು ಬೆಂಗಳೂರು: ‘ಕೆಎಸ್‌ಎ ಕೇರ್ಸ್‌’ ಎಂಬ ಅಭಿಯಾನದಡಿ ನಿಧಿ ಸಂಗ್ರಹ ಮಾಡಿರುವ ರಾಜ್ಯ ಈಜು ಸಂಸ್ಥೆಯು ಈಜುಪಟುಗಳು ಮತ್ತು ಕೋಚ್‌ಗಳಿಗೆ ಎರಡನೇ ಹಂತದ ನೆರವಿನಡಿ ಹಣ ಮತ್ತು ಆಹಾರ ಪದಾರ್ಥಗಳನ್ನು ವಿತರಿಸಿದೆ. ‌ ಕೋವಿಡ್‌–19ರಿಂದಾಗಿ ಆರು ತಿಂಗಳಿಂದ ಈಜುಕೊಳಗಳನ್ನು ಮುಚ್ಚಲಾಗಿದೆ. ಈಜು ಸ್ಪರ್ಧೆಗಳಿಂದ ಬರುವ ಹಣದಿಂದ ಜೀವನನಿರ್ವಹಣೆ ಮಾಡಿಕೊಳ್ಳುತ್ತಿದ್ದ ಕ್ರೀಡಾಪಟಗಳು ಮತ್ತು ತರಬೇತಿಯನ್ನೇ ಉದ್ಯೋಗವನ್ನಾಗಿ ಮಾಡಿಕೊಂಡಿದ್ದ ಕೋಚ್‌ಗಳು ಇದರಿಂದ ಸಂಕಷ್ಟಕ್ಕೆ ಒಳಗಾಗಿದ್ದರು. ಆಗಸ್ಟ್‌ನಲ್ಲಿ ರಾಜ್ಯದಾದ್ಯಂತ 250 ಕೋಚ್‌ಗಳು ಮತ್ತು ಸಿಬ್ಬಂದಿಗೆ ಅವರ ಹುದ್ದೆಗೆ ಅನುಗುಣವಾಗಿ ₹ 10 ಸಾವಿರ, ₹ ಐದು ಸಾವಿರ, ₹ ಮೂರು ಸಾವಿರ ಮತ್ತು ₹ 1500 ನೀಡಲಾಗಿತ್ತು. ಆಹಾರಪದಾರ್ಥಗಳನ್ನೂ ವಿತರಿಸಲಾಗಿತ್ತು. ‘ಈಜುಕೊಳಗಳನ್ನು ತೆರೆಯಲು ಗೃಹ ಸಚಿವಾಲಯ ಇನ್ನೂ ಅನುಮತಿ ನೀಡಲಿಲ್ಲ. ಆದ್ದರಿಂದ ಅಕ್ಟೋಬರ್‌ ವರೆಗೆ ನೆರವನ್ನು ವಿಸ್ತರಿಸಲು ನಿರ್ಧರಿಸಲಾಗಿದೆ. ಸೆಪ್ಟೆಂಬರ್ 14ರಂದು ಎರಡನೇ ಹಂತದ ನೆರವನ್ನು ನೀಡಲಾಗಿದೆ. ಇನ್ಫೊಸಿಸ್ ಫೌಂಡೇಷನ್‌, ಪ್ರೇಮಾಂಜಲಿ ಫೌಂಡೇಷನ್‌ ಮತ್ತು ಕಿರ್ಲೋಸ್ಕರ್ ಸಿಸ್ಟಮ್ಸ್‌ನವರು ದೊಡ್ಡ ಮಟ್ಟದಲ್ಲಿ ಸಹಾಯಹಸ್ತ ಚಾಚಿದ್ದಾರೆ‘ ಎಂದು ಈಜು ಸಂಸ್ಥೆಯ ಅಧ್ಯಕ್ಷ ಗೋಪಾಲ್ ಹೊಸೂರು ತಿಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.