ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಷಿಪ್‌ ಮುಂದಕ್ಕೆ ನವದೆಹಲಿ: ಡಿಸೆಂಬರ್‌ನಲ್ಲಿ ನಡೆಯಬೇಕಿದ್ದ ರಾಷ್ಟ್ರೀಯ ಚಾಂಪಿಯನ್‌ಷಿಪ್‌ಅನ್ನು ಭಾರತ ಕುಸ್ತಿ ಫೆಡರೇಷನ್‌ (ಡಬ್ಲ್ಯುಎಫ್‌ಐ) 2021ರ ಜನವರಿ ಕೊನೆಯ ವಾರಕ್ಕೆ ಮುಂದೂಡಿದೆ. ಕೋವಿಡ್‌–19 ಪಿಡುಗಿನ ಹಾವಳಿಯ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ‘ಕೋವಿಡ್‌ ಉಂಟುಮಾಡಿರುವ ಸದ್ಯದ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಚಾಂಪಿಯನ್‌ಷಿಪ್‌ ಆಯೋಜಿಸುವುದು ಕಷ್ಟ. ಹೀಗಾಗಿ ಕನಿಷ್ಠ ಒಂದು ತಿಂಗಳು ಮುಂದೂಡಬೇಕಾಯಿತು‘ ಎಂದು ಡಬ್ಲ್ಯುಎಫ್‌ಐ ಸಹಾಯಕ ಕಾರ್ಯದರ್ಶಿ ವಿನೋದ್‌ ತೋಮರ್‌ ಹೇಳಿದ್ದಾರೆ. ಅಂದರೆ ಮುಂದಿನ ವರ್ಷ ಎರಡು ಚಾಂಪಿಯನ್‌ಷಿಪ್‌ಗಳು ನಡೆಯಲಿವೆ. ‘ಈ ಬಾರಿಯ ರಾಷ್ಟ್ರೀಯ ಚಾಂಪಿಯನ್‌ಷಿಪ್ಅನ್ನು ಡಿಸೆಂಬರ್‌ 18ರಿಂದ 20ರವರೆಗೆ ಉತ್ತರ ಪ್ರದೇಶದ ಗೊಂಡಾದಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಇನ್ನಷ್ಟು ರಾಜ್ಯಗಳು ಟೂರ್ನಿಯ ಆಯೋಜನೆಗೆ ಆಸಕ್ತಿ ತೋರಿದರೆ, ತಾಣ ಬದಲಾಗಬಹುದು‘ ಎಂದೂ ತೋಮರ್‌ ನುಡಿದರು. ‘ಡಿಸೆಂಬರ್‌ 12ರಿಂದ 18ರವರೆಗೆ ಸರ್ಬಿಯಾದ ಬೆಲ್‌ಗ್ರೇಡ್‌ನಲ್ಲಿ ನಡೆಯಲಿರುವ ವಿಶ್ವಕಪ್‌ ಟೂರ್ನಿಗೆ ಭಾರತ ತಂಡವನ್ನು ಕಳುಹಿಸಿಕೊಡಲಾಗಿವುದು‘ ಎಂದು ಡಬ್ಲ್ಯುಎಫ್‌ಐ ಅಧಿಕಾರಿಯೊಬ್ಬರು ತಿಳಿದ್ದಾರೆ. ‘ನವದೆಹಲಿಯಲ್ಲಿ ಫೆಬ್ರುವರಿಯಲ್ಲಿ ನಡೆಯಲಿರುವ ಏಷ್ಯನ್‌ ಚಾಂಪಿಯನ್‌ಷಿಪ್‌ಗೆ ಆಯ್ಕೆ ಟ್ರಯಲ್ಸ್ ನಡೆಸದಿರಲು ನಿರ್ಧರಿಸಲಾಗಿದ್ದು, ಅದೇ ತಂಡವನ್ನು ಬೆಲ್‌ಗ್ರೇಡ್‌ಗೆ ಕಳುಹಿಸಲಾಗುವುದು. ಬಜರಂಗ್‌ ಪುನಿಯಾ (65 ಕೆಜಿ ವಿಭಾಗ), ವಿನೇಶಾ ಪೋಗಟ್‌ (ಮಹಿಳೆಯರ 53 ಕೆಜಿ ವಿಭಾಗ), ಜೀತೇಂದರ್‌ ಕುಮಾರ್‌ (74 ಕೆಜಿ) ಹಾಗೂ ಸೋಮವೀರ್‌ ರಾಠಿ (92 ಕೆಜಿ) ಅವರು ಟೂರ್ನಿಯಲ್ಲಿ ಪಾಲ್ಗೊಳ್ಳದಿರಲು ಅನುಮತಿ ಕೇಳಿದ್ದು, ಒಪ್ಪಿಗೆ ನೀಡಲಾಗಿದೆ‘ ಎಂದು ಅಧಿಕಾರಿ ನುಡಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.