ಉಚಿತ ಶಿಕ್ಷಣ–ಕ್ರೀಡಾ ತರಬೇತಿ: ಶಿಷ್ಯವೇತನಕ್ಕೆ ಅರ್ಜಿ ಆಹ್ವಾನ ಬೆಂಗಳೂರು: ಕ್ರೀಡಾಪಟುಗಳಿಗೆ ಉಚಿತ ಶಿಕ್ಷಣ ಮತ್ತು ಕ್ರೀಡಾ ತರಬೇತಿ ನೀಡುವ ವಿದ್ಯಾರ್ಥಿವೇತನವನ್ನು ಈ ವರ್ಷವೂ ಮುಂದುವರಿಸಲಾಗುವುದು ಎಂದು ಬೆಂಗಳೂರು ಕ್ರೀಡಾಶಾಲೆಯ (ದಿ ಸ್ಪೋರ್ಟ್ಸ್ ಸ್ಕೂಲ್–ಬೆಂಗಳೂರು) ನಿರ್ದೇಶಕ ಶಂಕರ್ ಯು.ವಿ ತಿಳಿಸಿದರು. ಶುಕ್ರವಾರ ವೆಬಿನಾರ್‌ನಲ್ಲಿ ಈ ಮಾಹಿತಿ ನೀಡಿದ ಅವರು ಈ ವರ್ಷ 60 ಮಂದಿಗೆ ಅವಕಾಶವಿದೆ. ಜನವರಿಯಲ್ಲಿ ಆಯ್ಕೆ ನಡೆಯಲಿದ್ದು 12, 14 ಮತ್ತು 16 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಇದರ ಸೌಲಭ್ಯ ಸಿಗಲಿದೆ ಎಂದರು. ಕನಕಪುರ ರಸ್ತೆಯ 27 ಎಕರೆ ಜಾಗದಲ್ಲಿ ಶಾಲೆ ಇದ್ದು ನಾಲ್ಕನೇ ತರಗತಿಯಿಂದ ಪದವಿ ವರೆಗೆ ಶಿಕ್ಷಣ ನೀಡಲಾಗುತ್ತದೆ. ಶಿಕ್ಷಣ ಮತ್ತು ಕ್ರೀಡೆಗೆ ಜೊತೆಯಾಗಿ ಸಮಯ ಮೀಸಲಿಡಲು ಆಗದಂಥ ಪರಿಸ್ಥಿತಿ ಭಾರತದಲ್ಲಿ ಇದೆ. ಇದಕ್ಕೆ ಪರಿಹಾರ ಈ ಶಾಲೆಯಲ್ಲಿದೆ.ಫುಟ್‌ಬಾಲ್‌, ಬ್ಯಾಸ್ಕೆಟ್‌ಬಾಲ್‌, ಬ್ಯಾಡ್ಮಿಂಟನ್ ಮತ್ತು ಕ್ರಿಕೆಟ್‌ನಲ್ಲಿ ತರಬೇತಿ ನೀಡಲಾಗುತ್ತದೆ. ಶಿಕ್ಷಣ ಮತ್ತು ತರಬೇತಿಯಲ್ಲಿ ಪ್ರತಿ ವಿಭಾಗದಲ್ಲಿ ಶೇಕಡಾ 25ರಿಂದ 100ರಷ್ಟು ರಿಯಾಯಿತಿ ಇದೆ. .. ಮೂಲಕ ಅರ್ಜಿ ಸಲ್ಲಿಸಲು ಇದೇ 28 ಕೊನೆಯ ದಿನವಾಗಿದೆ ಎಂದು ಅವರು ತಿಳಿಸಿದರು. ಶಾಲೆಯ ಟೆನಿಸ್ ಅಕಾಡೆಮಿಯ ಪೋಷಕ ರೋಹನ್ ಬೋಪಣ್ಣ ಮಾತನಾಡಿ ಹಿಂದಿನ ವರ್ಷದ ತರಬೇತಿ ಮುಂದುವರಿಯುತ್ತಿದ್ದು ಈ ತಿಂಗಳಾಂತ್ಯದ ವರೆಗೆ ಇರುತ್ತದೆ. ಎಲ್ಲವೂ ಒಂದೇ ಸೂರಿನಡಿ ಸಿಗುತ್ತದೆ ಎಂಬುದು ಈ ಶಾಲೆಯ ವೈಶಿಷ್ಟ್ಯ ಎಂದರು. ಕ್ರಿಕೆಟ್ ಅಕಾಡೆಮಿಯ ಪೋಷಕ ರಾಬಿನ್ ಉತ್ತಪ್ಪ ಕ್ರೀಡೆಯ ಜೊತೆಯಲ್ಲಿ ಶಿಕ್ಷಣ ಮತ್ತು ಜೀವನಮೌಲ್ಯಗಳನ್ನು ಕಲಿಯಲು ಇಲ್ಲಿ ಅತ್ಯುತ್ತಮ ಅವಕಾಶಗಳಿವೆ ಎಂದು ಅಭಿಪ್ರಾಯಪಟ್ಟರು. ಶಾಲೆಯ ಫುಟ್‌ಬಾಲ್ ಅಕಾಡೆಮಿಯ ಪಾಲುದಾರ, ಬೆಂಗಳೂರು ಫುಟ್‌ಬಾಲ್ ಕ್ಲಬ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂದಾರ್ ತಮ್ಹಾನೆ, ಬ್ಯಾಸ್ಕೆಟ್‌ಬಾಲ್ ಕೋಚ್ ಜಾನ್ ಮಹೇಶ್ ರಾವ್ ಇದ್ದರು. ಮಾಹಿತಿಗೆ 858787 8668 ಸಂಪರ್ಕಿಸಬಹುದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.