ಅಭ್ಯಾಸಕ್ಕೆ ಮರಳಿದ ಕಿದಂಬಿ ಶ್ರೀಕಾಂತ್‌ ಬ್ಯಾಂಕಾಕ್‌: ಭಾರತ ಬ್ಯಾಡ್ಮಿಂಟನ್ ಸಂಸ್ಥೆಯು (ಬಿಎಐ) ಕಿದಂಬಿ ಶ್ರೀಕಾಂತ್ ಅವರ ಕ್ವಾರಂಟೈನ್ ಅವಧಿಯನ್ನು ಒಂದು ವಾರಕ್ಕೆ ಕಡಿತಗೊಳಿಸಿದ್ದರಿಂದ ಅವರು ಭಾನುವಾರ ಅಭ್ಯಾಸಕ್ಕೆ ಮರಳಿದ್ದಾರೆ. ಸಹ ಆಟಗಾರ ಬಿ.ಸಾಯಿ ಪ್ರಣೀತ್ ಅವರಿಗೆ ಕೋವಿಡ್–19 ದೃಢಪಟ್ಟ ಕಾರಣ ಅವರ ಜೊತೆ ರೂಮ್ ಹಂಚಿಕೊಂಡಿದ್ದ ಶ್ರೀಕಾಂತ್ ಅವರು ಥಾಯ್ಲೆಂಡ್ ಓಪನ್ ಟೂರ್ನಿಯಿಂದ ಹಿಂದೆ ಸರಿಯಬೇಕಾಯಿತು. ಅವರಿಗೆ 14 ದಿನಗಳ ಕ್ವಾರಂಟೈನ್ ಅವಧಿ ಪೂರ್ಣಗೊಳಿಸುವಂತೆ ಸೂಚಿಸಲಾಗಿತ್ತು. ಹೋದ ಸೋಮವಾರ ಶ್ರೀಕಾಂತ್ ಅವರಿಗೆ ಕೋವಿಡ್‌ ಪರೀಕ್ಷೆ ನಡೆಸಲಾಗಿದ್ದು, ಫಲಿತಾಂಶ ’ನೆಗೆಟಿವ್‘ ಬಂದಿತ್ತು. ಭಾರತ ತಂಡದ ಎಲ್ಲ ಆಟಗಾರರಿಗೂ ಸೋಮವಾರ ಕಡ್ಡಾಯ ಕೋವಿಡ್ ಪರೀಕ್ಷೆಗೆ ಒಳಗಾಗುವಂತೆ ಬಿಎಐ ಸೂಚಿಸಿದೆ. ಥಾಯ್ಲೆಂಡ್ ಓಪನ್ ಟೂರ್ನಿಯಿಂದ ಹಿಂದೆ ಸರಿಯುವ ಮೊದಲು, ಮೊದಲ ಸುತ್ತಿನಲ್ಲಿ ಶ್ರೀಕಾಂತ್‌ 21–11, 21–11ರಿಂದ ಥಾಯ್ಲೆಂಡ್‌ನ ಸಿಥ್ಥಿಕೋಮ್‌ ತಮಾಸಿನ್ ಅವರನ್ನು ಪರಾಭವಗೊಳಿಸಿದ್ದರು. ಹೋದ ವಾರ ಕೊನೆಗೊಂಡಿದ್ದ ಮೊದಲ ಥಾಯ್ಲೆಂಡ್ ಓಪ‍ನ್‌ ಟೂರ್ನಿಯಲ್ಲಿ ಬಲಗಾಲಿನ ಮೀನಖಂಡದಲ್ಲಿ ನೋವು ಕಾಣಿಸಿಕೊಂಡಿದ್ದ ಕಾರಣ ಶ್ರೀಕಾಂತ್ ಹಿಂದೆ ಸರಿದಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.