ಸೈಕ್ಲಿಂಗ್‌: ಕರ್ನಾಟಕಕ್ಕೆ ಆರು ಪದಕ ಹುಬ್ಬಳ್ಳಿ: ಹೈದರಾಬಾದ್‌ನಲ್ಲಿ ಶನಿವಾರ ಆರಂಭವಾದ 72ನೇ ಸೀನಿಯರ್, 49ನೇ ಜೂನಿಯರ್‌ ಮತ್ತು 35ನೇ ಸಬ್‌ ಜೂನಿಯರ್‌ ರಾಷ್ಟ್ರೀಯ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್‍ಷಿಪ್‌ನಲ್ಲಿ ಕರ್ನಾಟಕ ತಂಡ ಮೊದಲ ದಿನವಾದ ಶನಿವಾರ ಎರಡು ಚಿನ್ನ ಸೇರಿದಂತೆ ಒಟ್ಟು ಆರು ಪದಕಗಳನ್ನು ಜಯಿಸಿತು. ಜೂನಿಯರ್‌ ವಿಭಾಗದಲ್ಲಿ ಬೆಂಗಳೂರಿನ ಕೀರ್ತಿ ರಂಗಸ್ವಾಮಿ 6 ಕಿ.ಮೀ. ಸ್ಕ್ರಾಚ್‌ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಮೊದಲ ಚಿನ್ನ ತಂದುಕೊಟ್ಟರು. ಇನ್ನೊಂದು ಚಿನ್ನ ಬಾಲಕರ ಸಬ್‌ ಜೂನಿಯರ್‌ ವಿಭಾಗದಲ್ಲಿ ಬಂತು. ಮಲ್ಲಿಕಾರ್ಜುನ ಯಾದವಾಡ, ಪ್ರತಾಪ ಪಡಚಿ, ಸಂಪತ್‌ ಪಾಸ್ಮಲ್‌ ಅವರನ್ನು ಒಳಗೊಂಡ ತಂಡ ಈ ಸಾಧನೆ ಮಾಡಿತು.ಮಹಿಳೆಯರ ಸೀನಿಯರ್ ವಿಭಾಗದ 10 ಕಿ.ಮೀ. ಸ್ಕ್ರಾಚ್‌ ಸ್ಪರ್ಧೆಯಲ್ಲಿ ಜಮಖಂಡಿಯ ದಾನಮ್ಮ ಚಿಚಖಂಡಿ, ಪುರುಷರ ಸೀನಿಯರ್‌ ವಿಭಾಗದ 15 ಕಿ.ಮೀ. ಸ್ಕ್ರಾಚ್‌ ಸ್ಪರ್ಧೆಯಲ್ಲಿ ವಿಶ್ವನಾಥ ಗಡಾದ, ಜೂನಿಯರ್‌ ಬಾಲಕರ ವಿಭಾಗದ 10 ಕಿ.ಮೀ. ಸ್ಕ್ರಾಚ್‌ ಸ್ಪರ್ಧೆಯಲ್ಲಿ ವಿಜಯಪುರದ ಗಣೇಶ ಕುಡಿಗಾನೂರ ಮತ್ತು ಜೂನಿಯರ್‌ ಬಾಲಕಿಯರ ತಂಡ ವಿಭಾಗ ಕಂಚಿನ ಪದಕಗಳನ್ನು ಗೆದ್ದುಕೊಂಡಿತು. ತಂಡದಲ್ಲಿ ಕೀರ್ತಿ ರಂಗಸ್ವಾಮಿ, ಚೈತ್ರಾ ಬೋರ್ಜಿ ಮತ್ತು ಅಂಕಿತಾ ರಾಠೋಡ ಇದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.