T20 | ಭಾರತದ ಇಬ್ಬರು ಅಂಪೈರ್‌ಗಳಿಗೆ ಅವಕಾಶ, ಶ್ರೀನಾಥ್‌ ಮ್ಯಾಚ್‌ ರೆಫ್ರಿ ದುಬೈ: ಅಂಪೈರ್‌ಗಳಾದ ನಿತಿನ್ ಮೆನನ್ ಮತ್ತು ಜಯರಾಮನ್ ಮದನಗೋಪಾಲ್ ಜೊತೆ ಐಸಿಸಿ ಮ್ಯಾಚ್‌ ರೆಫ್ರಿ ಜಾವಗಲ್ ಶ್ರೀನಾಥ್ ಅವರು, ಮುಂದಿನ ತಿಂಗಳು ಅಮೆರಿಕ ಮತ್ತು ವೆಸ್ಟ್‌ ಇಂಡೀಸ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಕಾರ್ಯನಿರ್ವಹಿಸಲಿರುವ ಭಾರತದ ಪ್ರತಿನಿಧಿಗಳಾಗಿದ್ದಾರೆ. ಜೂನ್‌ ಒಂದರಿಂದ ನಡೆಯುವ ಟಿ 20 ವಿಶ್ವಕಪ್‌ ಟೂರ್ನಿಗಾಗಿ ಐಸಿಸಿ 20 ಮಂದಿ ಅಂಪೈರ್‌ಗಳು ಮತ್ತು ಆರು ಮಂದಿ ಮ್ಯಾಚ್‌ ರೆಫ್ರಿಗಳ ಪಟ್ಟಿಯನ್ನು ಶುಕ್ರವಾರ ಪ್ರಕಟಿಸಿದೆ. ಒಟ್ಟು 9 ಸ್ಥಳಗಳಲ್ಲಿ ವಿಶ್ವಕಪ್‌ನ 55 ಪಂದ್ಯಗಳು ನಡೆಯಲಿವೆ. ಜಮದನಗೋಪಾಲ್‌ ಅವರಿಗೆ ಐಸಿಸಿ ಟೂರ್ನಿಯ ಸೀನಿಯರ್‌ ವಿಭಾಗದಲ್ಲಿ ಇದು ಮೊದಲ ಅವಕಾಶವಾಗಿದೆ. ಅವರ ಜೊತೆ ಇನ್ನೂ ನಾಲ್ಕು ಮಂದಿ ಪದಾರ್ಪಣೆ ಮಾಡಲಿದ್ದಾರೆ. ರಿಚರ್ಡ್‌ ಇಲಿಂಗ್‌ವರ್ತ್, ಕುಮಾರ ಧರ್ಮಸೇನ, ಕ್ರಿಸ್‌ ಗಫಾನಿ, ರಾಡ್ನಿ ಟಕ್ಕರ್‌, ಅಹ್ಸಾನ್ ರಝಾ, ಜೋಯೆಲ್ ವಿಲ್ಸನ್‌, ಪಾಲ್‌ ರೈಫಲ್ ಪಟ್ಟಿಯಲ್ಲಿರುವ ಪ್ರಮುಖ ಅಂಪೈರ್‌ಗಳಾಗಿದ್ದಾರೆ. ವಿಶ್ವಕಪ್‌ನಲ್ಲಿ ಶ್ರೀನಾಥ್ ಜೊತೆ ಕಾರ್ಯನಿರ್ವಹಿಸುವ ಇತರ ಐವರು ರೆಫ್ರಿಗಳೆಂದರೆ– ರಂಜನ್ ಮದುಗಲೆ (ಶ್ರೀಲಂಕಾ), ಜೆಫ್‌ ಕ್ರೋವ್ (ನ್ಯೂಜಿಲೆಂಡ್‌), ಆ್ಯಂಡ್ರೂ ಪೈಕ್ರಾಫ್ಟ್‌ (ಜಿಂಬಾಬ್ವೆ), ರಿಚೀ ರಿಚರ್ಡ್ಸನ್‌ (ವೆಸ್ಟ್‌ ಇಂಡೀಸ್‌) ಮತ್ತು ಡೇವಿಡ್‌ ಬೂನ್. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.