ಭೇಟಿ ಆಗೋಕೆ ಬಂದು ಬೇಟೆ ಆಗೋದ್ರು: ಡೆಲ್ಲಿ ತಂಡದ ಕಾಲೆಳೆದ ಆರ್‌ಸಿಬಿ ಬೆಂಗಳೂರು: ಪ್ಲೇ ಆಫ್‌ಗೆ ಅರ್ಹತೆ ಪಡೆಯುವ ನಿರ್ಣಾಯಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ವಿರುದ್ಧ ಸುಲಭ ಜಯ ಸಾಧಿಸಿದೆ. ಆ ಮೂಲಕ ಪ್ಲೇ ಆಫ್‌ ಕನಸನ್ನು ಜೀವಂತವಾಗಿಸಿದೆ. ಪಂದ್ಯಕ್ಕೂ ಮೊದಲು ಟ್ವೀಟ್ ಮಾಡಿದ್ದ ಡೆಲ್ಲಿ ತಂಡ, ‘ನಮಸ್ಕಾರ ಬೆಂಗಳೂರು, ಚಿನ್ನಸ್ವಾಮಿಯಲ್ಲಿ ಭೇಟಿ ಆಗೋಣ’ ಎಂದು ಹೇಳಿತ್ತು. ಪಂದ್ಯದ ನಂತರ ಇದಕ್ಕೆ ಪ್ರತಿಕ್ರಿಯಿಸಿರುವ ಬೆಂಗಳೂರು ತಂಡ, ‘ಭೇಟಿ ಆಗೋಕೆ ಬಂದು ಬೇಟೆ ಆಗೋದ್ರು’ ಎಂದು ಹೇಳಿ ಕಾಲೆಳೆದಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯ ಅತ್ಯಂತ ನಿರ್ಣಾಯಕ ಪಂದ್ಯವಾಗಿತ್ತು. ಈ ಪಂದ್ಯದಲ್ಲಿ ಗೆಲ್ಲವುದು ಉಭಯ ತಂಡಗಳಿಗೂ ಮಹತ್ವದಾಗಿತ್ತು. ಆಡಿದ 12 ಪಂದ್ಯಗಳಲ್ಲಿ ಡೆಲ್ಲಿ ತಂಡ 6 ಪಂದ್ಯಗಳನ್ನು ಗೆದ್ದಿತ್ತು. ಆದರೆ ರನ್‌ರೇಟ್‌ ಉತ್ತಮವಾಗಿಲ್ಲದ ಕಾರಣ ಪ್ಲೇ ಆಫ್‌ಗೆ ಪ್ರವೇಶಿಸಬೇಕಾದರೆ ಮುಂದಿನ ಎರಡು ಪಂದ್ಯಗಳಲ್ಲಿ ಜಯ ಗಳಿಸುವುದು ಡೆಲ್ಲಿ ತಂಡಕ್ಕೆ ಅನಿವಾರ್ಯವಾಗಿತ್ತು. ಆದರೆ ಆರ್‌ಸಿಬಿ ಎದುರು ಸೋಲುವ ಮೂಲಕ ಡೆಲ್ಲಿ ತಂಡಕ್ಕೆ ನಿರಾಸೆಯಾಗಿದೆ. ಬೆಂಗಳೂರು ತಂಡದ ಮೇಲೆ ನಿರೀಕ್ಷೆ ಹೆಚ್ಚಿದೆ. ಭೇಟಿ ಆಗೋಕೆ ಬಂದು ಬೇಟೆ ಆಗೋದ್ರು 😌 ://./ ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ತಂಡ 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 187 ರನ್‌ ಗಳಿಸಿತ್ತು. ಈ ಗುರಿಯನ್ನು ಬೆನ್ನಟ್ಟಿದ್ದ ಡೆಲ್ಲಿ ತಂಡವು 19.1 ಓವರ್‌ಗಳಲ್ಲಿ 140 ರನ್ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು. ಆರ್‌ಸಿಬಿಗೆ ಇದು ಸತತ ಐದನೇ ಗೆಲುವಾಗಿದ್ದು, ಇದರೊಂದಿಗೆ ಒಟ್ಟು 12 ಅಂಕ ಗಳಿಸಿದ ತಂಡವು ಐದನೇ ಸ್ಥಾನಕ್ಕೇರಿದೆ. ರಾಜಸ್ಥಾನ ರಾಯಲ್ಸ್ ತಂಡವನ್ನು ಸೋಲಿಸಿ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿರುವ ಚೆನ್ನೈ ಸೂಪರ್ ಕಿಂಗ್ಸ್‌ ವಿರುದ್ಧ ಮುಂದಿನ ಪಂದ್ಯಲ್ಲಿ ಆರ್‌ಸಿಬಿ ಮುಖಾಮುಖಿಯಾಗಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.