ಒಳಾಂಗಣ ಕ್ರಿಕೆಟ್‌ ಅಕಾಡೆಮಿಗೆ ಶಂಕುಸ್ಥಾಪನೆ ನವದೆಹಲಿ: ಈಶಾನ್ಯದ ಆರು ರಾಜ್ಯಗಳಲ್ಲಿ ಒಳಾಂಗಣ ಕ್ರಿಕೆಟ್‌ ಅಕಾಡೆಮಿಗಳಿಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಸೋಮವಾರ ಶಂಕುಸ್ಥಾಪನೆ ನೆರವೇರಿಸಿತು. ಈ ಅಕಾಡೆಮಿಗಳಿಂದ ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್‌ ಮತ್ತು ಸಿಕ್ಕಿಂನ ಆಟಗಾರರಿಗೆ ಇದರಿಂದ ನೆರವಾಗಲಿದೆ. ಈ ಅಕಾಡೆಮಿಗಳು ಶಿಲ್ಲಾಂಗ್‌, ಇಟಾನಗರ, ಕೊಹಿಮಾ, ಐಜಾಲ್, ಇಂಫಾಲ್ ಮತ್ತು ಗ್ಯಾಂಗ್ಟಕ್‌ನಲ್ಲಿ ಅಕಾಡೆಮಿಗಳು ತಲೆಯೆತ್ತಲಿವೆ. ಈಶಾನ್ಯ ಭಾಗದಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ವಿನೂತನ ಅಕಾಡೆಮಿಗಳಿಗೆ ಬಿಸಿಸಿಐನಿಂದ ಶಂಕುಸ್ಥಾಪನೆ ನೆರವೇರಿಸಿದ್ದು, ಸಂತಸ ತಂದಿದೆ ಎಂದು ಜಯ್‌ ಶಾ ‘ಎಕ್ಸ್‌’ನಲ್ಲಿ ಬರೆದಿದ್ದಾರೆ. ಈ ಹಿಂದೆ ಇಲ್ಲಿನ ಕ್ರಿಕೆಟಿಗರು ಮಳೆಗಾಲದ ಅವಧಿಯಲ್ಲಿ ತರಬೇತಿ ಪಡೆಯಲು ಕೋಲ್ಕತ್ತ, ಬೆಂಗಳೂರು, ಚೆನ್ನೈ, ಮುಂಬೈ ಅಥವಾ ಅಹಮದಾಬಾದ್‌ ಕೇಂದ್ರಗಳಿಗೆ ಹೋಗಬೇಕಾಗುತಿತ್ತು. ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯು, ಈಶಾನ್ಯ ಕ್ರಿಕೆಟ್‌ ಅಭಿವೃದ್ಧಿ ಸಮಿತಿಯನ್ನೂ ಸ್ಥಾಪಿಸಿದ್ದು, ಇದಕ್ಕೆ ಬಂಗಾಳ ಕ್ರಿಕೆಟ್‌ ಸಂಸ್ಥೆ ಅಧ್ಯಕ್ಷ ಅವಿಷೇಕ್ ದಾಲ್ಮಿಯಾ ಮುಖ್ಯಸ್ಥರಾಗಿದ್ದಾರೆ. ಈಶಾನ್ಯ ಭಾಗದ ಆರು ರಾಜ್ಯಗಳ ಕ್ರಿಕೆಟಿಗರಿಗೆ ಈ ವಿಶ್ವದರ್ಜೆಯ ಅಕಾಡೆಮಿಯಿಂದ ಲಾಭವಾಗಲಿದೆ. ಒಳಾಂಗಣ ನೆಟ್ಸ್‌, ಒಳಾಂಗಣ ಈಜು ಕೊಳ, ಫಿಟ್ನೆಸ್‌ ಸೆಂಟರ್‌ ಸೇರಿ ವರ್ಷದುದ್ದಕ್ಕೂ ತರಬೇತಿಗೆ ಈ ಅಕಾಡೆಮಿಗಳಲ್ಲಿ ಅವಕಾಶವಾಗಲಿದೆ. ‌ಮಿಜೋರಾಮ್‌ನಲ್ಲಿ ಹೊಸ ಪೆವಿಲಿಯನ್‌ ಕೂಡ ಸ್ಥಾಪಿಸಲಾಗಿದ್ದು, ಈ ಎಲ್ಲ ಮೂಲ ಸೌಲಭ್ಯಗಳ ಮೂಲಕ ದೊಡ್ಡ ಹೆಜ್ಜೆ ಇಡಲಾಗಿದ್ದು, ಮುಂದೆ ಒಳ್ಳೆಯ ದಿನಗಳು ಬರಲಿವೆ ಎಂದು ಅವರು ಹೇಳಿದರು. ಇದೇ ವೇಳೆ ಮಂಡಳಿಯು ಅತ್ಯಾಧುನಿಕ ಸೌಲಭ್ಯವಿರುವ ವಿಸ್ತರಿತ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಯನ್ನು ಬೆಂಗಳೂರಿನಲ್ಲಿ ಅಭಿವೃದ್ಧಿಪಡಿಸುವ ಪ್ರಕ್ರಿಯೆಯನ್ನು ಈಗಾಗಲೇ ಕೈಗೊಂಡಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.