ನಮ್ಮ ಯೋಜನೆಗಳನ್ನು ವಿಫಲಗೊಳಿಸಿದರೆ ಮಾತ್ರ RCBಪ್ಲೇ-ಆಫ್‌ಗೆ: ಬ್ರಾವೊ ಎಚ್ಚರಿಕೆ ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಾವು ಸ್ಪಷ್ಟವಾದ 'ಗೇಮ್ ಪ್ಲ್ಯಾನ್' ಹೊಂದಿದ್ದೇವೆ. ನಮ್ಮ ಯೋಜನೆಗಳನ್ನು ವಿಫಲಗೊಳಿಸಿದರೆ ಮಾತ್ರ ಆರ್‌ಸಿಬಿ ಪ್ಲೇ-ಆಫ್‌ಗೆ ಪ್ರವೇಶಿಸಲು ಸಾಧ್ಯ ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬೌಲಿಂಗ್ ಕೋಚ್ ಡ್ವೇನ್ ಬ್ರಾವೊ ಎಚ್ಚರಿಸಿದ್ದಾರೆ. ಬೆಂಗಳೂರು ಹಾಗೂ ಚೆನ್ನೈ ನಡುವಣ ರೋಚಕ ಪಂದ್ಯ ಇಂದು ನಡೆಯಲಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾತ್ರಿ 7.30ಕ್ಕೆ ಪಂದ್ಯ ಆರಂಭವಾಗಲಿದೆ. ಪ್ಲೇ-ಆಫ್ ತಲುಪುವ ನಿಟ್ಟಿನಲ್ಲಿ ಇತ್ತಂಡಗಳಿಗೂ ಈ ಪಂದ್ಯ ನಿರ್ಣಾಯಕವೆನಿಸಿದೆ. 'ಎದುರಾಳಿ ತಂಡವನ್ನು ಗೌರವಿಸಬೇಕು. ಆರ್‌ಸಿಬಿಯನ್ನು ನಾವು ಗೌರವಿಸುತ್ತೇವೆ. ಎಲ್ಲ ರೀತಿ ಬೌಲಿಂಗ್‌ಗೆ ನಾವು ತಯಾರಿ ನಡೆಸಿದ್ದೇವೆ. ಆರ್‌ಸಿಬಿ ವಿರುದ್ಧ ನಾವು ಉತ್ತಮ ಯೋಜನೆಯನ್ನು ಹೊಂದಿದ್ದೇವೆ. ನಮ್ಮ ಯೋಜನೆಗಳನ್ನು ವಿಫಲಗೊಳಿಲು ಆರ್‌ಸಿಬಿ ಪ್ರಯತ್ನಿಸಬೇಕಾಗುತ್ತದೆ' ಎಂದು ಅವರು ಹೇಳಿದ್ದಾರೆ. ಗಾಯಾಳು ದೀಪರ್ ಚಾಹರ್ ಅನುಪಸ್ಥಿತಿಯಲ್ಲೂ ತಂಡದ ಬೌಲಿಂಗ್ ಪ್ರದರ್ಶನದ ಬಗ್ಗೆ ಬ್ರಾವೊ ಸಂತೃಪ್ತಿ ವ್ಯಕ್ತಪಡಿಸಿದ್ದಾರೆ. 'ಟ್ವೆಂಟಿ-20 ಕ್ರಿಕೆಟ್‌ನಲ್ಲಿ 'ಡೆತ್ ಬೌಲಿಂಗ್' ನಿರ್ಣಾಯಕವೆನಿಸುತ್ತದೆ. ಹೆಚ್ಚಿನ ಸಂದರ್ಭದಲ್ಲಿ ಪಂದ್ಯದ ಫಲಿತಾಂಶವನ್ನೇ ವ್ಯಾಖ್ಯಾನಿಸುತ್ತದೆ' ಎಂದು ಅವರು ಹೇಳಿದ್ದಾರೆ. ಮತ್ತೊಂದೆಡೆ ಆರ್‌ಸಿಬಿ ವಿರುದ್ಧದ ಪಂದ್ಯದ ಎಲ್ಲ ಸವಾಲುಗಳನ್ನು ಎದುರಿಸಲು ಸಜ್ಜಾಗಿದ್ದೇವೆ ಎಂದು ಬ್ರಾವೊ ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.