ಶಿರಾ: ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ ಶಿರಾ: ನಗರದ ಹೊರವಲಯದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣ ಸಲುವಾಗಿ ಕೆ.ಎಸ್.ಸಿ.ಎ ಪ್ರತಿನಿಧಿಗಳ ಜೊತೆ ಶಾಸಕ ಟಿ.ಬಿ‌.ಜಯಚಂದ್ರ ಮಂಗಳವಾರ ಪರಿಶೀಲನೆ ನಡೆಸಿದರು. ಖೇಲೊ ಭಾರತ್ ಯೋಜನೆಯಡಿ ಕ್ರೀಡಾ ಗ್ರಾಮ ನಿರ್ಮಾಣಕ್ಕಾಗಿ ಭೂವನಹಳ್ಳಿ, ಕಲ್ಲುಕೋಟೆಯ ವಿವಿಧೆಡೆ ಸುಮಾರು 100 ಎಕರೆ ಜಮೀನು ಇದ್ದು, ಅಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಅನುಕೂಲವಾಗುವಷ್ಟು ಜಮೀನು ನೀಡಲು ಉದ್ದೇಶಿಸಲಾಗಿದೆ ಎಂದು ಶಾಸಕ ಜಯಚಂದ್ರ ಹೇಳಿದರು. ಗ್ರಾಮೀಣ ಭಾಗದಲ್ಲಿ ಕ್ರೀಡಾಂಗಣ ನಿರ್ಮಾಣವಾದರೆ ಗ್ರಾಮೀಣ ಪ್ರದೇಶದ ಕ್ರೀಡಾಪಟುಗಳಿಗೆ ಅನುಕೂಲವಾಗುವುದು. ಶಿರಾ ರಾಜ್ಯದಲ್ಲಿ ಕೇಂದ್ರ ಸ್ಥಾನದಲ್ಲಿರುವುದರಿಂದ ಎಲ್ಲರಿಗೂ ಅನುಕೂಲವಾಗುವುದು. ಕ್ರೀಡಾಂಗಣಕ್ಕೆ ಬರಲು 100 ಅಡಿ ರಸ್ತೆ ನಿರ್ಮಾಣ ಮಾಡಲಾಗುವುದು. ಸಮೀಪದಲ್ಲಿಯೇ ರೈಲ್ವೆ ನಿಲ್ದಾಣ ಸಹ ನಿರ್ಮಾಣವಾಗಲಿದೆ ಎಂದು ಮಾಹಿತಿ ನೀಡಿದರು. ಕೆ.ಎಸ್.ಸಿ.ಎ ಅಧ್ಯಕ್ಷ ರಘುರಾಮ್ ಭಟ್ ಮಾತನಾಡಿ, ಕ್ರೀಡಾಂಗಣ ನಿರ್ಮಿಸಲು ಈ ಸ್ಥಳ ಸೂಕ್ತವಾಗಿದೆ. ಮುಂದಿನ ವಾರ ಕೆ.ಎಸ್‌.ಸಿ.ಎ ಎಂಜಿನಿಯರ್‌ಗಳ ತಂಡ ಬಂದು ವರದಿ ಕೊಟ್ಟ ಬಳಿಕ ಮುಂದಿನ ಪ್ರಕ್ರಿಯೆ ಆರಂಭಿಸಲಾಗುವುದು. ಶಾಸಕರು ಜಮೀನು ನೀಡಲು ಉತ್ಸುಕರಾಗಿದ್ದಾರೆ ಎಂದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.