T20 | ಭಾರತೀಯ ಆಟಗಾರರಿಂದ ಚೆಂಡು ವಿರೂಪ: ಪಾಕ್ ದಿಗ್ಗಜ ಆರೋಪ ಬೆಂಗಳೂರು: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಗೆಲುವು ಸಾಧಿಸಿದ ಟೀಮ್ ಇಂಡಿಯಾ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತು. ಆದರೆ ಈ ಪಂದ್ಯದಲ್ಲಿ ಭಾರತೀಯ ಆಟಗಾರರು ಚೆಂಡನ್ನು ವಿರೂಪಗೊಳಿಸಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್‌ ತಂಡದ ಮಾಜಿ ನಾಯಕ ಇಂಜಮಾಮ್‌ ಉಲ್‌ ಹಕ್‌ ಗಂಭೀರ ಆರೋಪ ಹೊರಿಸಿದ್ದಾರೆ. ಪಾಕಿಸ್ತಾನದ 24 ನ್ಯೂಸ್ ಚಾನೆಲ್‌‌ನ 'ವರ್ಲ್ಡ್ ಕಪ್ ಹಂಗಾಮಾ' ಕಾರ್ಯಕ್ರಮದಲ್ಲಿ ಇಂಜಮಾಮ್ ಈ ಕುರಿತು ಹೇಳಿಕೆ ನೀಡಿದ್ದಾರೆ. 'ಭಾರತೀಯ ಆಟಗಾರರು ಅದೇನೋ ಮಾಡಿದ್ದಾರೆ. ಹಾಗಾಗಿ ಆಸ್ಟ್ರೇಲಿಯಾದ ಬ್ಯಾಟಿಂಗ್ ವೇಳೆ ಅರ್ಷದೀಪ್ ಸಿಂಗ್ ಅವರಿಗೆ ಚೆಂಡನ್ನು ರಿವರ್ಸ್ ಸ್ವಿಂಗ್ ಮಾಡಲು ಸಾಧ್ಯವಾಯಿತು. ಪಂದ್ಯದ ಅಧಿಕೃತರು ಈ ಕುರಿತು ಕಣ್ಣು ತೆರೆದು ನೋಡಬೇಕು' ಇಂಜಮಾಮ್ ಮನವಿ ಮಾಡಿದ್ದಾರೆ. ಆಸ್ಟ್ರೇಲಿಯಾ ಇನಿಂಗ್ಸ್‌ನ ಮೊದಲ ಓವರ್‌ನಲ್ಲೇ ಡೇವಿಡ್ ವಾರ್ನರ್ ಅವರ ವಿಕೆಟ್ ಅನ್ನು ಅರ್ಷದೀಪ್ ಗಳಿಸಿದರು. ಬಳಿಕ 18ನೇ ಓವರ್‌ನಲ್ಲಿ ಮ್ಯಾಥ್ಯೂ ವೇಡ್ ಹಾಗೂ ಟಿಮ್ ಡೇವಿಡ್ ವಿಕೆಟ್‌ಗಳನ್ನು ಪಡೆದರು. '15ನೇ ಓವರ್‌ನಲ್ಲೇ ಅರ್ಷದೀಪ್‌ಗೆ ಚೆಂಡನ್ನು ರಿವರ್ಸ್ ಸ್ವಿಂಗ್ ಮಾಡಲು ಸಾಧ್ಯವಾಯಿತು. ಹೊಸ ಚೆಂಡು ಅಷ್ಟು ಬೇಗ ರಿವರ್ಸ್ ಸ್ವಿಂಗ್ ಆಗಲು ಹೇಗೆ ಸಾಧ್ಯವಾಯಿತು? 12-13ನೇ ಓವರ್‌ನಲ್ಲೇ ಚೆಂಡು ರಿವರ್ಸ್‌ಗೆ ಸಿದ್ಧವಾಗಿತ್ತು. ಈ ಕುರಿತು ಅಂಪೈರ್‌ಗಳು ಎಚ್ಚರದಿಂದಿರಬೇಕು. ಅರ್ಷದೀಪ್‌ಗೆ ಅಷ್ಟು ಬೇಗನೇ ರಿವರ್ಸ್ ಸ್ವಿಂಗ್ ಮಾಡಲು ಸಾಧ್ಯವಾಗಿದೆ ಎಂದಾದರೆ ಚೆಂಡಿಗೆ ಏನೋ ಮಾಡಲಾಗಿದೆ ಎಂದರ್ಥ' ಎಂದು ಇಂಜಮಾಮ್ ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.