ನಾಯಕತ್ವವನ್ನು ಆನಂದಿಸುತ್ತಿದ್ದೇನೆ, ಹಲವು ನಾಯಕರಿಂದ ಕಲಿತಿದ್ದೇನೆ: ಸೂರ್ಯ ಪಲ್ಲೆಕೆಲೆ (ಶ್ರೀಲಂಕಾ): 'ನಾಯಕತ್ವವನ್ನು ಆನಂದಿಸುತ್ತಿದ್ದೇನೆ, ಕಳೆದ ಕೆಲವು ವರ್ಷಗಳಲ್ಲಿ ಹಲವು ನಾಯಕರಿಂದ ಬಹಳಷ್ಟು ಕಲಿತಿದ್ದೇನೆ' ಎಂದು ಟೀಮ್ ಇಂಡಿಯಾದ ನೂತನ ಟ್ವೆಂಟಿ-20 ನಾಯಕ ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ 2024ರ ಟ್ವೆಂಟಿ-20 ವಿಶ್ವಕಪ್ ಜಯಿಸಿತ್ತು. ಬಳಿಕ ಅವರು ಚುಟುಕು ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ಕಳೆದ ವಾರವಷ್ಟೇ ಸೂರ್ಯಕುಮಾರ್ ಯಾದವ್ ಅವರನ್ನು ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಭಾರತ ತಂಡದ ನಾಯಕರಾಗಿ ಘೋಷಿಸಲಾಗಿತ್ತು. ಟ್ವೆಂಟಿ-20 ವಿಶ್ವಕಪ್‌ನಲ್ಲಿ ಹಾರ್ದಿಕ್ ಪಾಂಡ್ಯ ಭಾರತ ತಂಡದ ಉಪನಾಯಕರಾಗಿದ್ದರು. ಆದರೆ ನೂತನ ಕೋಚ್ ಗೌತಮ್ ಗಂಭೀರ್ ಹಾಗೂ ಆಯ್ಕೆ ಸಮಿತಿಯು ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಸೂರ್ಯ ಅವರನ್ನು ನಾಯಕರಾಗಿ ನೇಮಕಗೊಳಿಸಿತ್ತು. 'ನಾಯಕನಾಗಿಲ್ಲದಿದ್ದರೂ ಮೈದಾನದಲ್ಲಿ ನಾಯಕತ್ವವನ್ನು ಆನಂದಿಸುತ್ತೇನೆ. ವಿವಿಧ ನಾಯಕರಿಂದ ಬಹಳಷ್ಟು ಕಲಿತಿದ್ದೇನೆ' ಎಂದು ಅವರು ಬಿಸಿಸಿಐ ಟಿವಿಗೆ ನೀಡಿದ ಸಂದರ್ಭದಲ್ಲಿ ತಿಳಿಸಿದ್ದಾರೆ. ಚರಿತ ಅಸಲಂಕ ಹಾಗೂ ಸೂರ್ಯಕುಮಾರ್ ಯಾದವ್ (ಪಿಟಿಐ ಚಿತ್ರ) ಗೌತಮ್ ಗಂಭೀರ್ ಅವರ ಜೊತೆಗೆ ಉತ್ತಮ ಬಾಂಧವ್ಯ ಕಾಪಾಡಿಕೊಂಡಿರುವುದಾಗಿ ಸೂರ್ಯ ತಿಳಿಸಿದ್ದಾರೆ. 2014ರಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಪರ ಗಂಭೀರ್ ನಾಯಕತ್ವದ ಅಡಿಯಲ್ಲಿ ಆಡಿರುವುದನ್ನು ನೆನಪಿಸಿಕೊಂಡಿದ್ದಾರೆ. 'ನಮ್ಮಿಬ್ಬರ ನಡುವಣ ಬಾಂಧವ್ಯ ಗಟ್ಟಿಯಾಗಿದೆ. ಅಲ್ಲಿಂದಲೇ ನನಗೆ ಅವಕಾಶಗಳು ದೊರಕಿದ್ದವು. ನಾನು ಹೇಗೆ ಕೆಲಸ ಮಾಡುತ್ತೇನೆ, ನನ್ನ ಮನಸ್ಥಿತಿ ಎಲ್ಲವೂ ಗಂಭೀರ್‌ಗೆ ತಿಳಿದಿದೆ. ಓರ್ವ ಕೋಚ್ ಆಗಿ ಅವರು ಹೇಗೆ ನಿರ್ವಹಿಸಲಿದ್ದಾರೆ ಎಂದು ನನಗೆ ಗೊತ್ತಿದೆ' ಎಂದು ಹೇಳಿದ್ದಾರೆ. 'ಏನೇ ಆದರೂ ವಿನಯತೆಯಿಂದ ಇರಬೇಕು. ಕ್ರಿಕೆಟ್‌ನಿಂದ ನಾನು ಕಲಿತ ಅತ್ಯಂತ ಮುಖ್ಯವಾದ ಪಾಠ ಅದಾಗಿದೆ. ಮೈದಾನದಲ್ಲಿ ಆಗಿರುವುದನ್ನು ಅಲ್ಲಿಯೇ ಬಿಟ್ಟುಬಿಡಬೇಕು. ಯಶಸ್ಸು ಹಾಗೂ ಹಿನ್ನಡೆಯನ್ನು ಒಂದೇ ರೀತಿ ಸ್ವೀಕರಿಸಬೇಕು. ಓರ್ವ ಕ್ರೀಡಾಪಟುವಾಗಿ ಜೀವನದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಬೇಕು' ಎಂದು ಹೇಳಿದ್ದಾರೆ. ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ ಭಾರತ ತಂಡವನ್ನು ಸೂರ್ಯಕುಮಾರ್ ಮುನ್ನಡೆಸುತ್ತಿದ್ದಾರೆ. ಮೊದಲ ಪಂದ್ಯವು ಶನಿವಾರ ನಡೆಯಲಿದೆ. 𝗦𝘂𝗿𝘆𝗮𝗸𝘂𝗺𝗮𝗿 𝗬𝗮𝗱𝗮𝘃 𝘁𝗮𝗸𝗲𝘀 𝗴𝘂𝗮𝗿𝗱 𝗮𝘀 #𝗧𝗲𝗮𝗺𝗜𝗻𝗱𝗶𝗮'𝘀 𝗧𝟮𝟬𝗜 𝗰𝗮𝗽𝘁𝗮𝗶𝗻! 🧢# | @surya_14kumar ../KmWz84jZnP ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.