ವಿಶ್ವಕಪ್ ಜಯದ ಬಳಿಕ ಪತ್ನಿಯೊಂದಿಗೆ ಉಡುಪಿ ದೇವಸ್ಥಾನಕ್ಕೆ ಸೂರ್ಯಕುಮಾರ್ ಭೇಟಿ ಉಡುಪಿ: ಟೀಂ ಇಂಡಿಯಾ ಬ್ಯಾಟರ್‌ ಸೂರ್ಯಕುಮಾರ್ ಯಾದವ್‌ ಮತ್ತು ಪತ್ನಿ ದೇವಿಶಾ ಶೆಟ್ಟಿ ಇಂದು (ಮಂಗಳವಾರ) ಉಡುಪಿ ಜಿಲ್ಲೆಯ ಕಾಪು ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಟಿ20 ಕ್ರಿಕೆಟ್‌ ವಿಶ್ವಕಪ್ ಗೆದ್ದ ಬೆನ್ನಲ್ಲೇ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಸೋಮವಾರ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಸೂರ್ಯಕುಮಾರ್‌ ದಂಪತಿ, ನಿಲ್ದಾಣದಲ್ಲಿಯೇ ಕೇಕ್‌ ಕತ್ತರಿಸುವ ಮೂಲಕ ತಮ್ಮ ಎಂಟನೇ ವರ್ಷದ ಮದುವೆ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ ಮೂಲದವರಾದ ದೇವಿಶಾ ಶೆಟ್ಟಿ ಅವರು, ಟಿ20 ವಿಶ್ವಕಪ್‌ ಗೆದ್ದರೆ ತಮ್ಮ ಪತಿಯೊಂದಿಗೆ ಕಾಪು ಮಾರಿಗುಡಿ ದೇಗುಲಕ್ಕೆ ಭೇಟಿ ನೀಡುವುದಾಗಿ ಹರಕೆ ಹೊತ್ತುಕೊಂಡಿದ್ದರು ಎಂದು ದೇವಸ್ಥಾನ ಪದಾಧಿಕಾರಿಗಳು ತಿಳಿಸಿದ್ದಾರೆ. ದೇವತೆ ಕಾಪು ಮಾರಿಯಮ್ಮನಿಗೆ ಮಲ್ಲಿಗೆ ಹೂವಿನ ಹಾರವನ್ನು ಅರ್ಪಿಸುವ ಮೂಲಕ ಅವರು ದೇವರ ಆಶೀರ್ವಾದ ಪಡೆದರು. ದೇವಿಶಾ ಅವರು ದೇವಸ್ಥಾನದಲ್ಲಿ ತುಳು ಭಾಷೆಯಲ್ಲಿಯೇ ಮಾತನಾಡಿದರು. ಸೂರ್ಯಕುಮಾರ್‌ ಅವರು ಕೂಡ ತುಳುವಿನಲ್ಲಿ ಮಾತನಾಡಲು ಪ್ರಯತ್ನಿಸಿದರು ಎಂದು ಪದಾಧಿಕಾರಿಗಳು ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.