ಮುಂದಿನ ಐಪಿಎಲ್‌ನಲ್ಲಿ ರಿಷಭ್ ಪಂತ್ ಆಡಲಿದ್ದಾರೆ: ಸೌರವ್‌ ಗಂಗೂಲಿ ಕೋಲ್ಕತ್ತ: ಭಾರತ ತಂಡದ ವಿಕೆಟ್‌ ಕೀಪರ್ ರಿಷಭ್ ಪಂತ್ ಅವರು ಗುಣಮುಖರಾಗಿದ್ದು, ಮುಂದಿನ ಐಪಿಎಲ್‌ನಲ್ಲಿ ಆಡಲಿದ್ದಾರೆ ಎಂದು ದೆಹಲಿ ಕ್ಯಾಪಿಟಲ್ಸ್‌ ತಂಡದ ನಿರ್ದೇಶಕ ಸೌರವ್‌ ಗಂಗೂಲಿ ಹೇಳಿದರು. ದೆಹಲಿ ತಂಡದ ನಾಯಕರೂ ಆಗಿರುವ ಪಂತ್‌, ಕಳೆದ ವರ್ಷದ ಡಿಸೆಂಬರ್‌ನಲ್ಲಿ ಕಾರು ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದರು. ದೆಹಲಿ– ಡೆಹ್ರಾಡೂನ್ ಹೆದ್ದಾರಿಯ ರೂರ್ಕಿ ಬಳಿ ಅವರು ಚಲಾಯಿಸುತ್ತಿದ್ದ ಮರ್ಸಿಡಿಸ್‌ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿಹೊಡೆದಿತ್ತು. ಜಾಧವಪುರ ವಿಶ್ವವಿದ್ಯಾಲಯದ ಸಾಲ್ಟ್‌ಲೇಕ್‌ ಕ್ಯಾಂಪಸ್‌ ಮೈದಾನದಲ್ಲಿ ದೆಹಲಿ ಕ್ಯಾಪಿಟಲ್ಸ್‌ ತಂಡದ ಆಟಗಾರರ ಜೊತೆ ಪಂತ್‌ ಗುರುವಾರ ಕೆಲ ಕಾಲ ಕಳೆದರು. ‘ಪಂತ್ ಗುಣಮುಖರಾಗಿದ್ದಾರೆ. ಬರುವ ಐಪಿಎಲ್‌ನಲ್ಲಿ ಆಡಲಿದ್ದಾರೆ’ ಎಂದು ಗಂಗೂಲಿ ವರದಿಗಾರರಿಗೆ ತಿಳಿಸಿದರು. ಪಂತ್‌ ಅನುಪಸ್ಥಿತಿಯಲ್ಲಿ ಕಳೆದ ಐಪಿಎಲ್‌ ಆವೃತ್ತಿಯಲ್ಲಿ ಡೇವಿಡ್‌ ವಾರ್ನರ್‌ ತಂಡವನ್ನು ಮುನ್ನಡೆಸಿದ್ದರು. ಆದರೆ ತಂಡ ಕೊನೆಯಿಂದ ಎರಡನೇ ಸ್ಥಾನ ಗಳಿಸಿ ದಯನೀಯ ಹಿನ್ನಡೆ ಕಂಡಿತ್ತು. ‘ಅವರು ಗುರುವಾರ ಅಭ್ಯಾಸ ನಡೆಸಿಲ್ಲ. ಅದಕ್ಕಾಗಿ ಅವರಿಗೆ ಸಾಕಷ್ಟು ಸಮಯವಿದೆ. ಜನವರಿಯೊಳಗೆ (2024) ಅವರು ಇನ್ನಷ್ಟು ಫಿಟ್‌ ಆಗಲಿದ್ದಾರೆ’ ಎಂದು ಗಂಗೂಲಿ ಹೇಳಿದರು. ಐಪಿಎಲ್‌ ಆಟಗಾರರ ಬಿಡ್‌ ಡಿಸೆಂಬರ್‌ 19ರಂದು ದುಬೈನಲ್ಲಿ ನಡೆಯಲಿದೆ. ಬರುವ ಆವೃತ್ತಿಗೆ ತಂಡವನ್ನು ಸಿದ್ಧಗೊಳಿಸುವ ನಿಟ್ಟಿನಲ್ಲಿ ಪಂತ್ ಅವರು ಇಲ್ಲಿಗೆ ಮೂರು ದಿನಗಳ ಭೇಟಿ ನೀಡಿದ್ದಾರೆ. ಪಂತ್‌ ಅವರು ಅಪಘಾತಕ್ಕೆ ಮುನ್ನ ಕಳೆದ ವರ್ಷದ ಡಿಸೆಂಬರ್‌ನಲ್ಲಿ ಮೀರ್‌ಪುರ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಟೆಸ್ಟ್‌ನಲ್ಲಿ ಕೊನೆಯ ಬಾರಿ ರಾಷ್ಟ್ರೀಯ ತಂಡಕ್ಕೆ ಆಡಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.