: ಬ್ಯಾಟಿಂಗ್ ಅಭ್ಯಾಸದ ವೇಳೆ ಶಾರ್ದೂಲ್ ಠಾಕೂರ್ ಭುಜಕ್ಕೆ ಗಾಯ ಸೆಂಚುರಿಯನ್‌: ನೆಟ್ಸ್‌ನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದ ವೇಳೆ ಭಾರತದ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಅವರ ಭುಜಕ್ಕೆ ಚೆಂಡು ಬಿದ್ದು ಪೆಟ್ಟಾಗಿದೆ. ಇದರಿಂದಾಗಿ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯಕ್ಕೆ ಶಾರ್ದೂಲ್ ಠಾಕೂರ್ ಲಭ್ಯರಾಗುವರೇ ಎಂಬ ಅನುಮಾನ ಕಾಡಿದೆ. ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಅವರ ಥ್ರೋಡೌನ್ ಎದುರಿಸುವ ವೇಳೆ ಶಾರ್ದೂಲ್ ಎಡ ಭುಜಕ್ಕೆ ಪೆಟ್ಟಾಗಿತ್ತು. ನೋವನ್ನು ಲೆಕ್ಕಿಸದೇ ಶಾರ್ದೂಲ್ ಬ್ಯಾಟಿಂಗ್ ಮುಂದುವರಿಸಿದರು. ಬಳಿಕ ಐಸ್‌ ಪ್ಯಾಕ್‌ ಕಟ್ಟಿಕೊಂಡು ವಿಶ್ರಾಂತಿ ಪಡೆದರು. ಗಾಯದ ಸಮಸ್ಯೆಯಿಂದಾಗಿ ಶಾರ್ದೂಲ್ ಬೌಲಿಂಗ್ ಅಭ್ಯಾಸ ನಡೆಸಿರಲಿಲ್ಲ. ಶಾರ್ದೂಲ್ ಠಾಕೂರ್ ಗಾಯದ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ಬರಬೇಕಿದೆ. ಅಗತ್ಯವಿದ್ದರೆ ಸ್ಕ್ಯಾನಿಂಗ್ ನಡೆಸುವುದಾಗಿ ತಂಡದ ಮೂಲಗಳು ತಿಳಿಸಿವೆ. ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಕೇಪ್‌ಟೌನ್‌ನಲ್ಲಿ ಜನವರಿ 3ರಂದು ಆರಂಭವಾಗಲಿದೆ. ಸೆಂಚುಯರಿಯನ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಇನಿಂಗ್ಸ್ ಹಾಗೂ 32 ರನ್ ಅಂತರದ ಹೀನಾಯ ಸೋಲಿಗೆ ಶರಣಾಗಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.