ರೆಫರಿಗಳ ನಿಲುವಿಗೆ ರೋಹಿತ್ ಅಸಮಾಧಾನ ಕೇಪ್‌ಟೌನ್‌: ‘ಇಂತಹ ಪಿಚ್‌ಗಳ ಮೇಲೆ ಆಡಲು ನಾವು ಸದಾ ಸಿದ್ಧವಾಗಿ ದ್ದೇವೆ. ಆದರೆ ಭಾರತದಲ್ಲಿ ಪಂದ್ಯಗಳು ನಡೆದಾಗ ಅಲ್ಲಿಯ ಪಿಚ್‌ಗಳ ಬಗ್ಗೆ ಮಾತನಾಡುವವರು ಬಾಯಿ ಮುಚ್ಚಿಕೊಂಡಿರಬೇಕು. ಅಲ್ಲಿ ಮತ್ತು ಇಲ್ಲಿ ಒಂದೇ ಅಭಿಪ್ರಾಯ ಹೊಂದಿರಬೇಕು’ ಎಂದು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಹೇಳಿದರು. ಪಂದ್ಯದ ನಂತರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ‘ಐಸಿಸಿ ಮತ್ತು ಪಂದ್ಯ ರೆಫರಿಗಳು ಇಂತಹ ಸಂಗತಿಗಳನ್ನು ನೋಡಬೇಕು. ಪಿಚ್‌ಗಳಿಗೆ ರೇಟಿಂಗ್ ಕೋಡುವಾಗ ನೈಜ ಸಂಗತಿಯನ್ನು ನೋಡಬೇಕು. ಆತಿಥ್ಯ ವಹಿಸುವ ದೇಶವನ್ನು ನೋಡಿ ರೇಟಿಂಗ್ ಕೊಡಬಾರದು. ಇಂತಹ ಪಿಚ್‌ನಲ್ಲಿ ಆಡಿರುವುದಕ್ಕೆ ನಮಗೆ ಹೆಮ್ಮೆ ಇದೆ. ಆದರೆ ಎಲ್ಲೆಡೆಯೂ ಇಂತ ತಟಸ್ಥ ನಿಲುವು ಇರುವುದು ಮುಖ್ಯ‘ ಎಂದರು. ‘ಭಾರತದಲ್ಲಿ ಟೆಸ್ಟ್ ಪಂದ್ಯಗಳು ನಡೆದಾಗ ಪಿಚ್‌ಗಳಲ್ಲಿ ಮೊದಲ ದಿನವೇ ಚೆಂಡು ತಿರುವು ಪಡೆಯಲು ಆರಂಭಿಸುತ್ತದೆ. ಆಗ ದೂಳೆಬ್ಬಿಸುವ ಪಿಚ್, ಮೊದಲ ದಿನವೇ ಟರ್ನರ್ ಎಂಬ ಟೀಕೆಗಳ ಸುರಿಮಳೆಯೇ ಆಗುತ್ತದೆ’ ಎಂದು ರೋಹಿತ್ ಹೇಳಿದರು. ‘ಈ ಪಂದ್ಯ ನಡೆದ ಪಿಚ್‌ ಅನ್ನು ನಾವೆಲ್ಲರೂ ನೋಡಿದ್ದೇವೆ. ಇದು ಅಪಾಯಕಾರಿ ಮತ್ತು ಕಠಿಣ ಸವಾಲಿನದ್ದು’ ಎಂದು ಸಿಡಿಮಿಡಿ ಗೊಂಡರು. ‘ಈ ಪಿಚ್‌ಗೆ ಯಾವ ರೀತಿಯ ರೇಟಿಂಗ್ ಬರಲಿದೆ ಎಂಬುದನ್ನು ನೋಡಲು ಕಾಯುತ್ತಿದ್ದೇನೆ. ಈಗ ರೇಟಿಂಗ್ ಚಾರ್ಟ್ ನೋಡಲು ಉತ್ಸುಕನಾಗಿದ್ದೇನೆ. ಮುಂಬೈ, ಬೆಂಗಳೂರು, ಕೇಪ್‌ ಟೌನ್ ಮತ್ತು ಸೆಂಚುರಿಯನ್ ಪಿಚ್‌ಗಳು ಬೇರೆ ಬೇರೆಯೇ. ಪಿಚ್‌ಗಳು ವೇಗವಾಗಿ ಕ್ಷೀಣಗೊಳ್ಳುವುವುದು, ಹವಾಮಾನ ವೈಪರಿತ್ಯಗಳು ಬೇರೆ. ಆದರೆ ಇನಿಂಗ್ಸ್ ಆರಂಭದಲ್ಲಿ ಚೆಂಡು ಸ್ಪಿನ್‌ ಆಗತೊಡಗಿದರೆ ಸರಿಯಲ್ಲ ಎಂಬುದು ಅವರ ಧೋರಣೆ. ಚೆಂಡು ಸ್ಪಿನ್ ಆಗಬಾರದು, ಬರೀ ಸ್ವಿಂಗ್ ಆಗಬೇಕು ಎಂದು ಬಯಸುವುದಾದರೆ ತಪ್ಪು’ ಎಂದು ರೋಹಿತ್ ಹೇಳಿದರು. ಈ ಟೆಸ್ಟ್ ಪಂದ್ಯಕ್ಕೆ ಅನುಭವಿ ಕ್ರಿಸ್‌ ಬ್ರಾಡ್ ಅವರು ರೆಫರಿಯಾಗಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.