ಕ್ರಿಕೆಟ್‌: ಭಾರತ ‘ಎ’ ತಂಡಕ್ಕೆ ವಿದ್ವತ್‌ ಕಾವೇರಪ್ಪ ಮುಂಬೈ: ಬಂಗಾಳ ತಂಡದ ಅನುಭವಿ ಆಟಗಾರ ಅಭಿಮನ್ಯು ಈಶ್ವರನ್ ಅವರು ಇಂಗ್ಲೆಂಡ್‌ ಲಯನ್ಸ್ ವಿರುದ್ಧ ಆಡಲಿರುವ ಭಾರತ ‘ಎ’ ತಂಡಕ್ಕೆ ಕ್ಯಾಪ್ಟನ್ ಆಗಿ ನೇಮಕಗೊಂಡಿದ್ದಾರೆ. 13 ಆಟಗಾರರ ತಂಡದಲ್ಲಿ ಕರ್ನಾಟಕದ ಮಧ್ಯಮ ವೇಗದ ಬೌಲರ್ ವಿದ್ವತ್ ಕಾವೇರಪ್ಪ ಸ್ಥಾನ ಪಡೆದಿದ್ದಾರೆ. ತಂಡವು ಅಹಮದಾಬಾದಿನಲ್ಲಿ ಜನವರಿ 12 ಮತ್ತು 13ರಂದು ಎರಡು ಅಭ್ಯಾಸ ಪಂದ್ಯಗಳನ್ನು ಆಡಲಿದೆ. ನಂತರ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಜನವರಿ 17 ರಿಂದ 20ರವರೆಗೆ ನಾಲ್ಕು ದಿನಗಳ ಪಂದ್ಯವನ್ನು ಆಡಲಿದೆ. ತಂಡದಲ್ಲಿ ಸಾಯಿ ಸುದರ್ಶನ್, ರಜತ್ ಪಾಟೀದಾರ್, ಕೆ.ಎಸ್‌.ಭರತ್, ನವದೀಪ್ ಸೈನಿ ಮೊದಲಾದ ಅನುಭವಿಗಳಿದ್ದಾರೆ. ‘ಎ’ ತಂಡದೊಡನೆ ದಕ್ಷಿಣ ಆಫ್ರಿಕಾ ಪ್ರವಾಸ ಹೋಗಿದ್ದ ಬ್ಯಾಟರ್ ಪ್ರದೋಶ್ ರಂಜನ್ ಪಾಲ್ ಮೇಲೆ ಭರವಸೆ ಇಡಲಾಗಿದೆ. ಅವರು ಅಲ್ಲಿ ನಡೆದ ‘ಟೆಸ್ಟ್‌’ ಪಂದ್ಯದಲ್ಲಿ 163 ರನ್ ಗಳಿಸಿದ್ದರು. ಭಾರತ ‘ಎ’ ತಂಡ: ಅಭಿಮನ್ಯು ಈಶ್ವರನ್ (ನಾಯಕ), ಸಾಯಿ ಸುದರ್ಶನ್, ರಜತ್‌ ಪಾಟೀದಾರ್, ಸರ್ಫರಾಜ್ ಖಾನ್, ಪ್ರದೋಶ್ ರಂಜನ್ ಪಾಲ್, ಕೆ.ಎಸ್‌.ಭರತ್‌ (ವಿಕೆಟ್‌ ಕೀಪರ್), ಮಾನವ್ ಸುತಾರ್, ಪುಲ್ಖಿತ್ ನಾರಂಗ್, ನವದೀಪ್ ಸೈನಿ, ತುಷಾರ್ ದೇಶಪಾಂಡೆ, ವಿದ್ವತ್ ಕಾವೇರಪ್ಪ, ಧ್ರುವ್ ಜುರೆಲ್ (ವಿಕೆಟ್ ಕೀಪರ್) ಮತ್ತು ಆಕಾಶ್‌ ದೀಪ್. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.