ಕರ್ನಾಟಕ ತಂಡಕ್ಕೆ ಮರಳುತ್ತಿರುವ ಶ್ರೇಯಸ್ ಗೋಪಾಲ್ ಬೆಂಗಳೂರು: ಲೆಗ್‌ಸ್ಪಿನ್ನರ್ ಶ್ರೇಯಸ್ ಗೋಪಾಲ್ ಅವರು ಕರ್ನಾಟಕ ತಂಡಕ್ಕೆ ಮರಳಲಿದ್ದಾರೆ. ಒಂದು ವರ್ಷದ ಹಿಂದಷ್ಟೇ ಅವರು ಕರ್ನಾಟಕ ತಂಡವನ್ನು ಬಿಟ್ಟು ಕೇರಳ ಸೇರಿಕೊಂಡಿದ್ದರು. ‘ಶ್ರೇಯಸ್ ಗೋಪಾಲ್ ಅವರು ರಾಜ್ಯ ತಂಡಕ್ಕೆ ಮರಳಲಿದ್ದಾರೆ. ಅವರು ಕೇರಳ ಕ್ರಿಕೆಟ್ ಸಂಸ್ಥೆಯಿಂದ ನಿರಾಕ್ಷೇಪಣ ಪತ್ರ ಪಡೆದಿದ್ದಾರೆ’ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ರಘುರಾಮ್ ಭಟ್ ಗುರುವಾರ ತಿಳಿಸಿದ್ದಾರೆ. ‘ಕರ್ನಾಟಕ ತಂಡವನ್ನು ಪ್ರತಿನಿಧಿಸುವುದಾಗಿ ಶ್ರೇಯಸ್ ಹೇಳಿದ್ದಾರೆ. ಮೂರು ಮಾದರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಅವರು ಲಭ್ಯವಾಗಲಿದ್ದಾರೆಂದು ಆಯ್ಕೆ ಸಮಿತಿಗೂ ತಿಳಿಸಲಾಗಿದೆ’ ಎಂದು ಭಟ್ ಹೇಳಿದರು. 82 ‍ಪ್ರಥಮ ದರ್ಜೆ ಪಂದ್ಯಗಳಲ್ಲಿ ಆಡಿರುವ ಶ್ರೇಯಸ್ 234 ವಿಕೆಟ್ ಗಳಿಸಿದ್ದಾರೆ. 3409 ರನ್‌ ಗಳಿಸಿದ್ದಾರೆ. ‘ಕರ್ನಾಟಕ ತಂಡಕ್ಕೆ ಮರಳುತ್ತಿರುವುದಕ್ಕೆ ಬಹಳ ಸಂತಸವಾಗುತ್ತಿದೆ. ತಂಡಕ್ಕೆ ಉತ್ತಮವಾದ ಕಾಣಿಕೆ ನೀಡುವುದು ನನ್ನ ಕರ್ನವ್ಯ. ಹೆಚ್ಚು ವಿಕೆಟ್‌ಗಳನ್ನು ಗಳಿಸುವುದು ಹಾಗೂ ರನ್‌ ಪೇರಿಸುವ ಮೂಲಕ ತಂಡಕ್ಕೆ ಆಸರೆಯಾಗುತ್ತೇನೆ ’ ಎಂದು ಶ್ರೇಯಸ್ ಪ್ರಜಾವಾಣಿಗೆ ತಿಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.