ಸಾಮರ್ಥ್ಯದ ಮೇಲೆ ನಂಬಿಕೆಯಿಂದ ಗೆಲುವು: ಆರ್‌ಸಿಬಿ ನಾಯಕಿ ಸ್ಮೃತಿ ಮಂದಾನ ನವದೆಹಲಿ: ‘ಕಳೆದ ವರ್ಷ ಮಹಿಳಾ ಪ್ರೀಮಿಯರ್‌ ಲೀಗ್‌ನ ಒತ್ತಡದ ಸಂದರ್ಭಗಳಲ್ಲಿ ನಮ್ಮ ಸಾಮರ್ಥ್ಯದ ಮೇಲೆ ವಿಶ್ವಾಸ ಹೊಂದಿರದ ಕಾರಣ ಫಲಿತಾಂಶ ನಮಗೆ ಕೈಕೊಟ್ಟಿತು. ಈ ಬಾರಿಯ ಆವೃತ್ತಿಯಲ್ಲಿ ನಾವು ನಮ್ಮ ಸಾಮರ್ಥ್ಯದ ಮೇಲೆ ನಂಬಿಕೆಯಿಡುವಲ್ಲಿ ಯಶಸ್ವಿಯಾದ ಕಾರಣ ಗೆಲ್ಲಲು ಸಾಧ್ಯವಾಯಿತು’ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕಿ ಸ್ಮೃತಿ ಮಂದಾನ ಹೇಳಿದರು. ‘ನಾನು ಕಲಿತ ಒಂದು ವಿಚಾರವೆಂದರೆ ನಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇರಬೇಕು ಎನ್ನುವುದು. ಕಳೆದ ವರ್ಷ ನನ್ನಲ್ಲಿ ಅದರ ಕೊರತೆಯಿತ್ತು’ ಎಂದು ಮಂದಾನ ಹೇಳಿದರು. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಭಾನುವಾರ ರಾತ್ರಿ ಡಬ್ಲ್ಯುಪಿಎಲ್ ಟ್ರೋಫಿ ಜಯಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಎರಡನೇ ಆವೃತ್ತಿಯಲ್ಲಿ ಮಂದಾನ ಟ್ರೋಫಿಯನ್ನು ಗೆದ್ದರೆ, ಹರ್ಮನ್‌ಪ್ರೀತ್‌ ಕೌರ್ ಉದ್ಘಾಟನಾ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರಶಸ್ತಿವರೆಗೆ ಮುನ್ನಡೆಸಿದ್ದರು. ಇದು ಭಾರತೀಯ ಕ್ರಿಕೆಟ್‌ನ ಸಮಗ್ರತೆ ತೋರಿಸುತ್ತದೆ ಎಂದು ಮಂದಾನ ಹೇಳಿದರು. ‘ಕಳೆದ ವರ್ಷ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ನಡುವೆ ಫೈನಲ್ ನಡೆಯುವಾಗ, ಹರ್ಮನ್ ಟ್ರೋಫಿ ಜಯಿಸುತ್ತಾರೆ ಎಂದು ಭಾವಿಸಿದ್ದೆ. ಏಕೆಂದರೆ ಡಬ್ಲ್ಯುಪಿಎಲ್‌ನ ಮೊದಲ ಆವೃತ್ತಿ ಮತ್ತು ಭಾರತ ತಂಡದ ನಾಯಕಿಯಾಗಿ ಅವರು ಗೆಲ್ಲಬೇಕಿತ್ತು. ಎರಡನೇ ಆವೃತಿಯಲ್ಲಿ ಟ್ರೋಫಿ ಗೆದ್ದ ಭಾರತ ತಂಡದ ಎರಡನೇ ನಾಯಕಿ ಆಗಿದ್ದೇನೆ. ಇದು ಕೇವಲ ಆರಂಭ, ಇನ್ನೂ ಬಹಳ ದೂರ ಸಾಗಬೇಕಾಗಿದೆ’ ಎಂದು ಹೇಳಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.