ಮಹಾರಾಜ ಟ್ರೋಫಿ | ಟೈಗರ್ಸ್‌ಗೆ ಮಣಿದ ಲಯನ್ಸ್ ಬೆಂಗಳೂರು: ಮಂಗಳವಾರ ಸಂಜೆ ಸುರಿದ ಮಳೆಯಿಂದಾಗಿ ಅಸ್ತವ್ಯಸ್ತವಾದ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ ತಂಡವು 8 ವಿಕೆಟ್‌ಗಳಿಂದ ಗೆದ್ದಿತು. ಇದರೊಂದಿಗೆ ಮಹಾರಾಜ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಸತತ ನಾಲ್ಕನೇ ಜಯ ಸಾಧಿಸಿತು. ಹಾಲಿ ಚಾಂಪಿಯನ್ ಹುಬ್ಬಳ್ಳಿ ತಂಡವು ಶಿವಮೊಗ್ಗ ಲಯನ್ಸ್ ತಂಡವು 8 ವಿಕೆಟ್‌ಗಳಿಂದ ಜಯಿಸಿತು. ಶಿವಮೊಗ್ಗ ತಂಡಕ್ಕೆ ಜಯದ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ತಂಡವು ಇದುವರೆಗೆ ಆಡಿರುವ ಎಲ್ಲ ನಾಲ್ಕು ಪಂದ್ಯಗಳಲ್ಲಿಯೂ ಸೋತಿದೆ. ಹುಬ್ಬಳ್ಳಿ ತಂಡದ ನಾಯಕ ಮನೀಷ್ ಪಾಂಡೆ ಅವರು ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಶಿವಮೊಗ್ಗ 17 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 137 ರನ್ ಗಳಿಸಿತು. ಹಾರ್ದಿಕ್ ರಾಜ್ (35; 21ಎ, 4X3, 6X2) ಮತ್ತು ಎಸ್‌. ಶಿವರಾಜ್ (24; 6ಎಸೆತ) ಅವರು ತಂಡಕ್ಕೆ ಬಲ ತುಂಬಿದರು. ಆದರೆ ತಂಡವು 17 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 137 ರನ್ ಗಳಿಸಿತು. ಮಳೆ ಸುರಿದಿದ್ದರಿಂದ ಬಹಳ ಹೊತ್ತಿನವರೆಗೂ ಪಂದ್ಯ ಸ್ಥಗಿತವಾಯಿತು. ವಿ.ಜಯದೇವನ್ ಪದ್ಧತಿಯಲ್ಲಿ ಗುರಿಯನ್ನು ಪರಿಷ್ಕರಿಸಲಾಯಿತು. ಇದರಿಂದಾಗಿ ಹುಬ್ಬಳ್ಳಿ ತಂಡಕ್ಕೆ 5 ಓವರ್‌ಗಳಲ್ಲಿ 51 ರನ್‌ಗಳ ಗುರಿ ನೀಡಲಾಯಿತು. ತಂಡದ ಆರಂಭಿಕ ಬ್ಯಾಟರ್ ತಿಪ್ಪಾ ರೆಡ್ಡಿ ಬೇಗನೆ ಔಟಾದರು. ಆದರೆ ಆಸರೆಯಾದ ಮೊಹಮ್ಮದ್ ತಾಹ (35; 12ಎ) ತಂಡವನ್ನು ಗೆಲುವಿನ ದಡ ಸೇರಿಸಿದರು. ಮೊಹಮ್ಮದ್ ಅವರು ಐದು ಸಿಕ್ಸರ್ ಸಿಡಿಸಿದರು. ತಂಡವು 3.2 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ ಜಯದ ಗುರಿ ದಾಟಿತು. ಸ್ಪಿನ್ನರ್ ಕೆ.ಸಿ. ಕಾರಿಯಪ್ಪ (30ಕ್ಕೆ2) ಅವರು ಶಿವಮೊಗ್ಗದ ರೋಹಿತ್ ಮತ್ತು ಶಿವರಾಜ್ ವಿಕೆಟ್‌ಗಳನ್ನು ಗಳಿಸಿದರು. ಇದರಿಂದಾಗಿ ತಂಡಕ್ಕೆ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ. ಸಂಕ್ಷಿಪ್ತ ಸ್ಕೋರು: ಶಿವಮೊಗ್ಗ ಲಯನ್ಸ್: 17 ಓವರ್‌ಗಳಲ್ಲಿ 9ಕ್ಕೆ 137 (ಹಾರ್ದಿಕ್ ರಾಜ್ 35, ಕೆ. ರೋಹಿತ್ 19, ಅಭಿನವ್ ಮನೋಹರ್ 17, ಎಸ್. ಶಿವರಾಜ್ 24, ಕೆ.ಸಿ. ಕಾರಿಯ‍ಪ್ಪ 30ಕ್ಕೆ2) ಹುಬ್ಬಳ್ಳಿ ಟೈಗರ್ಸ್: 3.2 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 51 (ಮೊಹಮ್ಮದ್ ತಹಾ 35, ಟಿ. ಪ್ರದೀಪ್ 14ಕ್ಕ2) ಫಲಿತಾಂಶ: ಹುಬ್ಬಳ್ಳಿ ಟೈಗರ್ಸ್ ತಂಡಕ್ಕೆ 8 ವಿಕೆಟ್‌ಗಳ ಜಯ (ವಿಜೆಡಿ ಪದ್ಧತಿ). ಪಂದ್ಯದ ಆಟಗಾರ: ಕೆ.ಸಿ. ಕಾರಿಯಪ್ಪ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.