ಐದು ಆಟಗಳನ್ನು ಅಧಿಕೃತವಾಗಿ ಗ್ರಾಮೀಣ ಕ್ರೀಡೆಗಳೆಂದು ಗುರುತಿಸಲಾಗಿದೆ: ಸಿಎಂ ಬೆಂಗಳೂರು: ‘ಐದು ಆಟಗಳನ್ನು ಅಧಿಕೃತವಾಗಿ ಗ್ರಾಮೀಣ ಕ್ರೀಡೆಗಳೆಂದು ಗುರುತಿಸಲಾಗಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಬಿಜೆಪಿ ಉತ್ತರ ಜಿಲ್ಲೆಯ ಕಿಸಾನ್‌ ಮೋರ್ಚಾದಿಂದ ಮಲ್ಲೇಶ್ವರದ ಚಂದ್ರಶೇಖರ್‌ ಆಜಾದ್‌ ಆಟ ಮೈದಾನದಲ್ಲಿ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರ 72ನೇ ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಿದ್ದ ‘ನಮೋ ಕಿಸಾನ್‌ ಕಪ್‌’ಗೆ ಚಾಲನೆ ನೀಡಿ ಅವರು ಮಾತನಾಡಿದರು. ‘ಕಬಡ್ಡಿ, ಕೊಕ್ಕೊ, ಕುಸ್ತಿ, ಕಂಬಳ ಹಾಗೂ ಎತ್ತಿನಗಾಡಿ ಓಟದ ಸ್ಪರ್ಧೆಗಳನ್ನು ಗ್ರಾಮೀಣ ಕ್ರೀಡೆಗಳ ಪಟ್ಟಿಗೆ ಸೇರಿಸಲಾಗಿದೆ. ಈ ಕ್ರೀಡೆಗಳಿಗೆ ಉತ್ತೇಜನ ನೀಡಲು ಜಿಲ್ಲಾ, ತಾಲ್ಲೂಕು, ಗ್ರಾಮ ಪಂಚಾಯಿತಿಯಿಂದ ಅನುದಾನ ಸಹ ನೀಡಲಾಗುವುದು’ ಎಂದರು. ‘ಕ್ರೀಡೆ ಮನಸ್ಸಿಗೆ ಸಂತೋಷ, ಉತ್ಸಾಹ ತುಂಬುತ್ತದೆ. ಶಿಸ್ತು, ಉತ್ತಮ ಆರೋಗ್ಯಕ್ಕೂ ಸಹಕಾರಿ’ ಎಂದು ಮುಖ್ಯಮಂತ್ರಿ ಹೇಳಿದರು. ‘ಮೋದಿ ಅವರ ಹೆಸರಿನಲ್ಲಿ ಯಾವುದೇ ಕಾರ್ಯಕ್ರಮ ನಡೆದರೂ ಸ್ಫೂರ್ತಿ ತುಂಬಲಿದೆ. ಮೋದಿ ಅವರು ಯುವಕರಿಗೆ ಸದಾ ಉತ್ಸಾಹ ತುಂಬುತ್ತಾರೆ’ ಎಂದರು. ಇದಕ್ಕೂ ಮೊದಲು ಮುಖ್ಯಮಂತ್ರಿ ಕಬಡ್ಡಿ ಪಂದ್ಯಾವಳಿ ವೀಕ್ಷಿಸಿದರು. ಪುರುಷರ ವಿಭಾಗದ ಮೊದಲ ಕಬಡ್ಡಿ ಪಂದ್ಯದಲ್ಲಿ ಬ್ಯಾಟರಾಯನಪುರ ವಿರುದ್ಧ ಮಲ್ಲೇಶ್ವರ ತಂಡವು ಗೆಲುವು ಸಾಧಿಸಿತು. ಮಹಿಳಾ ವಿಭಾಗದ ಕಬಡ್ಡಿಯಲ್ಲಿ ಕೆ.ಆರ್‌.ಪುರಂ ವಿರುದ್ಧ ಯಶವಂತಪುರ ತಂಡವು ಜಯಿಸಿತು. ಸಂಸದ ಡಿ.ವಿ.ಸದಾನಂದಗೌಡ, ಸಚಿವರಾದ ಹಾಲಪ್ಪ ಆಚಾರ್‌ ಹಾಗೂ ಶಂಕರ ಪಾಟೀಲ್‌ ಮುನೇನಕೊಪ್ಪ, ವಿಧಾನ ಪರಿಷತ್‌ ಸದಸ್ಯ ರವಿಕುಮಾರ್‌ ಹಾಜರಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.